ಬೆಂಗಳೂರು :
ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಮೂರನೇ ಹಾಗೂ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಅಯ್ಯಪ್ಪ ದೊರೆ ಕೊಲೆಯ ನಂತರ ಪೊಲೀಸರು ಪ್ರಮುಖ ಆರೋಪಿಗಳಾದ ಸೂರಜ್ ಶೆಟ್ಟಿ, ಸುದೀರ್ ಅಂಗೂರ್ ಸೇರಿ ನಾಲ್ಕು ಜನರನ್ನು ಬಂಧಿಸುವಲ್ಲಿ ಆರ್ಟಿ ನಗರ ಪೊಲೀಸರು ಸಫಲವಾಗಿದ್ದರು. ಆದರೆ, ಮೂರನೇ ಆರೋಪಿ ಗಣೇಶ್ ತಲೆಮರೆಸಿಕೊಂಡಿದ್ದ. ಆತ ಹೆಬ್ಬಾಳದ ಕಾರ್ಪೋರೇಷನ್ ಬಳಿ ಅಡಗಿರುವ ಖಚಿತ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಭಾನುವಾರ ಬೆಳಗ್ಗೆಯೇ ಆತನನ್ನು ಬಂಧಿಸಲು ಮುಂದಾಗಿದ್ದಾರೆ.
ತನ್ನನ್ನು ಬಂಧಿಸಲು ಪೊಲೀಸರು ಆಗಮಿಸಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಆರೋಪಿ ಗಣೇಶ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪಿಎಸ್ಐ ಯಲ್ಲವ್ವ ಮತ್ತು ಪೊಲೀಸ್ ಪೇದೆ ಮಲ್ಲಿಕಾರ್ಜುನ್ ಅವರು ತೀವ್ರ ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇನ್ಸ್ಪೆಕ್ಟರ್ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ತಿಳಿಸಿದ್ದಾರೆ. ಆದರೆ, ಆರೋಪಿ ಮತ್ತೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮ ರಕ್ಷಣೆಗಾಗಿ ಆತನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
