ನಾಯಕನಹಟ್ಟಿ :
ತಮಿಳಿನಿಂದ ಕನ್ನಡ ಹುಟ್ಟಿತು ಎಂದು ಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ನಟ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ್ಮೇಟಿ ಬಣ ಮತ್ತು ಕರವೇ ಪ್ರವೀಣ್ ಶೆಟ್ಟಿ ಬಣದ ಹೋಬಳಿ ಘಟಕ ಉಪತಹಶೀಲ್ದಾರ್ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಹಿಂದಿನ ಹಳೆಯ ನೆನಪುಗಳನ್ನು ಜೀವನದ ಉದ್ದಕ್ಕೂ ಮರೆಯಬಾರದು, ಕನ್ನಡ ಚಿತ್ರರಂಗ ಉತ್ತಮ ಅವಕಾಶಗಳನ್ನು ಕೊಟ್ಟು ಕನ್ನಡದ ಜನತೆ ಕೈ ಹಿಡಿದಿದ್ದರಿಂದ ಈ ರೀತಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಕೈ ಹಿಡಿಯದಿದ್ದರೇ ನಿಮ್ಮ ಪರಿಸ್ಥಿತಿ ಇಂದು ಏನಾಗುತ್ತಿತ್ತು? ತಮಿಳುನಾಡಿನ ಸಿನಿ ಪ್ರೇಕ್ಷಕರನ್ನು ಮೆಚ್ಚಿಸಿ “ಥಗ್ಲೈಫ್” ಚಿತ್ರಕ್ಕೆ ಉತ್ತಮ ಮನ್ನಣೆ ಪಡೆದುಕೊಳ್ಳುವುದಕ್ಕೆ ದೇವರು ನೀಡಿದ ಎಲಬು ಇಲ್ಲದ ನಾಲಿಗೆಯಲ್ಲಿ ಏನು ಬೇಕಾದರೂ ಮಾತನಾಡಿದರೆ ನಡೆಯುತ್ತದೆ ಎಂಬ ದುರಹಾಂಕಾರ ಬಿಟ್ಟು ಕನ್ನಡ ನಾಡಿನ ಸಮಸ್ತ ಜನೆತೆಗೆ ಹಾಗೂ ಕನ್ನಡ ಭಾಷೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ತಮಿಳು ಚಿತ್ರಗಳನ್ನು ಕರ್ನಾಟಕದಲ್ಲಿ ಪ್ರದರ್ಶನವಾಗದಂತೆ ತಡೆಹಿಡಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಬಿ.ಶಕುಂತಲ, ಕರವೇ ಪ್ರವೀಣ್ಶೆಟ್ಟಿ ಬಣದ ಹೋಬಳಿ ಅಧ್ಯಕ್ಷ ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಬಿ.ಓಬಯ್ಯ, ಸುರೇಶ್, ಎಂ.ಶಿವಮೂರ್ತಿ ಇನ್ನು ಮುಂತಾದವರು ಇದ್ದರು.
ನಂತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ್ಮೇಟಿ ಬಣದ ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷ ಡಾ.ನಾಗರಾಜ್ ಮೀಸೆ ಮಾತನಾಡಿ ಕಮಲ್ಹಾಸನ್ ಚಿತ್ರನಟನಾಗಿ ಬೆಳದದ್ದೇ ನಮ್ಮ ಕನ್ನಡ ಚಿತ್ರರಂಗದಿಂದ ಎಂಬುವುದನ್ನು ಮರೆಯಬಾರದು. ಕನ್ನಡ ನಾಡಿನ ಅನ್ನ ತಿಂದು, ಕನ್ನಡ ನೀರು ಕುಡಿದು ಈಗ ದುರಹಾಂಕಾರಿಯಾಗಿ ಮಾತನಾಡುತ್ತಿದ್ದು ತಿಂದ ಮನೆಗೆ ಕನ್ನ ಹಾಕುವುದನ್ನು ಮೊದಲು ಬಿಡಬೇಕು.
