ಪಾವಗಡ/ ತುಮಕೂರು:
ಜಿಲ್ಲೆಯ ಕೆಲವು ತಾಲ್ಲೂಕುಗಳಿಗೆ ಭಾನುವಾರ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡವು ಕಾಟಾಚಾರದ ಅಧ್ಯಯನ ಎಂಬಂತೆ ಅಲ್ಲಲ್ಲಿ ಪರಿಶೀಲಿಸಿ ವಾಪಸ್ಸಾಗಿದ್ದಾರೆ.
ಪಾವಗಡ ತಾಲ್ಲೂಕಿಗೆ 2 ಗಂಟೆ ತಡವಾಗಿ ಬಂದ ಕೇಂದ್ರದ ಬರ ಅಧ್ಯಯನ ತಂಡ ನಿಗದಿಯಾದ ದೊಮ್ಮತಮರಿ ಗ್ರಾಮಕ್ಕೆ ಭೇಟಿ ನೀಡದೆ, ವೆಂಕಟಾಪುರ ಗ್ರಾಮಕ್ಕೆ ಭೇಟಿ ನೀಡಿತು.
ಪಾವಗಡ ಪಟ್ಟಣದ ಅಗಸರಕುಂಟೆ ಕೆರೆಗೆ ಭೇಟಿ ನೀಡಿ ವೀಕ್ಷಿಸಬೇಕಾಗಿತ್ತು. ಆದರೆ ಭೇಟಿ ನೀಡಲಿಲ್ಲ. ನಿಗದಿಯಾದ ನಾಲ್ಕು ಸ್ಥಳಗಳ ಪೈಕಿ ಕೇವಲ 2 ಸ್ಥಳಗಳಿಗೆ ಭೇಟಿ ನೀಡಿ, ಪಟ್ಟಣದ ನಿರೀಕ್ಷಣಾಮಂದಿರಲ್ಲಿ ಊಟ ಸವಿದು ಮೂರು ಗಂಟೆಗೆ ಚಿತ್ರದುರ್ಗ ಜಿಲ್ಲೆಯ ಕಡೆ ಪ್ರಯಾಣ ಬೆಳೆಸಿದರು.
ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮದ ರೈತ ಕೊಂಡಯ್ಯನ ಹೊಲಕ್ಕೆ ಭೇಟಿ ನೀಡಿ, ತೊಗರಿ ಬೆಳೆ ನಷ್ಟವುಂಟಾಗಿರುವುದನ್ನು ಪರಿಶೀಲಿಸಿದರು.
ನಂತರ ಪಾವಗಡ ಪಟ್ಟಣದ ಬೋವಿ ಕಾಲನಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿದರು.
ಪಾವಗಡ ಪಟ್ಟಣದ ವ್ಯಾಪ್ತಿಯಲ್ಲಿನ 41 ಕೊಳವೆಬಾವಿಗಳ ಪೈಕಿ 21 ಬೋರ್ವೆಲ್ಗಳು ಬತ್ತಿಹೋಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪಟ್ಟಣದ ಬೋವಿ ಕಾಲನಿ, ಕನುಮಲಚೆರುವು, ರೆಡ್ಡಿಕಾಲನಿ, ರೈನಗೇಜ್ ಬಡಾವಣೆಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಜಿ. ನವೀನ್ ಚಂದ್ರ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು,
ಈ ವೇಳೆ ಬೋವಿಕಾಲನಿಯ ಮಹಿಳೆಯರು ಕಾಲಿಕೊಡಗಳನ್ನು ಪ್ರದರ್ಶಿಸಿದರು.
ಪಾವಗಡ ತಾಲ್ಲೂಕು ಸದಾ ಬರಪೀಡಿತವಾಗಿದ್ದು, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸೌಲಭ್ಯ ಕಲ್ಪಿಸಿ ರೈತರ ನೆರವಿಗೆ ಬರಬೇಕೆಂದು ಕೇಂದ್ರ ತಂಡಕ್ಕೆ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮನವಿ ಮಾಡಿಕೊಂಡರು.
ಪಾವಗಡ ತಾಲ್ಲೂಕು ರಾಜ್ಯದಲ್ಲಿಯೆ ಅತ್ಯಂತ ಬರಪೀಡಿತ ಪ್ರದೇಶವಾಗಿದ್ದು, ಈ ಸಾಲಿನಲ್ಲಿ ಒಂದು ಬಾರಿಯೂ ಮಳೆ ಬಂದಿಲ್ಲ. ತಾಲ್ಲೂಕಿನ ಮುಖ್ಯ ಬೆಳೆಯಾದ ಶೇಂಗಾ ಮತ್ತು ತೊಗರಿ ನೆಲೆ ಕಚ್ಚಿದ್ದು, ತಾಲ್ಲೂಕಿನಿಂದ ಸುಮಾರು 40 ಸಾವಿರ ಕೂಲಿಯಾಳುಗಳು ಬೆಂಗಳೂರು ಮತ್ತಿತರ ಕಡೆ ವಲಸೆ ಹೋಗಿದ್ದಾರೆ. ಅವರುಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಬೇಕು ಎಂದು ಕೇಂದ್ರ ತಂಡಕ್ಕೆ ರೈತ ಮತ್ತು ಹಸಿರುಸೇನೆ ತಾ. ಅಧ್ಯಕ್ಷ ಪೂಜಾರಪ್ಪ ಮನವಿ ಮಾಡಿಕೊಂಡರು.
ಬರಪೀಡಿತ ಪ್ರದೇಶವಾದ ತಾಲ್ಲೂಕಿನಲ್ಲಿ ಚೆಕ್ ಡ್ಯಾಂಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ವಹಿಸಿದ್ದು, ಈ ಕಾಮಗಾರಿಗಳ ಕೂಲಿ ಹಣ ತಕ್ಷಣ ಬಿಡುಗಡೆ ಗೊಳಿಸಬೇಕೆಂದು ಗೊರಸ್ಮಾವು ಹನುಮಂತರಾಯ ಜಿ.ಪಂ. ಸಿ.ಇ.ಒ. ಅನೀಸ್ಕಣ್ಮಣಿ ಜಾಯ್ ರವರಲ್ಲಿ ಒತ್ತಾಯಿಸಿದರು.
ತಹಸೀಲ್ದಾರ್ ವರದರಾಜು ಸೇರಿದಂತೆ ಕೃಷಿ ಅಧಿಕಾರಿ ಹನುಮಂತರಾಜು, ತೋಟಗಾರಿಕಾ ಸಹಾಯಕ ನಿರ್ದೇಶಕ ಸುಧಾಕರ್ ಮತ್ತಿತರರ ಅಧಿಕಾರಿಗಳು, ರೈತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
