ಬೆಳಗಾವಿ:
ಖಾನಾಪುರದ ಭೂತನಾಥ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರವೊಂದು ಪತ್ತೆಯಾಗಿದೆ.
ಶವದ ಪಕ್ಕದಲ್ಲಿ ಕಂಡು ಬಂದ ಗಾಂಧಿ ಟೋಪಿ, ಸ್ವೆಟರ್, ಚಪ್ಪಲಿ, ಪಂಡರಪುರದ ಮಾಲೆ, ಕನ್ನಡಕವನ್ನು ಗುರುತಿಸಿದ ಕುಟುಂಬಸ್ಥರು ಮೃತರನ್ನು ಖಾನಾಪುರ ತಾಲೂಕಿನ ಜಾಡಹಗಲಿ ಮಾರುತಿ ಪಣೇರಿ ಉಸುಳ್ಕರ್ (೭೪) ಎಂದು ಪತ್ತೆ ಮಾಡಿದ್ದಾರೆ.
ಸೆ.೧ರಂದು ಏಕಾದಶಿಗೆ ಪಂಡರಪುರಕ್ಕೆ ಹೊರಡುವುದಾಗಿ ಹೇಳಿ ಮನೆಯಿಂದ ಮಾರುತಿ ಅವರು ಹೊರಟಿದ್ದರು. ಆದರೆ ಅಲ್ಲಿಂದ ಬಹಳ ದಿನಗಳ ನಂತರವೂ ಮರಳಿ ಬರಲಿಲ್ಲ. ಪಂಡರಪುರದಿಂದ ಬೇರೆ ಕಡೆ ತೀರ್ಥಯಾತ್ರೆ ಹೋಗಿರಬಹುದೆಂದುಕೊಂಡು ಮನೆಯವರು ಪೊಲೀಸರಿಗೆ ನಾಪತ್ತೆ ದೂರು ನೀಡಿರಲಿಲ್ಲ ಎಂದು ಗೊತ್ತಾಗಿದೆ.
ಆದರೆ ನಿನ್ನೆ ಭೂತನಾಥ ಗುಡ್ಡಕ್ಕೆ ಸುತ್ತಾಡಲು ಹೋದ ಯುವ ಪ್ರೇಮಿಗಳ ಕಣ್ಣಿಗೆ ಅಸ್ಥಿಪಂಜರ ಕಂಡು ಬಂದಿದ್ದು, ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಬಳಿಕ ಖಾನಾಪುರ ಪೊಲೀಸರು ಸ್ಥಳಕ್ಕೆ ಬಂದು ಅಸಹಜ ಸಾವು ಪ್ರಕರಣ ದಾಖಲಿಸಿ ಮುಂದಿ ಕ್ರಮ ಕೈಗೊಂಡಿದ್ದಾರೆ. ಇದೊಂದು ಆತ್ಮಹತ್ಯೆಯೇ ಅಥವಾ ವೃದ್ಧನ ಬಳಿ ಇದ್ದ ಹಣಕ್ಕಾಗಿ ಕೊಲೆ ಮಾಡಿದ್ದರೇ ಎಂಬುದು ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ನಂತರವಷ್ಟೇ ತಿಳಿದುಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
