ಕೋಲಾರ:
ಮಂಗಳವಾರ ಸಂಜೆ ಕೋಲಾರ ಜಿಲ್ಲಾ ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ.ಕಂದಾಯ ಇಲಾಖೆಯ ಭೂ ಪರಿವರ್ತನೆಗೆ ಸಂಬಂಧಿಸಿದಂತೆ ದಾಖಲೆ ನೀಡಲು ಸಂಬಂಧಿಸಿದಂತೆ 25,000 ಲಂಚ ಬಯಸಿದ ಕೋಲಾರ ಜಿಲ್ಲಾಧಿಕಾರಿ ಕಚೇರಿಯ ಮೂವರು ನೌಕರರನ್ನು ತಮ್ಮ ಬಲೆಗೆ ಕೆಡವಿಕೊಂಡಿದ್ದಾರೆ. ಈ ರೀತಿ ಲೋಕಾಯುಕ್ತ ಬೆಲೆಗೆ ಬಿದ್ದವರಲ್ಲಿ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್ ಕುಮಾರ್ ಅವರು ಸಹ ಸೇರಿದ್ದಾರೆ ಎಂಬುದು ಗಮನಾರ್ಹ.
ಮಂಗಳವಾರ ಸಂಜೆ 5 ವೇಳೆಗೆ ನಡೆದ ಲೋಕಾಯುಕ್ತ ದಾಳಿಯ ಸಂದರ್ಭದಲ್ಲಿ ಕೋಲಾರ ಜಿಲ್ಲಾಧಿಕಾರಿ ಕಚೇರಿಯ ಜುಡಿಶಿಯಲ್ ಹೆಡ್ ಮುನ್ಷಿ ಶಿರಸ್ತೇದಾರ್ ಚಂದ್ರಪ್ಪ, ಪ್ರಥಮ ದರ್ಜೆ ಅಜಯ್ ಮತ್ತು ಕೋಲಾರ ತಾಲೂಕು ಸೂಲೂರಿನ ಗ್ರಾಮ ಸಹಾಯಕ ಮುನಿರಾಜು ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಈ ಪೈಕಿ ಲಂಚ ಸ್ವೀಕರಿಸುವ ವೇಳೆ ಕಚೇರಿಯಲ್ಲಿ ಹಾಜರಿದ್ದ ಚಂದ್ರಪ್ಪ ಮತ್ತು ಮುನಿರಾಜುರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು ಮುನಿರಾಜು ನೀಡಿದ ಹೇಳಿಕೆ ಆಧರಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಪ್ರಥಮ ದರ್ಜೆ ಸಹಾಯಕ ಅಜಯ್ ಕುಮಾರ್ ವಿರುದ್ಧವು ಕೇಸು ದಾಖಲಿಸಿ ಬಂಧನಕ್ಕೆ ಲೋಕಾಯುಕ್ತ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕೋಲಾರ ತಾಲೂಕಿನ ನರಸಾಪುರ ಹೋಬಳಿ ಸೂಲೂರು ಪಂಚಾಯಿತಿ ವ್ಯಾಪ್ತಿಯ ಮಂಜುನಾಥ್ ಎಂಬುವರು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದು ಅವರಿಗೆ ಅಗತ್ಯವಾದ ದಾಖಲೆಗಳನ್ನು ಕೊಡಲು 22 ಸಾವಿರ ರೂ. ಲಂಚವನ್ನು ಬಯಸಲಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಸೂಲೂರು ಗ್ರಾಮ ಸಹಾಯಕ ಮುನಿರಾಜು 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮುನಿರಾಜು ಮತ್ತು ಮಂಜುನಾಥ್ ನಡುವೆ ನಡೆದ ಟೆಲಿಫೋನ್ ಸಂಭಾಷಣೆಯಲ್ಲಿ ಅಜಯ್ ಹಾಗೂ ಚಂದ್ರಪ್ಪ ಹೆಸರುಗಳು ಪ್ರಸ್ತಾಪವಾಗಿದ್ದವು.
ಮಂಗಳವಾರ ಅಜಯ್ ಕುಮಾರ್ ನ್ಯಾಯಾಲಯಕ್ಕೆ ತೆರಳಿದ್ದ ಸಲುವಾಗಿ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು ಹುಡುಕಾಟ ನಡೆದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಕೋಲಾರ ಜಿಲ್ಲಾ ಆಡಳಿತದ ಶಕ್ತಿ ಕೇಂದ್ರವಾಗಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದಿರುವ ಎರಡನೇ ಲೋಕಾಯುಕ್ತ ದಾಳಿ ಪ್ರಕರಣ ಇದಾಗಿದೆ.
ಮಂಗಳವಾರ ಸಂಜೆ ಕೋಲಾರ ಜಿಲ್ಲಾಡಳಿತ ಕೇಂದ್ರದಲ್ಲಿ ಮೂವರು ಸಿಬ್ಬಂದಿಯನ್ನು ಬಲೆಗೆ ಕೆಡವಿಕೊಂಡಿರುವ ಲೋಕಾಯುಕ್ತ ಪೊಲೀಸರು ಬಾಋಗಳಿಂದ ತಿಂಗಳ ಮಾಮೂಲಿ ವಸೂಲಿ ಮಾಡುತ್ತಿದ್ದ ಮುಳಬಾಗಿಲು ತಾಲೂಕು ನಂಗಲಿ ಸಬ್ ಇನ್ಸ್ ಪೆಕ್ಟರ್ ಮತ್ತು ಗುಪ್ತದಳ ವಿಭಾಗದ ಪೇದೆಯನ್ನು ಬಂಧಿಸಿದ್ದಾರೆ.ಮುಳಬಾಗಿಲು ತಾಲೂಕು ನಂಗಲಿ ಗ್ರಾಮದ ಬಾರ್ ಮಾಲೀಕ ಪ್ರಶಾಂತ್ ಎಂಬುವರಿಂದ ತಿಂಗಳ ಮಾಮೂಲಿ 50, 000ರೂ. ಫಿಕ್ಸ್ ಮಾಡಿದ್ದ ನಂಗಲಿ ಸಬ್ ಇನ್ಸ್ಪೆಕ್ಟರ್ ಅರ್ಜುನ ಗೌಡ ಮಂಗಳವಾರ ಸಂಜೆ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಗುಪ್ತದಳದ ಪೇದೆ ಸುರೇಶ್ ಮೂಲಕ ಬಾರ್ಗೆ ತಿಂಗಳ ಮಾಮೂಲಿ ಹಣ ಫಿಕ್ಸ್ ಮಾಡಿ ಅರ್ಜುನಗೌಡ ವಸೂಲಿ ಮಾಡುತ್ತಿದ್ದರು.
ಈ ಸಂಬಂಧ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ನಂಗಲಿ ಪಿಎಸ್ಐ ಅರ್ಜುನ್ಗೌಡ ಮತ್ತು ಗುಪ್ತದಳದ ಪೇದೆ ಸುರೇಶ್ ಎಂಬುವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
