ಕೊರಟಗೆರೆ :
ಹಾಡುಹಗಲಲ್ಲೇ ಮನೆ ಮಾಲೀಕ ಜಮೀನಿನ ಕಡೆ ಹೋಗುವುದನ್ನೇ ಕಾದಿದ್ದ ಕಳ್ಳರು ಮನೆ ಕಳ್ಳತನ ಮಾಡಿ ಮನೆಯಲ್ಲಿದ್ದ 42 ಗ್ರಾಂ ಚಿನ್ನಾಭರಣ ಸೇರಿದಂತೆ 10ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಇರಕಸಂದ್ರ ಕಾಲನಿಯಲ್ಲಿ ಜರುಗಿದೆ.
ಮನೆ ಮಾಲೀಕ ಲಕ್ಷ್ಮೀಶಯ್ಯ ಮತ್ತು ಅವನ ಹೆಂಡತಿ ದನಗಳನ್ನು ಮೇಯಿಸಲು ಜಮೀನು ಹತ್ತಿರಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಕಳ್ಳರು ಬುಧವಾರ ಮಧ್ಯಾಹ್ನ ಯಾರೂ ಇಲ್ಲದ್ದನ್ನು ಗಮನಿಸಿ 42 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ನಗದನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಮನೆ ಮಾಲೀಕರು ಹೊರ ಹೋಗುವುದನ್ನೇ ಹೊಂಚು ಹಾಕಿರುವ ಕಳ್ಳರು ಮನೆಯ ಮಾಲೀಕ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಮನೆಯ ಹತ್ತಿರ ಬಚ್ಚಿಡುವುದನ್ನು ಗಮನಿಸಿ, ನಂತರ ಮನೆಯ ಕೀ ತೆಗೆದು ಒಳಪ್ರವೇಶಿಸಿ ಬೀರುವಿನಲ್ಲಿದ್ದ 34 ಗ್ರಾಂ ಚಿನ್ನದ ಚೈನ್ ಹಾಗೂ 7 ಗ್ರಾಂ ಉಂಗುರ ಮತ್ತು ಸುಮಾರು 10 ಸಾವಿರ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಹಾಡಹಗಲೇ ರಾಜ್ಯ ಹೆದ್ದಾರಿ ಬೆಂಗಳೂರು ಹಾಗೂ ಪಾವಗಡ ಪ್ರಮುಖ ರಸ್ತೆಗೆ ಹೊಂದಿಕೊಂಡಂತಿರುವ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಮಾಲೀಕರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಜಮೀನಿನ ಕೆಲಸದ ಆಳುಗಳಿಗೆ ಹಣ ನೀಡಲು ಬೀರು ಪರೀಕ್ಷಿಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ ಎನ್ನಲಾಗಿದೆ.
ಈ ಸಂಬಂಧ ತಾಲ್ಲೂಕಿನ ಕೋಳಾಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
