ತಮಿಳುನಾಡು :
ಕಂಟೈನರ್ ಲಾರಿ ಅಡ್ಡಗಟ್ಟಿ 15 ಕೋಟಿ ರೂ. ವೆಚ್ಚದ ಮೊಬೈಲ್ ಗಳನ್ನು ಲೂಟಿ ಮಾಡಿದ ಸಿನಿಮಯ ಘಟನೆ ಹೊಸೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಸಮೀಪ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡಿನ ಶ್ರೀಪೆರಂಬದರೂರಿನಿಂದ ಮುಂಬೈನತ್ತ ಸಾಗುತ್ತಿದ್ದ ಕಂಟೈನರ್ ಲಾರಿಯಲ್ಲಿ ಎಂಐ (ಶಿಯೋಮಿ) ಕಂಪನಿಯ ಮೊಬೈಲ್ ಗಳನ್ನು ಸಾಗಿಸಲಾಗುತ್ತಿತ್ತು. ಹೊಸೂರು ಬಳಿ ಮೇಲು ಮಲೈ ಅರಣ್ಯ ಪ್ರದೇಶದ ಸಮೀಪ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಲಾರಿ ಅಡ್ಡಗಟ್ಟಿದ ತಂಡವೊಂದು ಲಾರಿ ಚಾಲಕ ಮತ್ತು ಜೊತೆಗಿದ್ದ ವ್ಯಕ್ತಿಯನ್ನು ದರೋಡೆಕೋರರು ಕಾಡಿನ ಒಳಗೆ ಎಳೆದೊಯ್ದು ಮರಕ್ಕೆ ಕಟ್ಟಿ ಹಾಕಿ ಲಾರಿಯಲ್ಲಿದ್ದ 15 ಕೋಟಿ ರೂ. ವೆಚ್ಚದ 14,500 ಮೊಬೈಲ್ ಗಳನ್ನು ಬೇರೆ ಲಾರಿಗೆ ಸ್ಥಳಾಂತರಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ನಂತರ ಡ್ರೈವರ್ ಹಾಗೂ ಕ್ಲೀನರ್ ಹಗ್ಗದಿಂದ ತಮ್ಮನ್ನು ಬಿಡಿಸಿಕೊಂಡು ಅಂಬುಲೆನ್ಸ್ ಒಂದರ ಸಹಾಯದಿಂದ ಸ್ಥಳೀಯ ಕೃಷ್ಣಗಿರಿ ಆಸ್ಪತ್ರೆಗೆ ದಾಖಲಾಗಿದ್ದು, ಆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನಾ ಸ್ಥಳದಿಂದ ದರೋಡೆಕೋರರು ಹೈಜಾಕ್ ಮಾಡಿದ್ದ ಟ್ರಕ್ ಪತ್ತೆಯಾಗಿದ್ದು, ಮತ್ತೊಂದು ಟ್ರಕ್ ಮೂಲಕ ಕಳ್ಳರು ಸರಕಿನೊಂದಿಗೆ ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/10/mobile-truck.jpg)