ಚೆನ್ನೈ:
2021 ರಿಂದ ಬಾಕಿ ಉಳಿದಿರುವ ದಶವಾರ್ಷಿಕ ಜನಗಣತಿಯೊಂದಿಗೆ ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ನಿರ್ಣಯ ಅಂಗೀಕರಿಸಲಾಯಿತು.
ಈ ಸಂಬಂಧ ಇಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಂಡಿಸಿದ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.
ಜಾತಿ ಗಣತಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವುದರಿಂದ ಈ ನಿರ್ಣಯ ಅನಗತ್ಯ ಎಂದು ಆರ್ ಅರುಲ್(ಪಿಎಂಕೆ) ಹೇಳಿದರೂ ಸದನದಲ್ಲಿ ನಿರ್ಣಯವನ್ನು ಅಂಗೀಕರಿಸಿದಾಗ ಅವರು ವಿರೋಧಿಸಲಿಲ್ಲ.
ಸಿಎಂ ಸ್ಟಾಲಿನ್ ಮಂಡಿಸಿದ ನಿರ್ಣಯವು, “ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಶಿಕ್ಷಣ, ಆರ್ಥಿಕತೆ ಮತ್ತು ಉದ್ಯೋಗದಲ್ಲಿ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ನೀತಿಗಳನ್ನು ರೂಪಿಸಲು ಜಾತಿ ಆಧಾರಿತ ಜನಗಣತಿ ಅತ್ಯಗತ್ಯ ಎಂದು ಸದನ ಪರಿಗಣಿಸುತ್ತದೆ. ಆದ್ದರಿಂದ ಈ ಸದನವು ಸರ್ವಾನುಮತದಿಂದ 2021 ರಿಂದ ಬಾಕಿ ಉಳಿದಿರುವ ಜನಗಣತಿಯೊಂದಿಗೆ ಜಾತಿ ಗಣತಿ ಕಾರ್ಯವನ್ನು ತಕ್ಷಣವೇ ಪ್ರಾರಂಭಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ.
ಟಿ ವೇಲ್ಮುರುಗನ್(ಟಿವಿಕೆ) ಮಾತನಾಡಿ, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ನಡೆಸಲು ಸಾಧ್ಯವಾಗದಿದ್ದರೆ, ವನ್ನಿಯಾರ್ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಸುಪ್ರೀಂ ಕೋರ್ಟ್ಕೇಳಿದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಬೇಕು ಎಂದರು.
ಆದಾಗ್ಯೂ, ವನ್ನಿಯಾರ್ಗಳಿಗೆ ಮೀಸಲಾತಿ ಒದಗಿಸಲು ರಾಜ್ಯ ಸರ್ಕಾರವು ಜಾತಿ ಗಣತಿಯನ್ನು ನಡೆಸಬಹುದು ಎಂದು ಆರ್ ಅರುಲ್(ಪಿಎಂಕೆ) ಅವರು ಹೇಳಿದರು.
ರಾಜ್ಯ ಸರ್ಕಾರ ಜಾತಿ ಗಣತಿ ನಡೆಸಬಹುದು ಎಂದು ಬಿಜೆಪಿ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ಅವರು ಹೇಳಿದ್ದಾರೆ. ಡಿಎಂಕೆಯ ಮಿತ್ರಪಕ್ಷಗಳಾದ ಕಾಂಗ್ರೆಸ್, ಸಿಪಿಎಂ, ಸಿಪಿಐ, ಕೊಂಗು ನಾಡು ಮಕ್ಕಳ್ ದೇಶಿಯ ಕಚ್ಚಿ ಮತ್ತು ಎಂಎಂಕೆ ನಿರ್ಣಯವನ್ನು ಬೆಂಬಲಿಸಿದವು.
![](https://prajapragathi.com/wp-content/uploads/2024/06/stalin-1.gif)