ಬೆಂಗಳೂರು:
ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ (Kamal Haasan) ಚಿತ್ರಕ್ಕೆ ರಾಜ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರಿಂದ ಥಗ್ ಲೈಫ್ ಬಿಡುಗಡೆಗೆ ರಕ್ಷಣೆ ಕೋರಿ ಕಮಲ್ ಹಾಸನ್ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶರು, ಜೂನ್ 20ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರದ ವಿತರಣೆ ಮತ್ತು ಬಿಡುಗಡೆಗೆ ಅಗತ್ಯ ರಕ್ಷಣೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಿಇಒ ವಿ.ನಾರಾಯಣ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಜೂನ್ 20 ಕ್ಕೆ ಮುಂದೂಡಲಾಗಿದೆ.
ಈ ಮೊದಲು ಅರ್ಜಿ ವಿಚಾರಣೆ ನಡೆದಾಗ, ಕನ್ನಡಿಗರ ಬಳಿ ಕ್ಷಮೆ ಕೇಳಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಪರೋಕ್ಷವಾಗಿ ಕೋರ್ಟ್ ಹೇಳಿತ್ತು. ಹೀಗಾಗಿ ಸದ್ಯಕ್ಕೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಜತೆ ಚರ್ಚೆ ನಡೆಸುತ್ತೇವೆ. ಹೀಗಾಗಿ ಒಂದು ವಾರ ವಿಚಾರಣೆ ಮುಂದೂಡಲು ಥಗ್ ಲೈಫ್ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಪರ ವಕೀಲರು ಮನವಿ ಮಾಡಿದ್ದರು. ಅಲ್ಲದೇ ರಾಜ್ಯದಲ್ಲಿ ʼಥಗ್ ಲೈಫ್ʼ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದರು.
ಇನ್ನು ಪ್ರಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅರ್ಜಿ ಸಲ್ಲಿಕೆ ಮಾಡಿದ್ದು, ತಮ್ಮ ವಾದ ಕೇಳುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ವಿಚಾರಣೆ ವೇಳೆ ಹೈಕೋರ್ಟ್ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಅವರು ‘ಇನ್ನೂ ಕ್ಷಮೆ ಕೇಳಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್.ಬಸವರಾಜ್, ‘ಇಲ್ಲ ಕಮಲ್ ಹಾಸನ್ ಅವರು ಸ್ಟುಪಿಡ್ ಸ್ಟೇಟ್ಮೆಂಟ್ ನೀಡಿದ್ದಾರೆ. ಕರ್ನಾಟಕ, ಕನ್ನಡ ಪದ ಪುರಾಣಗಳಲ್ಲೂ ಬಳಕೆಯಾಗಿದೆ’ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್.ಬಸವರಾಜ್ ಅವರ ‘ಸ್ಟುಪಿಡ್’ ಹೇಳಿಕೆಗೆ ‘ರಾಜ್ಕಮಲ್ ಫಿಲ್ಮ್’ ಪರ ವಕೀಲರು ಆಕ್ಷೇಪ ಹೊರಹಾಕಿದರು. ಬಳಿಕ ಸ್ಟುಪಿಡ್ ಹೇಳಿಕೆಗೆ ಸಾಹಿತ್ಯ ಪರಿಷತ್ ಪರ ವಕೀಲರು ವಿಷಾದ ವ್ಯಕ್ತಪಡಿಸಿದರು. ಸದ್ಯ ಪ್ರಕರಣದ ವಿಚಾರಣೆ ಜೂನ್ 20ಕ್ಕೆ ಮುಂದೂಡಿಕೆ ಆಗಿದೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಸಿನಿಮಾ ರಿಲೀಸ್ ಮಾಡುವುದಿಲ್ಲ ಎಂದು ಕಮಲ್ ಹಾಸನ್ ಫಿಲ್ಮ್ಸ್ ಈ ಮೊದಲು ಹೇಳಿಕೆ ನೀಡಿತ್ತು. ಈಗ ಅದೇ ಹೇಳಿಕೆಯನ್ನು ಮುಂದುವರಿಕೆ ಮಾಡಲಾಗಿದೆ. ಈ ವೇಳೆ ವಿವೇಚನೆ ಬಳಸುವಂತೆ ಮತ್ತೆ ಹೈಕೋರ್ಟ್ ಸಲಹೆ ನೀಡಿದೆ. ಹೀಗಾಗಿ, ಜೂನ್ 20ರವರೆಗೆ ರಾಜ್ಯದಲ್ಲಿ ಸಿನಿಮಾ ರಿಲೀಸ್ ಆಗೋದು ಅನುಮಾನವೇ ಆಗಿದೆ.
