ನೂತನ ಅನುಭವ ಮಂಟಪಕ್ಕೆ ಸಿಎಂ ಬಿಎಸ್ವೈ ಅಡಿಗಲ್ಲು..!!

ಬೀದರ್ : 

      ಶರಣರ ಕನಸು ಸಾಕಾರವಾಗುವ ಕಾಲ ಸಮೀಪಿಸಿದ್ದು, ಬಸವ ಕಲ್ಯಾಣದಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೂತನ ಅನುಭವ ಮಂಟಪದ ಭೂಮಿ ಪೂಜೆ ನೆರವೇರಿಸಿದರು.

     ಬೀದರ್‌ʼನಲ್ಲಿ 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಅನುಭವ ಮಂಟಪಕ್ಕೆ ಈಗಾಗಲೇ ಸರ್ಕಾರದಿಂದ 100 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

      ಇಂದು ನಡೆದ ಅದ್ದೂರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅನುಭವ ಮಂಟಪಕ್ಕೆ ಭೂ ಪೂಜೆ ನೆರವೇರಿಸಿದ ಸಿಎಂ, ಮುಂದಿನ 2 ವರ್ಷಗಳಲ್ಲಿ ನೂತನ ಮಂಟಪ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದ್ರು. ಇನ್ನು 80 ಅಡಿ ಎತ್ತರದಲ್ಲಿ ನಿರ್ಮಾಣವಾಗಲಿರುವ ಈ ನೂತನ ಅನುಭವ ಮಂಟಪ, 25 ಎಕರೆ ಜಾಗದಲ್ಲಿ ತಲೆ ಎತ್ತಲಿದೆ.

      ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಕಲ ಶರಣರನ್ನು ಒಗ್ಗೂಡಿಸಿ ನಾಡಿನ ಆಗುಹೋಗುಗಳ ಬಗ್ಗೆ ಅಲ್ಲಿ ಚರ್ಚಿಸುತ್ತಿದ್ದರು. ಆದ್ದರಿಂದ ಅದನ್ನು ಜಗತ್ತಿನ ಪ್ರಥಮ ಸಂಸತ್ತು ಎಂದು ಕರೆಯಲಾಗುತ್ತದೆ. ಆದರೆ, ಅದರ ಕುರುಹುಗಳು ಉಳಿದಿಲ್ಲ. ಆದ್ದರಿಂದ ಸರ್ಕಾರ ಅದೇ ಮಾದರಿಯಲ್ಲಿ ಹೊಸ ಮಂಟಪ ನಿರ್ಮಿಸುತ್ತಿದೆ. ಇಲ್ಲಿನ ಶರಣ ಸ್ಮಾರಕಗಳ ಜೀರ್ಣೋದ್ಧಾರಕ್ಕೆ 15 ವರ್ಷಗಳ ಹಿಂದೆ ರಚಿತವಾದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಮೂಲಕ ಅನುಭವ ಮಂಟಪದ ನಿರ್ಮಾಣ ಮಾಡಲಾಗುತ್ತಿದ್ದು ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಯವರು ಅದರ ಅಡಿಗಲ್ಲು ಇಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ