ಬೆಂಗಳೂರು :
ಮೈತ್ರಿ ಸರ್ಕಾರ ಬೀಳಿಸುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಷಡ್ಯಂತ್ರ ಇದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಬಹಿರಂಗವಾಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಶಾಸಕರ ರಾಜೀನಾಮೆ ಪರ್ವ ಸಂಬಂಧ ಪದ್ಮನಾಭ ನಗರದಲ್ಲಿರುವ ತಮ್ಮ ಮನೆಯಲ್ಲಿ ಜೆಡಿಎಸ್ ಶಾಸಕರ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, “ಸರ್ಕಾರ ರಚನೆಗೆ ಮುಂದೆ ಬಂದವರೇ ಕಾಂಗ್ರೆಸ್ ನಾಯಕರು, ನಾವು ಬೇಡ ಅಂದ್ರೂ ಕುಮಾರಸ್ವಾಮಿ ಅವರನ್ನ ಸಿಎಂ ಮಾಡಿದ್ರಿ, ಈಗ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರವನ್ನು ಬೀಳಿಸೋಕೆ ಮುಂದಾಗಿದ್ದಾರೆ.
ಈಗ ರಾಜೀನಾಮೆ ಕೊಟ್ಟ ಕಾಂಗ್ರೆಸ್ ಶಾಸಕರೆಲ್ಲಾ ಯಾರು? ಎಲ್ಲರೂ ಸಿದ್ದರಾಮಯ್ಯನವರ ಶಿಷ್ಯರೆ, ಈ ರಾಜೀನಾಮೆ ಹಿಂದೆ ಯಾರೆಲ್ಲಾ ನಾಟಕ ಆಡ್ತಾ ಇದ್ದಾರೆ ಅಂತ ನಮಗೆ ಗೊತ್ತಿಲ್ವಾ? ಕುಮಾರಸ್ವಾಮಿ ಬಂದಮೇಲೆ ತೀರ್ಮಾನ ಮಾಡ್ತೀವಿ. ಮುಂದೆ ಏನಾಗಬೇಕು ಏನು ಮಾಡಬೇಕು ಎಂದು ನಿರ್ಧರಿಸುತ್ತೇವೆ” ಎಂದಿದ್ದಾರೆ.
ಇಷ್ಟು ದಿನ ನಾವು ಸಮಾಧಾನವಾಗಿ ಇದ್ವಿ. ಆದ್ರೆ ಕಾಂಗ್ರೆಸ ಶಾಸಕರು ತೊಂದರೆ ಕೊಡಲು ಶುರು ಮಾಡಿದ್ದಾರೆ. ಹೀಗಾಗಿ ಸಂಜೆ ಕುಮಾರಸ್ವಾಮಿ ಬಂದ ನಂತರ ಎಲ್ಲಾ ಜೆಡಿಎಸ್ ಶಾಸಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ದೇವೇಗೌಡರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/07/758433-deve-gowda-1.jpg)