ಬೆಂಗಳೂರು:
ದೇಶದ ಅತ್ಯಂತ ಆಧುನಿಕ ವಿಮಾನಗಳಲ್ಲಿ ಒಂದಾದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವ ಇದೀಗ ಕಳ್ಳತನದ ಕೇಸ್ನಲ್ಲಿ ಸುದ್ದಿಯಲ್ಲಿದೆ. 2025ರ ಜನವರಿ 1ರಿಂದ ನವೆಂಬರ್ 27ರವರೆಗೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ ಮತ್ತು ಸರಕು ನಿರ್ವಹಣೆ ವೇಳೆ ಒಟ್ಟು 9 ಕಳ್ಳತನ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಬೆಂಗಳೂರಿನ ಕೆಐಎಯಲ್ಲಿ ಮಾತ್ರ 4 ಪ್ರಕರಣಗಳು ನಡೆದಿವೆ. ಉಳಿದಂತೆ ದೆಹಲಿ, ಮುಂಬೈ, ಹೈದರಾಬಾದ್, ನಾಗಪುರ ಮತ್ತು ರಾಜ್ಕೋಟ್ ವಿಮಾನ ನಿಲ್ದಾಣಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ತಿಳಿದು ಬಂದಿದೆ.
ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಕಾಯ್ದುಕೊಳ್ಳಲು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಎಲ್ಲಾ ಪ್ರದೇಶಗಳು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮತ್ತು ಏರ್ಲೈನ್ ಭದ್ರತಾ ಸಿಬ್ಬಂದಿಗಳ ನಡುವೆ ಸಹಕಾರವಿದೆ. ಗ್ರೌಂಡ್ ಸಿಬ್ಬಂದಿಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸುವುದು, ಬ್ಯಾಗೇಜ್ ಹ್ಯಾಂಡ್ಲಿಂಗ್ ಪ್ರದೇಶಗಳಲ್ಲಿ ಏರ್ಲೈನ್ ಭದ್ರತಾ ಸಿಬ್ಬಂದಿ ನಿಯೋಜನೆ ಮತ್ತು ಪೆಟ್ರೋಲಿಂಗ್ ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಆದರೂ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಆತಂಕಕಾರಿ ಸಂಗತಿ. ಪ್ರಯಾಣಿಕರು ಕಳ್ಳತನದ ಬಗ್ಗೆ ದೂರು ನೀಡಲು ಸಿಐಎಸ್ಎಫ್ ಸಹಾಯ ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಸಿಸಿಟಿವಿ ದೃಶ್ಯಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ವಿಶೇಷ ತರಬೇತಿ ಪಡೆದ ಸಿಬ್ಬಂದಿ ನಿಯೋಜಿತರಾಗಿದ್ದಾರೆ. ಕೇಂದ್ರ ಸರ್ಕಾರದ ಸಿಪಿಜಿಆರ್ಎಎಂಎಸ್ ಪೋರ್ಟಲ್, ಇನ್ಗ್ರಾಮ್ ಪೋರ್ಟಲ್ ಮತ್ತು ಏರ್ಸೇವಾ ಮೊಬೈಲ್ ಆಪ್/ವೆಬ್ ಪೋರ್ಟಲ್ ಮೂಲಕ ಪ್ರಯಾಣಿಕರು ದೂರುಗಳನ್ನು ಸಲ್ಲಿಸಬಹುದು. ಲಗೇಜ್ ತಪ್ಪು ನಿರ್ವಹಣೆ ಕುರಿತ ದೂರುಗಳನ್ನೂ ಇಲ್ಲಿ ದಾಖಲಿಸಬಹುದು.








