ನವದೆಹಲಿ :
ರಾಜ್ಯದ ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಪ್ರತಿಬಿಂಬಿಸುವ ಹಂಪಿ ಕುರಿತ ಸ್ತಬ್ಧಚಿತ್ರ ಪ್ರದರ್ಶನ ದೆಹಲಿಯ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಗಮನ ಸೆಳೆಯಿತು.
ದೇಶದ ಪ್ರಧಾನ ಸಮಾರಂಭ ದೆಹಲಿಯ ರಾಜ್ಪಥ್ನಲ್ಲಿ ನಡೆಯಿತು. ಹಂಪಿ ಸ್ಭಬ್ಧ ಚಿತ್ರ ಬರುತ್ತಿದ್ದಂತೆ ನೆರೆದಿದ್ದವರು ಕರತಾಡನದ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಎದ್ದು ನಿಂತು ಚಪ್ಪಾಳೆ ತಟ್ಟಿ ತಮ್ಮ ಸಂತಸ ವ್ಯಕ್ತಪಡಿಸಿದರು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ತಮ್ಮ ಟ್ವೀಟ್ ಸಂದೇಶದಲ್ಲಿ ಪರೇಡ್ನಲ್ಲಿ ಪಾಲ್ಗೊಂಡಿದ್ದ ಹಂಪಿಯ ಸ್ತಬ್ಧ ಚಿತ್ರದ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಇದು ನಮ್ಮ ಪರಂಪರೆ, ನಮ್ಮ ಹೆಮ್ಮೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಥ ಸಂಚಲನ ವೀಕ್ಷಿಸಿ ಗೌರವ ಸ್ವೀಕರಿಸಿದರು. ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಂಪುಟದ ಸಚಿವರು, ಮತ್ತಿತರ ಗಣ್ಯರು ವೈಭವದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ದೇಶದ ಬಲಿಷ್ಠ ಸೇನಾಶಕ್ತಿ, ಸಾಂಸ್ಕೃತಿಕ ವೈವಿದ್ಯತೆ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯನ್ನು ಅನಾವರಣಗೊಳಿಸುವ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 32 ಸ್ತಬ್ಧ ಚಿತ್ರಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಕಳೆದ ವರ್ಷ ವಾಯುಪಡೆಗೆ ಸೇರ್ಪಡೆಗೊಂಡ ರಫೇಲ್ ಯುದ್ಧ ವಿಮಾನಗಳು ಗಮನ ಸೆಳೆದವು.
ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಪುರಸ್ಕೃತರು ರಾಜ್ಪಥ್ನ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯ ಪರೇಡನ್ನು ಲೆಫ್ಟಿನೆಂಟ್ ಜನರಲ್ ವಿಜಯ್ಕುಮಾರ್ ಮಿಶ್ರ ಮುನ್ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/01/Hampi-virupaksha.jpg)