ಶ್ರೀನಗರ:
ಉಗ್ರರು ಹಾಗೂ ಸೇನಾ ಪಡೆಗಳ ನಡುವೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಎನ್ಕೌಂಟರ್ ನಡೆದಿದ್ದು, ಈ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಬಾರಾಮುಲ್ಲಾದ ಕಲಾಂತಾರ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರ್ ಇ ತೋಯ್ಬಾ(LeT)ದ ಇಬ್ಬರು ಉಗ್ರರು ಶುಕ್ರವಾರ ಬಲಿಯಾಗಿದ್ದಾರೆ. ಹಾಜಿನ್ ಜಿಲ್ಲೆಯಲ್ಲಿ ಹತ್ಯೆಯಾದ ಉಗ್ರನನ್ನು ಪಾಕಿಸ್ತಾನಿ ಮೂಲದ ಎಲ್ಇಟಿ ಕಮಾಂಡರ್ ಅಲಿ ಭಾಯ್ ಎಂದು ಗುರುತಿಸಲಾಗಿದೆ.
ಉಗ್ರರ ಅಡಗುತಾಣಗಳ ಕುರಿತು ಖಚಿತ ಮಾಹಿತಿ ಪಡೆದು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದಾರೆ. ಆಗ ಇಬ್ಬರ ಮಧ್ಯೆ ಗುಂಡಿನ ಚಕಮಕಿ ನಡೆದು ಇಬ್ಬರು ಉಗ್ರರನ್ನು ಸೇನೆ ಅಧಿಕಾರಿಗಳು ಹೊಡೆದುರುಳಿಸಿದ್ದಾರೆ. ಈ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ ಮೂವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಶ್ರೀನಗರದ ರಕ್ಷಣಾ ವಿಭಾಗದ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಮಾಹಿತಿ ನೀಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಸೊಪೊರಾದಲ್ಲಿಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮೊಬೈಲ್ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಗಾಯಗೊಂಡ ಸಿಬ್ಬಂದಿಯನ್ನು ಬಾದಾಮಿಬಾಗ್ ಕಂಟೋನ್ಮೆಂಟ್ನಲ್ಲಿ ಸೇನೆಯ 92 ಬೇಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಕಾಲಿಯಾ ತಿಳಿಸಿದ್ದಾರೆ.