ಬೆಂಗಳೂರು :
ಗುರುವಾರ ರಾಜ್ಯದಲ್ಲಿ ಪ್ರಮುಖ ನಾಯಕರ ಮೇಲೆ ಐಟಿ ದಾಳಿ ನಡೆಯಲಿದೆ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದರು. ಅಂತೆಯೇ ಇಂದು ಬೆಳಿಗ್ಗೆ ಜೆಡಿಎಸ್ ನಾಯಕ ಹಾಗೂ ಸಚಿವ ಸಿಎಸ್ ಪುಟ್ಟರಾಜು ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಈ ಮೂಲಕ ಕುಮಾರಸ್ವಾಮಿ ನುಡಿದಿದ್ದ ಭವಿಷ್ಯ ನಿಜವಾಗಿದೆ.
10 ಉದ್ಯಮಿಗಳು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಪ್ತ ಹಾಗೂ ಸಚಿವ ಸಿಎಸ್ ಪುಟ್ಟರಾಜು ಅವರ ಮನೆಯ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ, ಸಚಿವ ಹೆಚ್.ಡಿ. ರೇವಣ್ಣರ ಆಪ್ತ ಗುತ್ತಿಗೆದಾರರಾದ ಅಶ್ವಥ್ ನಾರಾಯಣಗೌಡ, ನಾರಾಯಣರೆಡ್ಡಿ, ರಾಯಿಗೌಡರ ಮನೆಯ ಮೇಲೂ ಐಟಿ ರೇಡ್ ನಡೆದಿದೆ. ಈ ವೇಳೆ ಕೆಲ ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ.
ಹಾಸನದಲ್ಲಿ ಹತ್ತುಕಡೆ ಐಟಿ ದಾಳಿ ನಡೆದಿದೆ. 6 ಇನೋವಾ ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳು, ಆದಿಚುಂಚನಗಿರಿ ಕಾಲೇಜು ಪಕ್ಕ ಇರುವ ಅಶ್ವಥ್ ನಾರಾಯಣಗೌಡರ ಮನೆ, ನಾಗಸಮುದ್ರ ರಸ್ತೆಯಲ್ಲಿರುವ ರಾಯಿಗೌಡ ಮತ್ತು ನಾರಾಯಣರೆಡ್ಡಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಕಳೆದ 30 ವರ್ಷಗಳಿಂದ ಇವರು ವಿವಿಧ ಗುತ್ತಿಗೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.