ತುಮಕೂರು:
ಜಿಲ್ಲಾಡಳಿತದ ಕನ್ನಡ ರಾಜ್ಯೋತ್ಸವದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮ ಸ್ಲಗ್: ಕವಾಯಿತು ಆರಂಭ ವಿಸರ್ಜನೆಗೆ ಸಚಿವರ ಅನುಮತಿಯನ್ನು ಕನ್ನಡದಲ್ಲಿ ಕೇಳಿ ಗಮನಸೆಳೆದ ಪೊಲೀಸ್ ತಂಡದ ನಾಯಕ ಅನ್ಯ ಭಾಷೆ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯನ್ನು ಬಳಸಿ ಬೆಳೆಸಬೇಕು ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಕರೆ ನೀಡಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿಂದು ನಡೆದ 66ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಸಂದೇಶ ನೀಡಿದ ಅವರ, ಮಾತೃ ಭಾಷೆಯನ್ನು ಬೆಳೆಸುವುದರ ಜೊತೆ ಜೊತೆಗೇ ನಾಡಿನ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿ ಉನ್ನತ ಶಿಖರಕ್ಕೆ ಕೊಂಡೊಯ್ಯಬೇಕುಎಂದರು.
ಕನ್ನಡ ರಾಜ್ಯೋತ್ಸವದ ಆಚರಣೆ ಹೃದಯದ ಆರಾಧನೆಯಾಗಿದೆ. ಸಂಭ್ರಮದ ಸಂಕೇತವಾಗಿದೆ. ಸ್ಪುಟವಾಗಿ ಕನ್ನಡ ಭಾಷೆಯನ್ನು ಮಾತನಾಡುವ ಕೆಲವೇ ಕೆಲವು ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆಯೂ ಒಂದಾಗಿರುವುದು ಹೆಮ್ಮೆ ಎಂದು ನುಡಿದರು.
ಕರುನಾಡು 1956ರ ನವೆಂಬರ್ 1ರಂದು ಏಕೀಕರಣವಾಗಿದೆ. ಏಕೀಕರಣವಾಗಲು ನಾಡಿನ ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರು ನೀಡಿದ ಕೊಡುಗೆ ಅಪಾರವಾಗಿದೆ. ಇದಕ್ಕೆ ಕಾರಣವಾದ ಮತ್ತು ನಮ್ಮ ನಾಡಿನ ಭೂಪಟದ ಸ್ಪಷ್ಟತೆಯ ಬುನಾದಿಗೆ ತ್ಯಾಗ ಬಲಿದಾನಗಳನ್ನು ಸಂದಾಯ ಮಾಡಿದ ಮಹನೀಯರನ್ನು ನಾವು ಗೌರವದಿಂದ ಸ್ಮರಿಸಬೇಕು. ನಾಡಿನ ಶೈಕ್ಷಣಿಕ ಕ್ರಾಂತಿಗೆ ತ್ರಿವಿಧ ದಾಸೋಹಿ ಲಿಂ.ಡಾ.ಶಿವಕುಮಾರಸ್ವಾಮೀಜಿ ಕೊಡುಗೆ ನೀಡಿದ್ದು.
ಕನ್ನಡ ನಾಡಿನ ಸಾಹಿತ್ಯ, ಸಂಸ್ಕøತಿ, ಕಲೆ, ಶಿಲ್ಪಕಲೆ, ಪರಂಪರೆಗಳೆಲ್ಲವೂ ವಿಶ್ವಮಟ್ಟದ ಮನ್ನಣೆಗೆ ಪಾತ್ರವಾಗಿವೆ ಎಂದರು.
ಜಿಲ್ಲೆಯಲ್ಲಿ ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಹಾಗೂ ವರುಣನ ಕೃಪೆಯಿಂದಾಗಿ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು, ಕಲ್ಪತರು ನಾಡಲ್ಲಿ ಅನೇಕ ವರ್ಷಗಳ ಬಳಿಕ ಹಸಿರುತನ ಮೈದಳೆದಿದೆ. ಕೊರೋನಾ ವಾರಿಯರ್ಸ್ ಹಾಗೂ ಸಾರ್ವಜನಿಕರ ಸಹಕಾರದಿಂದ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯೂ ಮಹಾಮಾರಿ ಕೋವಿಡ್ ಸೋಂಕು ಕ್ಷೀಣಿಸಿದೆ. ಸೋಂಕಿನ ಪ್ರಮಾಣ ಹತೋಟಿಗೆ ಬರಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ. ದೇಶದಲ್ಲಿನ 100 ಸ್ಮಾರ್ಟ್ಸಿಟಿಗಳ ಪೈಕಿ ತುಮಕೂರು ಸ್ಮಾರ್ಟ್ಸಿಟಿ 16ನೇ ಸ್ಥಾನದಲ್ಲಿದೆ. ಹಲವು ಟೀಕೆ-ಟಿಪ್ಪಣಿಗಳ ನಡುವೆಯೂ ತುಮಕೂರು ಸ್ಮಾರ್ಟ್ಸಿಟಿ ಉತ್ತಮ ಪ್ರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಸ್ಮಾರ್ಟ್ಸಿಟಿ ಕಾಮಗಾರಿ ಪೂರ್ಣಗೊಂಡ ಬಳಿಕ ತುಮಕೂರು ಚಿತ್ರಣ ಬದಲಾಗಲಿದೆ ಎಂದು ಹೇಳಿದರು.
ಬೆಂಗಳೂರು ನಂತರ ತುಮಕೂರು ಎಲ್ಲಾ ಕ್ಷೇತ್ರದಲ್ಲೂ ಮಾನ್ಯತೆ ಪಡೆದ ಜಿಲ್ಲೆಯಾಗಲಿದ್ದು, ಕೈಗಾರಿಕಾ ಕ್ಷೇತ್ರದಲ್ಲೂ ಮುಂಚೂಣಿ ಸ್ಥಾನ ಪಡೆಯಲಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಪ್ರಸಕ್ತ ವರ್ಷ 800 ಕೋಟಿ ರೂ.ಗಳ ಬಂಡವಾಳವನ್ನು ಹೂಡಿಕೆ ಮಾಡುವ ನಿರೀಕ್ಷೆ ಹೊಂದಲಾಗಿದೆ. ಅಂತೆಯೇ, ಕೊರಟಗೆರೆ ಮತ್ತು ಮಧುಗಿರಿಯಲ್ಲಿಯೂ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಯಲ್ಲಿ ತೆಂಗು ಬೆಳೆಯನ್ನು ಆಯ್ಕೆ ಮಾಡಲಾಗಿದ್ದು, ತೆಂಗು ಬೆಳೆಯ ಉತ್ಪನ್ನಗಳಿಗೆ ಪೂರಕವಾದ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
ಎತ್ತಿನಹೊಳೆ ನೀರಾವರಿ ಯೋಜನೆಯಿಂದ ಜಿಲ್ಲೆಯು ಜಲ ಸಂಪದ್ಭರಿತವಾಗಲಿದೆ. ಈ ಯೋಜನೆ ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದ್ದು, ಜಿಲ್ಲೆಗೆ ನೀರು ಹರಿಯಲಿದೆ. ಅಂತೆಯೇ, ಭದ್ರಾ ಮೇಲ್ದಂಡೆ ಯೋಜನೆ ಮೂಲಕವೂ ಜಿಲ್ಲೆಗೆ 6 ಟಿಎಂಸಿ ನೀರು ತರುವ ಯೋಜನಾ ಕಾರ್ಯ ವೇಗವಾಗಿ ನಡೆಯುತ್ತಿದೆ. ಆರಂಭದಲ್ಲಿ ಈ ಯೋಜನೆಯಿಂದ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಭಾಗಕ್ಕೆ ನೀರನ್ನು ತರಲಾಗುವುದು. ಬಳಿಕ ಉಳಿದೆಲ್ಲಾ ಭಾಗಕ್ಕೆ ನೀರನ್ನು ಹರಿಸಲಾಗುವುದು. ಈ ಎರಡೂ ಯೋಜನೆಗಳಿಂದ ಜಿಲ್ಲೆಯ ನೀರಿನ ಬೇಡಿಕೆ ಈಡೇರಲಿದೆ ಎಂದು ಹೇಳಿದರು.
ಎಣ್ಣೆಕಾಳುಗಳ ಜಿಲ್ಲೆಯನ್ನಾಗಿಸಬೇಕು: ಮೂಸಂಬಿ ಮತ್ತು ಡ್ರಾಗನ್ ಬೆಳೆಗೂ ಜಿಲ್ಲೆಯಲ್ಲಿ ಹೆಚ್ಚು ಆದ್ಯತೆ ನೀಡಲಾಗಿದ್ದು, ಎಣ್ಣೆ ಕಾಳುಗಳ ಬೆಳೆಗೂ ಸಹ ಉತ್ತೇಜನ ನೀಡಲು ಕ್ರಮವಹಿಸಲಾಗಿದೆ. ತುಮಕೂರು ಜಿಲ್ಲೆಯನ್ನು ಎಣ್ಣೆಕಾಳು ಬೆಳೆಗಳ ಜಿಲ್ಲೆಯನ್ನಾಗಿ ಪರಿವರ್ತನೆ ಮಾಡಲು ಕ್ರಮ ವಹಿಸಲಾಗಿದೆ. ಎಣ್ಣೆಕಾಳು ಬೆಳೆಗಳ ಬೆಳೆಯುವ ಭೂಪಟದಲ್ಲಿ ತುಮಕೂರು ಜಿಲ್ಲೆಯು ಕಾಣುವಂತೆ ಮಾಡಲಾಗುವುದು. ಇದಕ್ಕಾಗಿ ಎಣ್ಣೆಕಾಳುಗಳ ಬೆಳೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ಚಿತ್ರನಟ ಪುನೀತ್ ರಾಜ್ ಕುಮಾರ್, ಸಂಚಾರಿ ವಿಜಯ್, ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಮೃತರಾದ ಅನೇಕರನ್ನು ಸ್ಮರಿಸಿದರು.
ಧ್ವಜಾರೋಹಣ ನೆರವೇರಿಸಿದ ಬಳಿಕ ಸಚಿವರು ತುಕಡಿಗಳ ಪರಿವೀಕ್ಷಣೆ ನಡೆಸಿದರು. ಬಳಿಕ ಜಿಲ್ಲಾ ಶಸಸ್ತ್ರ ಮೀಸಲು ಪೊಲೀಸ್ ಪಡೆ, ನಾಗರಿಕ ಪೆÇಲೀಸ್ ತಂಡ, ರಾಜ್ಯ ಮೀಸಲು ಪೆÇಲೀಸ್ ತಂಡ, ಗೃಹ ರಕ್ಷಕ ದಳ, ಸರ್ಕಾರಿ ಮಹಿಳಾ ಕಾಲೇಜಿನ ರೇಂಜಸ್ ತಂಡ, ಮಹಿಳಾ ಪೆÇಲೀಸ್ ತಂಡ, ನಾಲ್ಕನೇ ಕರ್ನಾಟಕದ ಬೆಟಾಲಿಯನ್ ಎನ್ಸಿಸಿ ಬಾಲಕಿಯರ ಮತ್ತು ಬಾಲಕರ ತಂಡಗಳು ಸೇರಿದಂತೆ 8 ತುಕಡಿಗಳು ಪಥ ಸಂಚಲನ ನಡೆಸಿ ಗೌರವ ಸಲ್ಲಿಸಿದವು.
ಇದೇ ವೇಳೆ ನಗರದ ಅಹಮದಾಬಾದ್ನಲ್ಲಿ ನಡೆದ ಅಖಿಲ ಭಾರತ 30ನೇ ರೈಫಲ್ ಶೂಟಿಂಗ್ನಲ್ಲಿ ವಿಜೇತರಾಗಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಮೇಯರ್ ಬಿ.ಜಿ. ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ, ತೋಟಗಾರಿಕಾ ಉಪ ನಿರ್ದೇಶಕ ರಘು, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಕನ್ನಡ ಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಚಾಲನೆ ನೀಡಿದರು.ಈ ವೇಳೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ. ಎಸಿ ಅಜಯ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು. ರಾಜ್ಯೋತ್ಸವ ಸಾರ್ವಜನಿಕರ ಸಂಖ್ಯೆಯು ವಿರಳವಾಗಿದ್ದು, ಕನ್ನಡಿಗರ ನಿರಭಿಮಾನಕ್ಕೆ ಸಾಕ್ಷಿ ಎನಿಸಿತು.
ತಡವಾಗಿ ಗಮನಕ್ಕೆ ಬಂದಿದ್ದರಿಂದ ರಾಜ್ಯೋತ್ಸವ ಪ್ರಶಸ್ತಿ ಕೊಡಲಾಗಲಿಲ್ಲ:
ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಂಬಂಧ ಜಿಲ್ಲಾಡಳಿತದಿಂದ ಕಡೇ ದಿನಗಳಲ್ಲಿ ಮಾಹಿತಿ ಬಂದಿದ್ದರಿಂದ, ಸರಕಾರದಿಂದಲೂ ಯಾವುದೇ ಮಾರ್ಗಸೂಚಿ ಹೊರಬಾರದಿದ್ದರಿಂದ ಕಾರ್ಯಕ್ರಮದ ಸನಿಹದಲ್ಲಿ ಆಯ್ಕೆ ಮಾಡಲು ಕಷ್ಟವಾಗುವ ಕಾರಣಕ್ಕೆ ಪ್ರಶಸ್ತಿ ಈ ಬಾರಿ ಬೇಡ ಎಂದು ಸೂಚಿಸಲಾಯಿತು. ಮುಂದಿನ ಸಾಲಿನಿಂದ ಪ್ರಶಸ್ತಿ ಕೈ ತಪ್ಪಬಾರದೆಂದು ನಾಳೆಯಿಂದಲೇ ಅರ್ಹರನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿಗಳು, ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟೀಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/11/DSC_5479-scaled.jpg)