ರಾಯಚೂರು :
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಶಾಸಕರಾದ ಶಿವನಗೌಡ ನಾಯಕ್, ಪ್ರೀತಮ್ಗೌಡ ಹಾಗೂ ಯಡಿಯೂರಪ್ಪ ಮಾಧ್ಯಮ ಸಲಹೆಗಾರ ಎಂಬಿ ಮರಂಕಲ್ ಅವರ ವಿರುದ್ಧ ಗುರುಮಿಟ್ಕಲ್ ಶಾಸಕರ ಪುತ್ರ ಶರಣಗೌಡ ಕಂದಕೂರ ರಾಯಚೂರು ಎಸ್ಪಿ ಡಿ. ಕಿಶೋರಬಾಬುಗೆ ದೂರು ನೀಡಿದ್ದಾರೆ.

ಈ ಎಲ್ಲರೂ ಬಿಜೆಪಿಗೆ ಬರಬೇಕೆಂದು ಹಣದ ಆಮಿಷವೊಡ್ಡಿದ್ದು, ಒಂದೊಮ್ಮೆ ಬಾರದಿದ್ದರೆ ಸರಿ ಇರುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಹೇಳಿ ಯಡಿಯೂರಪ್ಪ ಸೇರಿ ಇನ್ನೂ ಮೂರು ಜನರ ವಿರುದ್ಧ ದೂರು ದಾಖಲಿಸಿದ್ದಾರೆ
ಎಸ್ಪಿಗೆ ಮೂರು ಪುಟಗಳ ದೂರಿನ ಪ್ರತಿಯೊಂದಿಗೆ ಅವರ ಜೊತೆಗಿನ ಮಾತುಕತೆಯ ಸಿಡಿ ನೀಡಿದ್ದಲ್ಲದೆ, ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಸಂಪೂರ್ಣ ಘಟನೆಯ ವಿವರವನ್ನು ಒಂದೂವರೆ ತಾಸು ವಿವರಿಸಿದ್ದಾರೆ.
ನಂತರ ದೇವದುರ್ಗಕ್ಕೂ ತೆರಳಿ ಅಲ್ಲಿನ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ. ಅಪರಾಧಿಕ ಒಳಸಂಚು ನಡೆಸಿದ್ದಕ್ಕಾಗಿ ಐಪಿಸಿ 120 ಬಿ, ಅಪರಾಧಿಕ ಬೆದರಿಕೆಗಾಗಿ ಐಪಿಸಿ 506, ಏಕೋದ್ದೇಶದಿಂದ ಕೃತ್ಯ ಎಸಗಲು ಪ್ರಯತ್ನಿಸಿದ್ದಕ್ಕಾಗಿ 34 ಹಾಗೂ ಭ್ರಷ್ಟಾಚಾರ ಅಧಿನಿಯಮ ಪ್ರಕಾರ ಎಫ್ಐಆರ್ ದಾಖಲಿಸಲಾಗಿದೆ








