ನಾಗಮಂಗಲ ಶಾಸಕ ಸುರೇಶ್​ ಗೌಡಗೆ ಡಿಸಿಪಿ ದೇವರಾಜ್ ವಾರ್ನಿಂಗ್..!?

ಬೆಂಗಳೂರು: 

  ನಿಖಿಲ್​ ಕುಮಾರಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಪ್ರೀಮಿಯರ್ ಶೋ ನಂತರ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ಹಾಗೂ ನಾಗಮಂಗಲ ಶಾಸಕ ಸುರೇಶ್ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ನಗರದ ಓರಾಯನ್ ಮಾಲ್​ನಲ್ಲಿ ನಿನ್ನೆ ‘ಸೀತಾರಾಮ ಕಲ್ಯಾಣ’ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಈ ಪ್ರೀಮಿಯರ್ ಶೋಗೆ ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ಗಣ್ಯ ವ್ಯಕ್ತಿಗಳಿಗೆ ಆಹ್ವಾನ ನೀಡಿದ್ದರು. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ ಈಶ್ವರಪ್ಪ, ಸಚಿವ ಜಮೀರ್ ಅಹ್ಮದ್​ ಸೇರಿದಂತೆ ಜೆಡಿಎಸ್, ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರು ಭಾಗವಹಿಸಿದ್ರು.

​ ಶೋ ನಂತರ ಓರಾಯನ್ ಮಾಲ್ ಹಿಂಭಾಗ ‘ವರ್ಲ್ಡ್​ ಟ್ರೇಡ್ ಸೆಂಟರ್​’ನಲ್ಲಿ ಡಿನ್ನರ್ ಪಾರ್ಟಿ ಕೂಡಾ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಡಿಸಿಪಿ ದೇವರಾಜ್​ ಅವರನ್ನ ಚಿತ್ರತಂಡ ಭದ್ರತೆ ದೃಷ್ಟಿಯಿಂದ ಆಹ್ವಾನ ಮಾಡಿತ್ತು. ಔತಣ ಕೂಟ ಮುಗಿದ ನಂತರ ನಾಗಮಂಗಲ ಶಾಸಕ ಸುರೇಶ್ ಗೌಡ ಮತ್ತು ದೇವರಾಜ್ ಒಂದೇ ಲಿಫ್ಟ್​ನಲ್ಲಿ ಕೆಳಗೆ ಬರುತ್ತಿದ್ದರು. ಈ ವೇಳೆ ಲಿಫ್ಟ್​ನಲ್ಲಿ ಡಿಸಿಪಿ ದೇವರಾಜ್​ರನ್ನ ಶಾಸಕ ಸುರೇಶ್ ಗೌಡ ನೋಡುತ್ತಿದ್ರಂತೆ. ಇದಕ್ಕೆ ಡಿಸಿಪಿ ದೇವರಾಜ್​, ‘‘ಏನ್ರಿ ನನ್ನನ್ನ ಹಾಗ್ ನೋಡ್ತಿದ್ದಿರಾ..?’’ ಎಂದು ಸುರೇಶ್​ ಗೌಡರನ್ನ ಪ್ರಶ್ನಿಸಿದ್ದಾರೆ. ಅದಕ್ಕೆ ಸುರೇಶ್​ ಗೌಡ, ‘‘ನಾನ್ಯಾಕಯ್ಯ ನಿನ್ ನೋಡ್ಲಿ, ನೀ ಯಾರಿಗೇಳ್ತಿಯಾ ಅಂತಾ ಗೊತ್ತು..?’’ ಅಂತಾ ಡಿಸಿಪಿ ದೇವರಾಜ್​ಗೆ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಡಿಸಿಪಿ, ‘‘ನನ್ನ ಹತ್ತಿರ  ಗುರಾಯಿಸೋದೆಲ್ಲ ಇಟ್ಕೊಳ್ ​ಬೇಡ, ಸರಿ ಇರಲ್ಲ’’ ಅಂತಾ ಸುರೇಶ್ ಗೌಡರಿಗೆ ಲಿಫ್ಟ್​ನಲ್ಲೇ ವಾರ್ನ್ ಮಾಡಿದ್ದಾರಂತೆ.

ಲಿಫ್ಟ್​ನಿಂದ ಕೆಳಗೆ ಬಂದು ಇಳಿಯುತ್ತಿದ್ದಂತೆ ಡಿಸಿಪಿ ದೇವರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುರೇಶ್ ಗೌಡ ಹಾಗೂ ಕೆಲ ಶಾಸಕರು ಮತ್ತೆ ಸಿಎಂ ಬಳಿ ತೆರಳಿದ್ದಾರೆ. ಈ ವೇಳೆ ವರ್ಲ್ಡ್​ ಟ್ರೇಡ್ ಸೆಂಟರ್​​ನ ಫಸ್ಟ್ ಫ್ಲೋರ್​​ನಲ್ಲಿ ಹಿರಿಯ ನಾಯಕರ ಜೊತೆ ಮಾತುಕತೆಯಲ್ಲಿ ತೊಡಗಿದ್ದ ಸಿಎಂ, ಡಿಸಿಪಿ ದೇವರಾಜ್​ರನ್ನ ಕರೆದು ‘‘ಏನಯ್ಯಾ ನಿಂದು, ಇಲ್ಲೂನೂ ರಗಳೆ’’ ಅಂತಾ ಪ್ರಶ್ನಿಸಿದ್ದಾರೆ. ಸಿಎಂ ಮಾತಿಗೆ ಪ್ರತ್ಯುತ್ತರ ನೀಡಲಾಗದೇ ಡಿಸಿಪಿ ದೇವರಾಜ್ ಸುಮ್ಮನೇ ನಿಂತಿದ್ದರಂತೆ. ನಂತರ ನಾನು ಬೆಳಗ್ಗೆ ಕರೆದು ಮಾತಾಡ್ತೀನಿ, ‘‘ನೀನ್ ಬಿಡಪ್ಪ’’ ಅಂತಾ ಸುರೇಶ್ ಗೌಡರನ್ನ ಕಳುಹಿಸಿದ್ದಾರೆ ಎನ್ನಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link