ನಿರ್ಭಯಾ ಅತ್ಯಾಚಾರ ಪ್ರಕರಣ : ಗಲ್ಲು ಮತ್ತಷ್ಟು ವಿಳಂಬ!?

ದೆಹಲಿ :

      ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

      ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಕಾಮುಕರು ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರು ಹಿಂದೆ ಸರಿದಿದ್ದಾರೆ.

      ಸುಪ್ರೀಂ ಕೋರ್ಟ್ ನಲ್ಲಿ ಇಂದು ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಆಗ ಮುಖ್ಯ ನ್ಯಾಯಮೂರ್ತಿ ಎಸ್‌. ಎ. ಬೋಬ್ಡೆ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದರು. ವಿಚಾರಣೆ ಆರಂಭವಾಗಿ ಹತ್ತು ನಿಮಿಷಕ್ಕೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯ್ತು.

      ನ್ಯಾಯಮೂರ್ತಿ ಬೋಬ್ಡೆ ಸಂಬಂಧಿ ನಿರ್ಭಯಾ ಪರ ವಾದ ನಡೆಸುತ್ತಿರುವುದರಿಂದ ಅವರು ಈ ವಿಚಾರಣೆಯಿಂದ ಹಿಂದೆ ಸರಿಯಲು ಕಾರಣ ಎಂಬ ಮಾತುಗಳು ಕೇಳಿ ಬಂದಿದೆ. 

      ನಾಳೆ(ಬುಧವಾರ) 10.30 ಕ್ಕೆ ಹೊಸ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಮುಖ್ಯ ನ್ಯಾಯಮೂರ್ತಿ ವಿಚಾರಣೆಯಿಂದ ಹೊರಗುಳಿದಿದ್ದಾರೆ. ಹಾಗಾಗಿ ಹೊಸ ಪೀಠ ವಿಚಾರಣೆ ನಡೆಸಲಿದೆ. ಪೀಠದ ಮೂವರು ನ್ಯಾಯಾಧೀಶರು ಹೊಸ ಪೀಠದಲ್ಲೂ ಇರಲಿದ್ದಾರೆ. ಆದರೆ ಬೇರೆ ಸಿಜೆಐ ವಿಚಾರಣೆ ನಡೆಸಲಿದ್ದಾರೆ. 

      ಡಿಸೆಂಬರ್ 16ರಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಕ್ಷಯ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೊಸ ಪೀಠದಲ್ಲಿ ನಡೆಯುವ ಕಾರಣ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿ ವಿಳಂಬವಾಗಲಿದೆ. ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವವರಿಗೆ ತಕ್ಷಣ ಗಲ್ಲು ಶಿಕ್ಷೆ ವಿಧಿಸಬೇಕೆಂದು ಬೇಡಿಕೆ ಹೆಚ್ಚಾಗಿದೆ. ಗಲ್ಲಿಗೆ ತಯಾರಿ ಕೂಡ ನಡೆದಿದೆ. ಹೀಗಾಗಿ ನಾಳೆ ಬರುವ ತೀರ್ಪಿನಿಂದ ಗಲ್ಲು ಶಿಕ್ಷೆಯ ದಿನಾಂಕ ತಿಳಿಯಲಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap