ಪ್ರವಾಹ ಸಂತ್ರಸ್ತರಿಗೆ ಜಪಾನಂದಜಿ ನೆರವು

ಪಾವಗಡ:

ನೆರೆಯ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ರಾಜಂಪೇಟೆ ಪ್ರದೇಶದ ಗುಂಡಲೂರು, ಯೆಗುವಪೇಟ, ರಾಜಪಲ್ಲಿ, ಕುಮಾರಪಲ್ಲಿ, ಪಾಪರಾಜಪಲ್ಲಿ, ಪಲಪತ್ತೂರು, ಮಂಡಪಲ್ಲಿ ಹಾಗೂ ತೊಗರುಪೇಟೆ ಪ್ರದೇಶಗಳಲ್ಲಿ ಎರಡು ನದಿಗಳು ಇದ್ದಕ್ಕಿದ್ದ ಹಾಗೆ ಅಣೆಕಟ್ಟನ್ನು ಒಡೆದುಕೊಂಡು ಅತ್ಯಂತ ಭೀಕರವಾದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಅನೇಕ ಜನರು ದುರ್ಮರಣಕ್ಕೀಡಾಗಿದ್ದಲ್ಲದೆ ಸುಮಾರು 1000ಕ್ಕೂ ಹೆಚ್ಚು ಪಶು-ಪ್ರಾಣಿಗಳು ಅಸುನೀಗಿವೆ. ಇಲ್ಲಿಗೆ ಸ್ವಾಮಿ ಜಪಾನಂದಜೀ ರವರ ನೇತೃತ್ವದ ತಂಡ ತಾ. 29-11-21 ರಂದು ಧಾವಿಸಿ ಸುಮಾರು 1250 ಕುಟುಂಬಗಳಿಗೆ ಎಲ್ಲ ರೀತಿಯ ಪರಿಹಾರ ಯೋಜನೆಯ ಪರಿಕರಗಳನ್ನು ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ವಿಶ್ವ ಹಿಂದೂ ಪರಿಷತ್ತಿನ ಸ್ವಯಂ ಸೇವಕರು ಹೆಚ್ಚಿನ ಉತ್ಸಾಹದಿಂದ ಪೂಜ್ಯ ಸ್ವಾಮೀಜಿಯವರಿಗೆ ಸಹಕಾರ ನೀಡಿದ್ದಾರೆ. ಎರಡು ದಿನಗಳು ಅಲ್ಲಿಯ ನದಿಯ ತಟದಲ್ಲಿರುವ ಪ್ರದೇಶಗಳಲ್ಲಿನ ಭೀಕರ ಪರಿಸ್ಥಿತಿಯನ್ನು ಪೂಜ್ಯ ಸ್ವಾಮಿ ಜಪಾನಂದಜೀ ರವರು ಸ್ವತಃ ಕಂಡು ಕಣ್ಣೀರುಗರೆದಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಕೇವಲ 45 ನಿಮಿಷಗಳಲ್ಲಿ ಮೇಲೆ ತಿಳಿಸಿದ ಗ್ರಾಮಗಳು ಸಂಪೂರ್ಣ ನಿರ್ನಾಮವಾಗಿರುವುದು. ಅಂದರೆ ಪರಿಸ್ಥಿತಿಯನ್ನು ಊಹೆ ಮಾಡಿಕೊಳ್ಳಬಹುದು. ಅಲ್ಲಿಯ ಸಂತ್ರಸ್ತ ಜನರು ಅಳಿದುಳಿದ ಪಾತ್ರೆ ಸರಂಜಾಮುಗಳನ್ನು ಬಟ್ಟ ಬಯಲಿನಲ್ಲಿಟ್ಟುಕೊಂಡು ಹೆಂಗಸರು, ಮಕ್ಕಳು ಹಾಗೂ ವಯಸ್ಸಾದವರೊಂದಿಗೆ ಜೀವನ ಸಾಗಿಸುತ್ತಿರುವುದು ಎಂತಹವರಿಗಾದರೂ ಹೃದಯ ಕರಗುವಂತೆ ಮಾಡಿದೆ. ಅದರಲ್ಲಿಯೂ ಕಾರ್ಮಿಕರ ಗುಡಿಸಲುಗಳಿಗೆ ಸ್ವಾಮೀಜಿಯವರು ಸ್ವತಃ ಭೇಟಿ ಸಾಂತ್ವನ ಹೇಳಿದ್ದು ಮನ ಮಿಡಿಯುವಂತಿತ್ತು.

ಸ್ವಾಮಿ ಜಪಾನಂದಜೀ ರವರ ಪ್ರಕಾರ 2000 ನೆ ಇಸವಿಯಲ್ಲಿ ನಡೆದ ಗುಜರಾತ್ ಭೀಕರ ಭೂಕಂಪ ಸ್ಥಿತಿಯನ್ನು ಇಂದು ನಾವು ರಾಜಂಪೇಟೆ ಪ್ರದೇಶದ ಅನೇಕ ಗ್ರಾಮಗಳಲ್ಲಿ ಕಾಣಬಹುದಾಗಿದೆ. ಮನೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದಲ್ಲದೆ ಸ್ಥಳೀಯ ಸುಮಾರು ಒಂದು ಎಕರೆ ಪ್ರದೇಶದಲ್ಲಿ ವಿರಾಜಮಾನವಾಗಿದ್ದ ಈಶ್ವರನ ದೇವಸ್ಥಾನವು ವಿಗ್ರಹಗಳ ಸಮೇತ ಕೊಚ್ಚಿಕೊಂಡು ಹೋಗಿದೆ ಎಂದಲ್ಲಿ ಪ್ರವಾಹದ ಭೀಕರತೆಯನ್ನು ಊಹಿಸಿಕೊಳ್ಳಬಹುದಾಗಿದೆ.

ದುರದೃಷ್ಟವಶಾತ್ ಕಾರ್ತೀಕ ಮಾಸದ ದೀಪವನ್ನು ಬೆಳಗಿಸಲು ಅಣಿಮಾಡಿಕೊಳ್ಳುತ್ತಿದ್ದ ಅರ್ಚಕರ ಕುಟುಂಬಗಳು ಅಂದರೆ ಸುಮಾರು 10 ಜನರಿದ್ದ ಕುಟುಂಬಗಳು ಪೂರ್ಣವಾಗಿ ಜಲಸಮಾಧಿಯಾಗಿದ್ದನ್ನು ನಾವಿಲ್ಲಿ ಕಾಣಬಹುದಾಗಿತ್ತು. ಇದೇ ಸಂದರ್ಭದಲ್ಲಿ ವರುಣನ ಆರ್ಭಟ ಇನ್ನೂ ನಿಲ್ಲದೆ ಧೋ ಎಂದು ಸುರಿಯುತ್ತಿರುವ ಮಳೆಯಲ್ಲಿಯೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಮ್ಮ ತಂಡದೊಂದಿಗೆ ಸೇವೆ ಸಲ್ಲಿಸುತ್ತಾ ಸ್ಥಳೀಯ ವಿಶ್ವ ಹಿಂದೂ ಪರಿಷತ್ತಿನ ಅಧಿಕಾರಿ ಸತೀಶ್ ಚಂದ್ರ ಹಿರಿಯ ವಕೀಲರು, ಶರತ್‍ಚಂದ್ರ ಎಂಜಿನಿಯರ್, ನರೇಂದ್ರ ಯುವ ಮುಖಂಡರು ಇವರುಗಳ ಸಹಕಾರದಿಂದ ಈ ಹಳ್ಳಿಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯವನ್ನು ಕೈಗೊಂಡರು. ಇನ್ಫೋಸಿಸ್ ಫೌಂಡೇಷನ್‍ನ ಅತ್ಯಮೂಲ್ಯ ಸಹಕಾರದೊಂದಿಗೆ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಇವರ ಸಹಕಾರದೊಂದಿಗೆ ಈ ಯೋಜನೆಯನ್ನು ನೆರವೇರಿಸಲಾಗುತ್ತಿದೆ.

ಪೂಜ್ಯ ಸ್ವಾಮಿ ಜಪಾನಂದಜೀರವರು ಪಲಪತ್ತೂರು ಗ್ರಾಮದ ಬಹುತೇಕ ಜನರು ಗೋಪಾಲಕರಾಗಿದ್ದು ತಮ್ಮ ಗೋವುಗಳನ್ನು ಕಳೆದುಕೊಂಡು ರೋದಿಸುತ್ತಿರುವ ಸ್ಥಿತಿಯನ್ನು ಕಂಡು ಕಾಮಧೇನು ಎಂಬ ಯೋಜನೆಯೊಂದಿಗೆ ಗೋವುಗಳನ್ನು ಕಳೆದುಕೊಂಡ ಬಡ ಕುಟುಂಬಗಳಿಗೆ ಗೋವನ್ನು ನೀಡುವಂತಹ ಒಂದು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಒಟ್ಟಾರೆ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮವು ದೇಶದ ನಾನಾ ಭಾಗಗಳಲ್ಲಿ, ನಾನಾ ರೀತಿಯ ಪ್ರಕೃತಿ ವಿಕೋಪ ಹಾಗೂ ಇನ್ನಿತರ ಸ್ಥಿತಿಗಳಲ್ಲಿ ಸೇವಾ ಯಜ್ಞವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸ್ವಾಮಿ ವಿವೇಕಾನಂದರ ಆದರ್ಶಗಳ ಅನುಷ್ಠಾನ ರೂಪ ಎನ್ನಬಹುದು. ಈ ಯೋಜನೆ ಇನ್ನೂ ಎರಡು ಹಂತಗಳಲ್ಲಿ ನಡೆಯಲಿದ್ದು ಕಡಪ ಹಾಗೂ ಚಿತ್ತೂರು ಜಿಲ್ಲೆಯ ನದಿ ತಟದಲ್ಲಿನ ಗ್ರಾಮಗಳಿಗೆ ಸಹಾಯಹಸ್ತವನ್ನು ನೀಡಲು ಮುಂದಾಗುತ್ತಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link