ನವದೆಹಲಿ :
ಕೌನ್ ಬನೇಗಾ ಕರೋಡ್ ಪತಿಯ 12ನೇ ಆವೃತ್ತಿ ಮತ್ತು ಇದರ ನಿರೂಪಣೆ ಮಾಡುತ್ತಿರುವ ನಟ ಅಮಿತಾಬ್ ಬಚ್ಚನ್ ವಿರುದ್ಧ ಲಕ್ನೋದಲ್ಲಿ ಎಫ್ ಐಆರ್ ದಾಖಲಾಗಿದೆ.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ವಿಶೇಷ ಸಂಚಿಕೆಯಲ್ಲಿ ನಟ ಅನುಪ್ ಸೋನಿ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಎಂಬುವರಿಗೆ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಯೊಂದು ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಬಿಗ್ ಬಿ ಮತ್ತು ಸೋನಿ ಟಿವಿ ಕಾರ್ಯಕ್ರಮ ಮೇಕರ್ಸ್ ವಿರುದ್ಧ ದೂರು ದಾಖಲಾಗಿದೆ.
1927ರ ಡಿಸೆಂಬರ್ 25ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಗಳು ಯಾವ ಪುರಾಣದ ಪ್ರತಿಗಳನ್ನು ಸುಟ್ಟು ಹಾಕಿದ್ದರು ಎಂದು ಪ್ರಶ್ನೆ ಕೇಳಲಾಗಿತ್ತು. ವಿಷ್ಣು ಪುರಾಣ, ಭಗವದ್ಗೀತೆ, ಋಗ್ವೇದ ಮತ್ತು ಮನುಸ್ಮೃತಿ ಎಂದು ನಾಲ್ಕು ಆಯ್ಕೆಗಳನ್ನು ನೀಡಲಾಗಿತ್ತು.
ಇದಕ್ಕೆ ಮನುಸ್ಮೃತಿಯು ಉತ್ತರವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಾಚೀನ ಹಿಂದೂ ಧರ್ಮ ಗ್ರಂಥದ ಪ್ರತಿಗಳನ್ನು ಖಂಡಿಸಿ ಸುಟ್ಟುಹಾಕಿದರು ಎಂದು ಅಮಿತಾಬ್ ಪ್ರಶ್ನೆಯ ಬಳಿಕ ವಿವರಣೆ ನೀಡಿದ್ದಾರೆ.
ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹಾಗು ವಿರೋಧಕ್ಕೆ ಕಾರಣವಾಗಿದ್ದು, ಕೆಲವು ನೆಟ್ಟಿಗರು ಇದನ್ನು ಎಡಪಂಥೀಯ ಪ್ರಚಾರ ಎಂದು ಕರೆದರೆ, ಮತ್ತೆ ಕೆಲವರು ಈ ಕಾರ್ಯಕ್ರಮವು ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ