ಹತ್ತು ಅಡಿ ಜಾಗಕ್ಕಾಗಿ ಪ್ರಾಚಾರ್ಯರ ಬರ್ಬರ ಹತ್ಯೆ

ಬೆಂಗಳೂರು :

       ಹತ್ತು ಅಡಿ ಜಾಗಕ್ಕಾಗಿ ಶಾಲೆಯ ಪ್ರಾಂಶುಪಾಲರೊಬ್ಬರನ್ನು ಶಾಲಾ ಮಕ್ಕಳ ಸಮ್ಮುಖದಲ್ಲಿ ಹಾಡ ಹಗಲೇ ಬರ್ಬರವಾಗಿ ಹತ್ಯೆಗೈದಿರುವ ದಾರುಣ ಘಟನೆ ಅಗ್ರಹಾರ ದಾಸರಹಳ್ಳಿಯಲ್ಲಿಂದು ನಡೆದಿದೆ.ವಿಜಯನಗರ ಮಾಗಡಿ ರಸ್ತೆ ಸಮೀಪದ ಅಗ್ರಹಾರ ದಾಸರಹಳ್ಳಿಯ ಹಾವನೂರು ಪಬ್ಲಿಕ್ ಶಾಲೆಯ ಆವರಣದಲ್ಲೇ ಪ್ರಿನ್ಸಿಪಾಲ್ ರಂಗನಾಥ್ ನಾಯಕ್ ಅವರನ್ನು ಚಾಕು ಮತ್ತು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.

ಭಾನುವಾರವಾದ ಇಂದು ವಿಶೇಷ ತರಗತಿಗೆಂದು ಬಂದಿದ್ದ ಶಾಲಾ ಮಕ್ಕಳ ಕಣ್ಣೆದುರು ಈ ಭಿಭತ್ಸ ಘಟನೆ ನಡೆದಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ರಂಗನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಯಿತಾದರೂ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.ಗಂಗಮ್ಮ ಎಂಬುವರ ಮಕ್ಕಳಾದ ಪ್ರಸಾದ್ ಹಾಗೂ ಮಹೇಶ್ ಅವರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ . ಗಂಗಮ್ಮ ಹಾಗೂ ರಂಗನಾಥ್ ಮಧ್ಯೆ 10 ಅಡಿ ಜಾಗದ ಕುರಿತು ಹಲವು ವರ್ಷಗಳಿಂದಲೂ ವ್ಯಾಜ್ಯವಿತ್ತು. ಈ ವಿಚಾರದಲ್ಲಿ ಹಲವು ಬಾರಿ ಜಗಳಗಳಾಗಿತ್ತೆನ್ನಲಾಗಿದೆ. ರಂಗನಾಥ್ ಅವರಿಗೆ ಸೇರಬೇಕಾದ 10 ಅಡಿ ಜಾಗವನ್ನು ಗಂಗಮ್ಮ ಒತ್ತುವರಿ ಮಾಡಿಕೊಂಡ ಆರೋಪ ಹೊಂದಿದ್ದರು.

ನಂತರ ಈ ವಿವಾದ ನ್ಯಾಯಾಲಯ ಮೆಟ್ಟಿಲೇರಿತ್ತು. ನಂತರ ರಂಗನಾಥ್ ಅವರ ಪರಿವಾಗಿ ತೀರ್ಪು ಬಂದಿದ್ದು, ಶುಕ್ರವಾರಂದು ನ್ಯಾಯಾಲಯದ ಆದೇಶದಂತೆ ಭೂಮಿ ತೆರವುಗೊಳಿಸಲಾಗಿತ್ತು.ಪ್ರಸಾದ್ ಮತ್ತು ಮಹೇಶ್ ಎಂಬುವರು ಇಂದು ಬೆಳಗ್ಗೆ ಪ್ರಾಂಶುಪಾಲರ ಜತೆ ಈ ವಿವಾದದ ಬಗ್ಗೆ ತಕರಾರು ತೆಗೆದಿದ್ದು, ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ ಆರೋಪಿಗಳು ಚಾಕುವಿನಿಂದ ಇರಿತು ಹತ್ಯೆ ಮಾಡಿದರು ಎನ್ನಲಾಗಿದೆ.

ಆದರೆ, ಗಂಗಮ್ಮ ಅವರ ಪತಿ ರಾಜು ಈ ಕುರಿತು ಸುದ್ದಿಗಾರರ ಜತೆ ಮಾತನಾಡಿ, ರಂಗನಾಥ್ ನಾಯಕ್ ಅವರನ್ನ ತಮ್ಮ ಮಕ್ಕಳು ಕೊಲೆ ಮಾಡಿದ್ದಾರೆಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ಆಸ್ತಿ ವಿಚಾರವಾಗಿ ತಮ್ಮ ತಂಟೆಗೆ ಬರೋದಿಲ್ಲವೆಂದು ತಾವೆಲ್ಲರೂ ಒಪ್ಪಿ ಅಗ್ರೀಮೆಂಟ್ ಮಾಡಿ ಕೊಟ್ಟಿದ್ದೇವೆ. ಈಗ ಇವರ ಕೊಲೆ ಯಾರು ಮಾಡಿದ್ದು ಎಂಬುದು ಗೊತ್ತಿಲ್ಲ. ಕೊಲೆಯಾದಾಗ ತಮ್ಮ ಮಕ್ಕಳು ಸ್ಥಳದಲ್ಲೇ ಇರಲಿಲ್ಲ ಎಂದಿದ್ದಾರೆ.

ಕೊಲೆಯಾದ ರಂಗನಾಥ್ ನಾಯಕ್ ಅವರ ಪತ್ನಿಯ ದೂರನ್ನು ಪಡೆದು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳಾದ ಮಹೇಶ್ ಮತ್ತು ಪ್ರಸಾದ್ ಅವರು ತಮ್ಮ ಮೊಬೈಲನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.ಆರೋಪಿಗಳನ್ನ ಹಿಡಿಯಲು ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರು 3 ತಂಡಗಳನ್ನ ರಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap