ಜಾತಿ ಗಣತಿ ವರದಿ: ಇಂದು ಸಚಿವ ಸಂಪುಟ ಸಭೆ

ಬೆಂಗಳೂರು:

     ಸಚಿವ ಸಂಪುಟದ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯಗಳನ್ನು ಮೂಡಿಸಿರುವ, ನಾನಾ ಜಾತಿ ಸಮುದಾಯಗಳ ನಡುವೆ ಅಭಿಪ್ರಾಯಗಳ ಚಕಮಕಿಗೆ ಕಾರಣವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ  ಭವಿಷ್ಯ ನಿರ್ಧರಿಸಲು ವಿಶೇಷ ಸಂಪುಟ ಸಭೆ  ಇಂದು  ಸಂಜೆ ನಡೆಯಲಿದೆ. ಕಳೆದ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆಯಾಗಿದ್ದು, ಬಳಿಕ ಸಂಪುಟದ ಎಲ್ಲ ಸದಸ್ಯರಿಗೂ ಈ ವರದಿಯ ದತ್ತಾಂಶ, ಪ್ರಮುಖ ಶಿಫಾರಸು ಒಳಗೊಂಡ ಪ್ರತಿಯನ್ನು ನೀಡಲಾಗಿತ್ತು. ಸಚಿವರೆಲ್ಲರೂ ಸಂಪುಟ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸಜ್ಜಾಗಿದ್ದಾರೆ.

     ಕಳೆದೊಂದು ವಾರದಿಂದ ಸಾರ್ವಜನಿಕ ವಲಯದಲ್ಲಿಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಮುಖವಾಗಿ ನಾನಾ ಸಮುದಾಯಗಳ ಸಂಘ, ಸಂಸ್ಥೆಯವರು, ಜಾತಿ ಗಣತಿಯ ಪರ ಇರುವವರು ಮತ್ತು ವಿರುದ್ಧ ಇರುವವರು ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರು ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಮಾಡಿದ್ದಾರೆ. ಮರು ಸಮೀಕ್ಷೆ ಅಗತ್ಯ ಎಂಬ ಒತ್ತಾಯವೂ ಈ ಸಮುದಾಯಗಳಿಂದ ಬಂದಿದೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿಒಕ್ಕಲಿಗ ಸಮಾಜದ ಸಚಿವರು, ಶಾಸಕರ ಸಭೆಯೂ ನಡೆದಿದೆ. ಅತ್ತ ವೀರಶೈವ ಲಿಂಗಾಯತ ಮಹಾಸಭಾ ಕೂಡ ವರದಿಯನ್ನು ವಿರೋಧಿಸುವಂತೆ ತನ್ನ ಸಮಾಜದ ಪ್ರತಿನಿಧಿಗಳಾದ ಸಚಿವರುಗಳಿಗೆ ಸೂಚನೆ ನೀಡಿದೆ.

     ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗದವರು ಈ ವರದಿಯ ಪರವಾಗಿದ್ದಾರೆ. ಈ ಸಂಬಂಧ ಹಿಂದುಳಿದ ಸಂಘಟನೆಗಳ ಮುಖಂಡರು ಮಾಧ್ಯಮಗೋಷ್ಠಿ ನಡೆಸುವ ಮೂಲಕ ಒತ್ತಾಯ ಮಾಡಿದ್ದಾರೆ. ವರದಿ ಸ್ವೀಕರಿಸುವಂತೆ ಸರಕಾರಕ್ಕೂ ಮನವಿ ಸಲ್ಲಿಸಿದ್ದಾರೆ. ಅಹಿಂದ ಸಮುದಾಯಗಳ ಸಚಿವರ ವಿಷಯಕ್ಕೆ ಬಂದರೆ ಸಚಿವ ಸತೀಶ್‌ ಜಾರಕಿಹೊಳಿ, ಈ ವರದಿ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಲಿ ಎಂದು ಹೇಳಿದ್ದಾರೆ. ಬಹುತೇಕರು ಈ ವರದಿಯ ದತ್ತಾಂಶ ಆಧರಿಸಿ ಕ್ರಮ ಕೈಗೊಳ್ಳುವ ಸಂಬಂಧ ನಿರ್ಣಯವಾಗಲಿ ಎಂದು ಅಪೇಕ್ಷಿಸಿದ್ದಾರೆ. ಸಚಿವ ಸಂಪುಟದಲ್ಲೂ ಪರ ಮತ್ತು ವಿರೋಧದ ಎರಡು ಗುಂಪು ಇವೆ.

    ಜಾತಿ ಗಣತಿ ಜಾರಿಯಾದರೆ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲದು ಎಂದು ಹೇಳಲಾಗುತ್ತಿದೆ. ಜಾತಿ ಗಣತಿ ಸಂಬಂಧದಲ್ಲಿ ಸೋರಿಕೆಯಾಗಿರುವ ಅಂಕಿ, ಅಂಶಗಳನ್ನು ಹಲವು ಬಗೆಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ  ಅವರು ಈ ವರದಿ ಜಾರಿಯ ಪರ ಇದ್ದಾರೆ. ಆದರೆ ಒಕ್ಕಲಿಗ ಸಮುದಾಯ ವರದಿಯನ್ನು ವಿರೋಧಿಸುತ್ತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ ನಿಲುವು ಏನು ಎಂಬ ಕುತೂಹಲವಿದೆ.

     ಗುರುವಾರ ಸಂಜೆ 4 ಗಂಟೆಗೆ ಸಂಪುಟ ಸಭೆ ನಿಗದಿಯಾಗಿದ್ದು, ವಿಸ್ತೃತ ಚರ್ಚೆ ನಿರೀಕ್ಷಿಸಲಾಗಿದೆ. ನಿಶ್ಚಿತವಾಗಿಯೂ ಇದು ಹೈವೋಲ್ಟೇಜ್‌ ಸಂಪುಟ ಸಭೆಯಾಗಿದ್ದು, ಸರಕಾರಕ್ಕೂ ಹೈಟೆನ್ಷನ್‌ ಇದೆ. ಪರ, ವಿರೋಧ ಅಭಿಪ್ರಾಯಗಳು ಇಷ್ಟೊಂದು ಪ್ರಖರವಾಗಿರುವಾಗ ತಕ್ಷಣಕ್ಕೆ ನಿರ್ಧಾರಕ್ಕೆ ಬರುವುದು ಸವಾಲು. ಈ ಹಿನ್ನೆಲೆಯಲ್ಲಿ ಸರಕಾರ ನಾನಾ ಆಯ್ಕೆಗಳನ್ನೂ ಮುಕ್ತವಾಗಿಟ್ಟುಕೊಂಡಿದೆ. ಅಧಿವೇಶನದಲ್ಲಿ ಚರ್ಚಿಸುವುದು, ಸಂಪುಟ ಉಪ ಸಮಿತಿ ರಚಿಸುವುದು, ತಜ್ಞರ ಸಮಿತಿಯ ಅಧ್ಯಯನಕ್ಕೆ ಒಪ್ಪಿಸುವುದು, ಮರು ಸಮೀಕ್ಷೆಗೆ ಮುಂದಾಗುವುದರ ಬಗ್ಗೆ ಪರಾಮರ್ಶಿಸಲಾಗುತ್ತಿದೆ.

Recent Articles

spot_img

Related Stories

Share via
Copy link