ನಾವೆಲ್ಲ ವಸುದೈವ ಕುಟುಂಬದಂತೆ ಬಾಳಬೇಕು – ಎಲೆರಾಂಪುರ ಶ್ರೀ

ಕೊರಟಗೆರೆ :

      ಮನುಷ್ಯನ ಆಧುನಿಕತೆಯಿಂದ ಪ್ರಾಕೃತಿಕ ಸಮತೋಲನ ಹಾಳಾಗುತ್ತಿದ್ದು, ಇದರಿಂದ ಮಳೆಯ ಅಸಮತೋಲನೆಗೆ ಧಾರ್ಮಿಕತೆಯನ್ನು  ಕಡೆಗಣಿಸಿರುವುದೇ ಮುಖ್ಯ ಕಾರಣವಾಗಿದೆ ಎಂದು ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀಶ್ರೀ ವೀರಭದ್ರಸ್ವಾಮೀಜಿ ತಿಳಿಸಿದರು.

ಅವರು ಪಟ್ಟಣದ ಇತಿಹಾಸ ಪ್ರಸಿದ್ದ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಕುಂಭಾಭಿಷೇಕದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಸ್ತ ಜೀವರಾಶಿಗೆ ನೀರಿಗೆ ಮೂಲ ಮಳೆಯೇ ಆಗಿದೆ. ಒಂದು ವರ್ಷ ಮಳೆಯು ಅಕಾಲಿಕವಾದರೆ ಆ ವರ್ಷದಲ್ಲಿ ಮನುಷ್ಯ, ಪ್ರಾಣಿ, ಸಸ್ಯ ಮತ್ತು ಸಮಸ್ತ ಜೀವರಾಶಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ಮನುಷ್ಯನು ಪ್ರಕೃತಿಯನ್ನು ಹಾಳು ಮಾಡುತ್ತಿರುವುದು. ಪ್ರಸ್ತುತ ಬಯಲು ಸೀಮೆಯ ನಾವೆಲ್ಲರು ಅಂತರ್ಜಲವನ್ನು ನಂಬಿಕೊಂಡಿದ್ದೇವೆ. ಆದರೆ ಅಂತರ್ಜಲದ ನೀರಿನ ಮಟ್ಟವು ಸಾವಿರ ಅಡಿ ಆಳಕ್ಕೆರ ಕುಸಿಯುತ್ತಿದೆ. ಆದ್ದರಿಂದ ನಿಯತಕಾಲಿಕವಾಗಿ ಮಳೆಯ ಅವಶ್ಯಕತೆ ಇದೆ. ಈ ಮಳೆಗಾಗಿ ಪುರಾತನ ಕಾಲದಿಂದಲು ಧಾರ್ಮಿಕ ಕೇಂದ್ರ ಮತ್ತು ದೇವಸ್ಥಾನಗಳಲ್ಲಿ ಪ್ರತಿ ವರ್ಷ ಹೋಮ, ಹವನ, ಕುಂಭಾಬಿಷೇಕಗಳಂತಹ ಪ್ರಾಕೃತಿಕ, ವೈಜ್ಞಾನಿಕ, ಧಾರ್ಮಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದ ಕಾರಣ ಸಮರ್ಪಕ ಮಳೆಯಾಗುತ್ತಿತ್ತು. ಇಂತಹ ದೈವಿಕ ಕಾರ್ಯವನ್ನು ಗಂಗಾಧರೇಶ್ವರ ಸೇವಾ ಸಮಿತಿ ಕೈಗೊಂಡಿರುವುದು ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ ಎಂದರು.

     ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಊರಿನ ಎಲ್ಲಾ ಮುಖಂಡರು ಒಗ್ಗೂಡಿ ಸಾಮಾಜಿಕ ಬದ್ದತೆಯಿಂದ ದೈವಿಕ ಕಾರ್ಯಗಳನ್ನು ಮಾಡಿದರೆ ಉತ್ತಮ ಸಮಾಜ ನಿರ್ಮಾಣವಾಗುವುದರೊಂದಿಗೆ ಜಾತಿ ಮತ್ತು ಕೀಳರಿಮೆಯ ಮನೋಭಾವವು ಹೋಗುತ್ತದೆ. ನಾವೆಲ್ಲರು ಒಂದೇ ವಸುದೈವ ಕುಟುಂಬದಂತೆ ಬಾಳಬೇಕು. ನಮ್ಮಲ್ಲಿರುವ ಅಜ್ಞಾನವನ್ನು ತೊರೆದು, ಪ್ರಕೃತಿಯನ್ನು ಹಾಳು ಮಾಡದೆ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಪ್ರಾಕೃತಿಕ ಅಸಮತೋಲನತೆಗೆ ನಮ್ಮ ತಪ್ಪುಗಳೆ ಕಾರಣ ಎಂದರು.

      ಈ ಸಂದರ್ಭದಲ್ಲಿ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ವರುಣ ಹೋಮ, ಕುಂಭಾಬಿಷೇಕ, ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಲಾರಿ ಮಲ್ಲಣ್ಣ, ಎಂ.ಜಿ.ಸುಧೀರ್, ಎಂ.ಜಿ.ಬದ್ರಿನಾಥ್, ನವೀನ್‍ಕುಮಾರ್ ಗುಪ್ತ, ಪ.ಪಂ ಸದಸ್ಯ ಕೆ.ಎನ್ ಲಕ್ಷ್ಮೀನಾರಾಯಣ್, ಪುಟ್ಟನರಸಯ್ಯ, ಪ್ರದೀಪ್, ನಾಗರಾಜು, ನಂದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪವನ್‍ಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ, ಸಮಿತಿಯ ಸದಸ್ಯರುಗಳಾದ ಎಸ್.ಎನ್ ಆರಾಧ್ಯ, ಕೆ.ಎಂ ಸುರೇಶ್, ಕೆ.ಬಿ ಲೋಕೇಶ್, ತುಂಗಾ ಮಂಜುನಾಥ್, ಆಟೋಕುಮಾರ್, ರಾಜಣ್ಣ, ಮುಖಂಡರುಗಳಾದ ಸತ್ಯನಾರಾಯಣ್, ಸಿದ್ದಮಲ್ಲಪ್ಪ, ಸುನೀಲ್, ರಮೇಶ್, ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link