ಖಿನ್ನತೆಗೊಳಗಾದ ‘ನಿರ್ಭಯಾ’ ಅಪರಾಧಿಗಳು : ಕಡಿಮೆ ಆಹಾರ ಸೇವನೆ !

ದೆಹಲಿ :

      ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿರ್ಭಾಯಾ ಅತ್ಯಾಚಾರಿಗಳಿಗೆ ನೇಣು ಶಿಕ್ಷೆ ವಿಧಿಸಲು ದಿನಗಣನೆ ಶುರುವಾಗಿದ್ದು, ಖಿನ್ನತೆಗೊಳಗಾದ ಅಪರಾಧಿಗಳು ಆಹಾರ ಸೇವನೆ ಕಡಿಮೆ ಮಾಡಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಭಯಾ ಅತ್ಯಾಚಾರ ಆರೋಪಿಗಳಾದ ಪವನ್ ಗುಪ್ತಾ, ಅಕ್ಷಯ್‌ ಠಾಕೂರ್, ವಿನಯ್ ಶರ್ಮಾ, ಮುಖೇಶ್ ಸಿಂಗ್ ಅವರಿಗೆ ಸುಪ್ರೀಂಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. ಒಟ್ಟು ಆರ್ವರು ಅಪರಾಧಿಗಳಲ್ಲಿ ರಾಮ್‌ ಸಿಂಗ್ ಎಂಬಾತ ಜೈಲಿನಲ್ಲಿ ನೇಣು ಹಾಕಿಕೊಂಡು ಅಸುನೀಗಿದ್ದ. ಮತ್ತೊಬ್ಬನು ಅಪ್ತಾಪ್ತನಾಗಿದ್ದ ಕಾರಣ ಆತನನ್ನು ಪುನಶ್ಚೇತನ ಗೃಹಕ್ಕೆ ಕಳುಹಿಸಲಾಗಿದೆ.

     ಡಿಸೆಂಬರ್ 16 ರಂದು ಅವರನ್ನು ನೇಣಿಗೆ ಏರಿಸಲಾಗುತ್ತಿದ್ದು, ಯಾವುದೇ ಸಮಯದಲ್ಲಿ ನೇಣುಗಂಬ ಏರುವ ಭೀತಿಯಲ್ಲಿರುವ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ದೋಷಿಗಳಿಗೆ ಇದೀಗ ಸಾವಿನ ಭೀತಿ ಎದುರಾಗಿದೆ. ಸಾವಿನ ದಿನ ಹತ್ತಿರವಾದ ಬೆನ್ನಲ್ಲೇ, ನಾಲ್ವರೂ ದೋಷಿಗಳು ಖಿನ್ನತೆಗೆ ಒಳಗಾಗಿದ್ದಾರೆ. ಅಲ್ಲದೇ ಕೆಲ ದಿನಗಳಿಂದ ಅವರು ತಮ್ಮ ಆಹಾರ ಸೇವನೆ ಕಡಿಮೆ ಮಾಡಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. 

       ಹೀಗಾಗಿ ಯಾವುದೇ ಸಂದರ್ಭದಲ್ಲೂ ಅಪರಾಧಿಗಳು ಆತ್ಮಹತ್ಯೆ ಯತ್ನ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಅಪರಾಧಿಯ ಮೇಲೂ ಕಣ್ಣಿಡಲಾಗಿದ್ದು, ಪೊಲೀಸ್​ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ. ಅಲ್ಲದೇ ಅಪರಾಧಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.


ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ