ಬೆಂಗಳೂರು
ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪೆನಿ ನಿಯಮಿತನ ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಮಹತ್ವದ ಸಭೆ ಮಾಡಿದ್ದಾರೆ. ಈ ವೇಳೆ ವಿಜಯಪುರ-ಬೆಂಗಳೂರು ಪ್ರಯಾಣವನ್ನು 10 ಗಂಟೆಗೆ ತಗ್ಗಿಸಲು ಸೂಚನೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಎಂ.ಬಿ ಪಾಟೀಲ್, ರಾಜ್ಯದ ಬಹುತೇಕ ಚಾಲ್ತಿಯಲ್ಲಿರುವ ಹಾಗೂ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಎಲ್ಲ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಲಾಗಿದೆ. ಬೆಂಗಳೂರಿನಿಂದ ವಿಜಯಪುರ ನಡುವಿನ ರೈಲ್ವೆ ಪ್ರಯಾಣ 14-15 ಗಂಟೆಗಳಾಗುತ್ತಿದ್ದು, ಕೆಲವೊಮ್ಮೆ15-16 ಗಂಟೆ ಕೂಡ ಆಗುತ್ತಿದೆ. ಸೂಕ್ತ ಸಲಹೆಗಳನ್ನು ನೀಡಿ ಈ ಪ್ರಯಾಣವನ್ನು 10 ಗಂಟೆಗಳಿಗೆ ಇಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರಮುಖ ಯೋಜನೆಗಳ ಸ್ಥಿತಿಗತಿ ಹಾಗೂ ಸೂಚನೆಗಳು
- ಗದಗ–ವಿಜಯಪುರ ಜೋಡಿ ಮಾರ್ಗ ಯೋಜನೆ ಕೊನೆಯ ಹಂತದಲ್ಲಿದ್ದು, ಬಾಗಲಕೋಟೆ ಸಮೀಪದ ಬಾಕಿ ಇರುವ ಭಾಗಕ್ಕೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.
- ರೈಲ್ವೆ ವಿದ್ಯುದ್ದೀಕರಣ ಯೋಜನೆ ತ್ವರಿತಗತಿಯಲ್ಲಿ ಮುಗಿಸಲು ಸೂಸಿದ್ದು ನಂತರ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಅನುಕೂಲವಾಗಲಿದೆ.
- ಬಾಗಲಕೋಟೆ–ಕುಡಚಿ ಮಾರ್ಗದ ಖಜ್ಜಿದೋಣಿ–ಲೋಕಾಪುರ ಭಾಗದಲ್ಲಿರುವ ತೊಡಕುಗಳನ್ನು ನಿವಾರಿಸಲು ಕ್ರಮವಹಿಸಬೇಕೆಂದು ತಿಳಿಸಲಾಗಿದೆ.
- ಧಾರವಾಡ–ಕಿತ್ತೂರು–ಬೆಳಗಾವಿ ಹೊಸ ಮಾರ್ಗ ಈಗಾಗಲೇ ಮಂಜೂರಾಗಿದ್ದು, ಮೊಮ್ಮಿಗಟ್ಟಿ ಸಮೀಪ ಮಾರ್ಗ ಬದಲಾವಣೆಗಾಗಿ ಭೂಸ್ವಾಧೀನ ವಿಳಂಬವಾಗುತ್ತಿದೆ. ಇದನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಿಶೇಷ ಸಭೆ ಮಾಡುವುದಾಗಿ ತಿಳಿಸಿದ್ದಾರೆ.
- ಲಿಂಗನಬಂಡಿ–ಕುಷ್ಟಗಿ, ಕುಷ್ಟಗಿ–ಜಿಮಲಾಪುರ, ತುಮಕೂರು–ದಾವಣಗೆರೆ ಮಾರ್ಗಗಳ ಪ್ರಗತಿ ಕುರಿತು ಸಮಾಲೋಚನೆ ಮಾಡಿದ್ದಾರೆ.
- ಹುಬ್ಬಳ್ಳಿ–ಅಂಕೋಲಾ ಮಾರ್ಗದ ಮರು ಸಮೀಕ್ಷೆ ಅಂತಿಮಗೊಂಡಿದ್ದು, ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
- ಸಭೆಯಲ್ಲಿ K-RIDE ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಎನ್. ಮಂಜುಳಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
