ಮೂಲ್ಕಿ:
‘ಜೈಲು ವಾಸ್ತವ್ಯ ಮಾಡಿ ಬಂದಿರುವ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿಯ ಗ್ರಾಮ ವಾಸ್ತವ್ಯದ ಬಗ್ಗೆ ಸ್ಪಷ್ಟ ಮಾಹಿತಿ ಇರಲಾರದು’ ಎಂದು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಟೀಕಿಸಿದರು. ಮೂಲ್ಕಿ ಬಳಿಯ ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಗ್ರಾಮ ವಾಸ್ತವ್ಯದೊಂದಿಗೆ ಆ ಗ್ರಾಮದ ಕುಂದುಕೊರತೆ, ಅಲ್ಲಿನ ಸಮಸ್ಯೆ, ಬೇಡಿಕೆ, ಪರಿಹಾರ, ಅಧಿಕಾರಿಗಳ ಹಾಗೂ ಸರ್ಕಾರದ ಸ್ಪಂದನೆ ಇದೆಲ್ಲವೂ ಸೇರಿರುತ್ತದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡಿರುವುದು ಹಾಸ್ಯಾಸ್ಪದವಾಗಿದೆ’ ಎಂದರು.
‘ನರೇಂದ್ರ ಮೋದಿಯ ಹೆಸರಿನಲ್ಲಿ ಚುನಾವಣೆ ಗೆದ್ದಿರುವ ಬಿಜೆಪಿ ಸಂಸದರಿಗೆ ಗ್ರಾಮದ ಬಗ್ಗೆ ಚಿಂತನೆ ಇದೆಯೇ? ಈ ಬಗ್ಗೆ ಅವರಿಗೆ ಮೊದಲು ವಿಶೇಷ ತರಬೇತಿ ನೀಡಬೇಕು, ಎಲ್ಲವನ್ನು ಸಹ ರಾಜಕೀಯ ದೃಷ್ಟಿಯಿಂದ ನೋಡದೇ ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡುವ ಮನೋಭಾವನೆಗಳನ್ನು ವಿಧಾನ ಪರಿಷತ್ ವಿರೋಧ ಪಕ್ಷದ ಪಕ್ಷದ ನಾಯಕರು ಬೆಳೆಸಿಕೊಳ್ಳಲಿ’ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/k.jpg)