ಮಧುಗಿರಿ:
ಜೆಡಿಎಸ್ ಪಕ್ಷದವರು ಸಮಯ ಸಾಧಕರು, ಯಾವಾಗ ಹೇಗೆ ಬೇಕಾದರೂ ಬದಲಾವಣೆ ಆಗುತ್ತಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಮಾಡಿರುವ ದ್ರೋಹವನ್ನು ನಮ್ಮ ಜನ ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದ ಎಂಎನ್ಕೆ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳು ಹೆಚ್ಚುತ್ತಿದೆ. ಇದರಿಂದ ಮಹಿಳೆಯರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡುವುದಿಲ್ಲ. ಮೀಸಲಾತಿ ತೆಗೆದು ಹಾಕಲು ಬಿಜೆಪಿ ಮಸಲತ್ತು ಮಾಡುತ್ತಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬುದ್ಧಿ ಕಲಿಸಬೇಕು.
ಪ್ರವಾಹದಿಂದ ರಾಜ್ಯ ತತ್ತರಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೈ ಕಟ್ಟಿ ಕುಳಿತಿದ್ದಾರೆ. ಗ್ರಾಮೀಣ ಅಭಿವೃದ್ಧಿಗೆ ನೀಡುತ್ತಿದ್ದ ಹಣವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಬಿಜೆಪಿ ಪಕ್ಷದವರಿಗೆ ಸ್ಥಳೀಯ ಸಂಘ-ಸಂಸ್ಥೆಗಳ ಮೇಲೆ ವಿಶ್ವಾಸವಿಲ್ಲ. ಆದ್ದರಿಂದಲೇ ತಾ.ಪಂ ಹಾಗೂ ಜಿ.ಪಂ ಚುನಾವಣೆಗಳನ್ನು ಮುಂದೂಡಿದ್ದಾರೆ. ಎಲ್ಲೋ ಇರುವ ಅಭ್ಯರ್ಥಿಯನ್ನು ತಂದು ಇಲ್ಲಿ ಕಣಕ್ಕೆ ಇಳಿಸುತ್ತಾರೆ. ನಂತರ ಅವರು ಕ್ಷೇತ್ರದ ಕಡೆ ತಲೆಯೆ ಹಾಕುವುದಿಲ್ಲ. ಬಿಜೆಪಿ ಹಾಗೂ ಜನತಾ ದಳದ ಅಭ್ಯರ್ಥಿಗಳು ಸಮರ್ಥರಲ್ಲ. ಕೋವಿಡ್ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳ ವಿಧಾನ ಪರಿಷತ್ ಅಭ್ಯರ್ಥಿಗಳು ಜಿಲ್ಲೆಯ ಜನರಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಪ್ರಶ್ನಿಸಿ, ಜಿಲ್ಲೆಯ ಜನರಿಗೆ ಕೊರೊನಾ ಸಂದರ್ಭದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ರಾಜೇಂದ್ರ ಜಿಲ್ಲೆಯ ಜನರಿಗೆ ಮಾಡಿದ ಸಹಾಯ ನಿಮ್ಮಗಳ ಕಣ್ಣು ಮುಂದೆಯೇ ಇದೆ ಎಂದರು.
ಮಾಜಿ ಸಚಿವ ಟಿ.ಬಿ ಜಯಚಂದ್ರ ಮಾತನಾಡಿ, ಸರ್ಕಾರದ ಯಾವುದೇ ಯೋಜನೆ ಅನುಷ್ಠಾನಗಳನ್ನು ಜಾರಿ ಮಾಡಲು ಮೇಲ್ಮನೆ ಸದಸ್ಯರ ಪಾತ್ರ ಮಹತ್ವವಾಗಿದ್ದು, ಅಂತಹ ಮೇಲ್ಮನೆಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಾತಿ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸುವ ಹಾಗೂ ಕೋಮುವಾದ ಬೆಳೆಸುವ ಪಕ್ಷಗಳಿಗೆ ಬುದ್ದಿ ಕಲಿಸಬೇಕು. ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಒಳಒಪ್ಪಂದ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ, ಅವಕ್ಕೆ ತಕ್ಕ ಉತ್ತರ ನೀಡಬೇಕು ಎಂದರು.
ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ವೈಫಲ್ಯತೆಗಳನ್ನು ಮನದಟ್ಟು ಮಾಡಿಕೊಂಡು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡುವುದರ ಜೊತೆಗೆ ವೈಯಕ್ತಿಕವಾಗಿಯೂ ಸಾರ್ವಜನಿಕರಿಗೆ ಸಹಾಯ ಮಾಡಿದ್ದಾರೆ. ತಾಲ್ಲೂಕಿನ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜೇಂದ್ರ ಪರ ಮತ ನೀಡಬೇಕು ಎಂದು ಮತಯಾಚಿಸಿದರು.
ಮಾಜಿ ಶಾಸಕ ಕೆ ಎನ್ ರಾಜಣ್ಣ ಮಾತನಾಡಿ, ನಾವು ಕಳೆದ ಚುನಾವಣೆಯಲ್ಲಿ ಸೋತರೂ ಸಹ ಕ್ಷೇತ್ರದ ಜನತೆಯ ಕಷ್ಟ-ಸುಖಗಳಿಗೆ ಭಾಗಿಯಾಗಿದ್ದೇವೆ. ನಮ್ಮ ಅಧಿಕಾರ ಅವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದೇವೆ ಎಂಬ ತೃಪ್ತಿ ನನಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಶಕ್ತಿ ಮೀರಿ ನಿಮ್ಮ ಸೇವೆ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆಗೆ ಈಗಿನ ಬಿಜೆಪಿ ಸರ್ಕಾರ ಹಣ ನೀಡದೆ ಇರುವುದರಿಂದ ಕಾಮಗಾರಿಗಳು ಕುಂಠಿತವಾಗಿವೆ. ಈ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿ ರಾಜೇಂದ್ರ ಅವರ ಗೆಲುವಿಗೆ ಶ್ರಮಿಸುತ್ತಿದ್ದು, ಮತದಾರರು ಹೆಚ್ಚಿನ ಬಹುಮತ ನೀಡುವ ಮೂಲಕ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಮಾಜಿ ಸಂಸದ ಚಂದ್ರಪ್ಪ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಕೆಎಎಸ್ನಲ್ಲೇ ಸಮಾಜ ಸೇವೆ ಮಾಡಬಹುದಿತ್ತು. ಆದರೆ ಅದಕ್ಕೆ ರಾಜೀನಾಮೆ ನೀಡಿ ವಿಧಾನ ಪರಿಷತ್ತಿಗೆ ಸ್ಪರ್ಧಿಸುತ್ತಿರುವುದು ಏತಕ್ಕೆ ಎಂದು ಜನರೇ ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಬದ್ಧತೆ ಇರುವ ರಾಜಣ್ಣ ಕುಟುಂಬಕ್ಕೆ ಈ ಬಾರಿ ಜನರು ಆಶೀರ್ವಾದ ಮಾಡಲಿದ್ದಾರೆ ಎಂದರು.
ವಿಧಾನಪರಿಷತ್ ಅಭ್ಯರ್ಥಿ ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗಿ ನನ್ನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಸೋತರೂ ಸಹ ಕ್ಷೇತ್ರದ ಜನತೆಯ ಜೊತೆಯಲ್ಲೇ ಇದ್ದೇನೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 450 ಕ್ಕೂ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರು ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದು, ಈ ಚುನಾವಣೆಯಲ್ಲಿ ಅತಿ ಹೆಚ್ಚು ಬಹುಮತ ಬರಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಪಂ ಸದಸ್ಯ ಮಾಜಿ ಜಿ.ಜೆ.ರಾಜಣ್ಣ, ಎಸ್.ಡಿ.ಕೃಷ್ಣಪ್ಪ, ಇಂದಿರಾ ದೇನಾನಾಯ್ಕ್, ಡಿಸಿಸಿ ಬ್ಯಾಂಕ್ ನಿರ್ದೇೀಶಕ ನಾಗೇಶ್ ಬಾಬು, ಪುರಸಭಾ ಅಧ್ಯಕ್ಷ ತಿಮ್ಮರಾಜು, ಮಾಜಿ ಅಧ್ಯಕ್ಷರುಗಳಾದ ಎನ್.ಗಂಗಣ್ಣ, ಎಂ.ಕೆ.ನಂಜುಂಡರಾಜು, ಕೆ.ಪ್ರಕಾಶ್, ಅಯೂಬ್, ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ಮಂಜುನಾಥ್ ಆಚಾರ್, ಲಾಲಾಪೇಟೆ ಮಂಜುನಾಥ್, ಅಲೀಂ, ಪಾವಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಹುಲಿಕುಂಟೆ,
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಲ್ಲಿಕಾರ್ಜುನಯ್ಯ, ರಾಜಗೋಪಾಲ್, ಎನ್ಎಸ್ಯುಐ ಅಧ್ಯಕ್ಷ ಚಂದ್ರಕಾಂತ್, ತಾ.ಪಂ ಮಾಜಿ ಸದಸ್ಯರುಗಳಾದ ಸೊಸೈಟಿ ರಾಮಣ್ಣ, ಜೆ.ಡಿ.ವೆಂಕಟೇಶ್, ಮುಖಂಡರುಗಳಾದ ಸುವರ್ಣಮ್ಮ, ಗೋಪಾಲಯ್ಯ, ಎಂ.ಜಿ.ಶ್ರೀನಿವಾಸ್ಮೂರ್ತಿ, ಭೈರಪ್ಪ, ಬಿ.ಎನ್.ನರಸಿಂಹಮೂರ್ತಿ, ಆದಿನಾರಾಯಣರೆಡ್ಡಿ, ಪಿ.ಟಿ.ಗೋವಿಂದಪ್ಪ, ಎಂ.ಬಿ.ಮರಿಯಣ್ಣ, ವಿ.ಆರ್.ಬಾಸ್ಕರ್, ಸಿದ್ದಾಪುರ ವೀರಣ್ಣ, ಆನಂದ್, ಸಾಧಿಕ್, ಉಮೇಶ್, ಎಸ್ಬಿಟಿ ರಾಮು,ಆನಂದ್, ಸಿದ್ದಾಪುರ ರಂಗಶ್ಯಾಮಣ್ಣ, ಪಿಸಿ ಕೃಷ್ಣಾರೆಡ್ಡಿ, ಸಿದ್ದಗಂಗಪ್ಪ, ಗಂಗರಾಜು ಹಾಗೂ ಮುಂತಾದವರು ಇದ್ದರು.
ಸಾಮಾಜಿಕ ಜಾಲ ತಾಣದಲ್ಲಿ ಜೆಡಿಎಸ್ ಪಕ್ಷದವರು ಹಳೆಯ ವೀಡಿಯೋಗಳನ್ನು ಹರಿಯ ಬಿಟ್ಟಿದ್ದಾರೆ . ಇವೆಕ್ಕೆಲ್ಲಾ ತಲೆ ಕೆಡಿಸಿಕೊಳ್ಳ ಬೇಡಿ. ನಾನು ಮತ್ತು ರಾಜಣ್ಣ ಆಪ್ತ ಮಿತ್ರರು. ನಮ್ಮಿಬ್ಬರಲ್ಲಿ ಮಾನವೀಯತೆಯ ಸಂಪರ್ಕವಿದೆ. ನಾವಿಬ್ಬರು ಸೈದ್ದಾಂತಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದು, ಪಕ್ಷದ ಅಭಿವೃದ್ದಿಗೆ ಶ್ರಮ ವಹಿಸುತ್ತೇವೆ. . ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
-ಡಾ.ಜಿ.ಪರಮೇಶ್ವರ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
