ಕೊರಟಗೆರೆ:
ಬಗರ್ಹುಕುಂ ಕಮಿಟಿಯಿಂದ ಮಂಜೂರಾಗಿ ಕಿಮ್ಮತ್ತು ಕಟ್ಟಿಸಿಕೊಂಡು ಸಾಗುವಳಿ ಚೀಟಿ ಕೊಡದೆ ಕೊರಟಗೆರೆ ಕ್ಷೇತ್ರದ 400 ಕ್ಕೂ ಹೆಚ್ಚು ಗ್ರಾಮೀಣ ರೈತರಿಗೆ ಕಳೆದ 20 ವರ್ಷದಿಂದ ಪ್ರತಿನಿತ್ಯ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕೊರಟಗೆರೆ ಕಂದಾಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಪಂ ವ್ಯಾಪ್ತಿಯ ಅಕ್ಕಾಜಿಹಳ್ಳಿ ಗ್ರಾಮದ ಸರ್ವೇ ನಂಬರ್ 33ರಲ್ಲಿ ಕಳೆದ 30 ವರ್ಷದಿಂದ ಔದಾರನಹಳ್ಳಿ ಗ್ರಾಮದ ದಾಳಿನರಸಿಂಹಯ್ಯ ಮತ್ತು ಕಾಮಯ್ಯ ಎಂಬಾತ 4 ಎಕರೆ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. 1991-92ರಲ್ಲಿ ಅರ್ಜಿ ಸಲ್ಲಿಸಿ 2003 ರಲ್ಲಿ ಟಿ ಟಿ ಕಟ್ಟಿರುವ ಜಮೀನು ಅನಧಿಕೃತವಾಗಿ ಬೆಂಗಳೂರು ಮೂಲದ 4 ಜನರ ಹೆಸರಿಗೆ 2017-18 ರಲ್ಲಿ ಸಾಗುವಳಿ ಚೀಟಿ ಕೊಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಕ್ಕಾಗಿ ಎಸಿ ಕಾಲಿಗೆ ಬಿದ್ದ ರೈತ :
ಅಕ್ಕಾಜಿಹಳ್ಳಿ ಸರ್ವೆ ನಂ.33ರಲ್ಲಿ ಕಳೆದ 30 ವರ್ಷದಿಂದ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದೇನೆ. ಸರಕಾರಕ್ಕೆ ನಾನು ಕಟ್ಟಿರುವ ಎಲ್ಲಾ ದಾಖಲೆಯನ್ನು ತಹಸೀಲ್ದಾರ್ಗೆ ನೀಡಿದ್ದೇನೆ. ಬೆಂಗಳೂರು ಮೂಲದ ಶ್ರೀಮಂತರಿಗೆ ನಾನು ಉಳುಮೆ ಮಾಡುತ್ತಿರುವ ಜಮೀನಿನ ಸಾಗುವಳಿ ಚೀಟಿ ನೀಡಲಾಗಿದೆ. ದಯವಿಟ್ಟು ನನಗೆ ನ್ಯಾಯದ ಜೊತೆ ಭದ್ರತೆ ನೀಡಬೇಕು ಎಂದು ಅಕ್ಕಾಜಿ ಹಳ್ಳಿ ರೈತ ದಾಳಿ ನರಸಿಂಹಯ್ಯ ಮಧುಗಿರಿ ಎಸಿ ಡಾ.ನಂದಿನಿದೇವಿ ಕಾಲಿಗೆ ಬಿದ್ದು ಮನವಿ ಮಾಡಿದ ಘಟನೆ ನಡೆದಿದೆ.
ಜನಸ್ನೇಹಿ ಅಧಿಕಾರಿ ಆದ ಮಧುಗಿರಿ ಎಸಿ :
ರೈತಸಂಘದ ಜಿಲ್ಲಾಧ್ಯಕ್ಷ ಮತ್ತು ರೈತಮುಖಂಡರ ಸಭೆಯಲ್ಲಿ ಕೊರಟಗೆರೆ ರೈತರ ಸಮಸ್ಯೆಗಳ ಮಾಹಿತಿ ಪಡೆದ ಮಧುಗಿರಿ ಎಸಿ ಡಾ.ನಂದಿನಿದೇವಿ 20 ದಿನದಲ್ಲಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು. ನಂತರ ರೈತರ ಬಳಿಯೆ ತೆರಳಿ ಎರಡು ಗಂಟೆಗಳ ಕಾಲ ರೈತರ ಸಮಸ್ಯೆ ಮತ್ತು ಮನವಿಯನ್ನು ಆಲಿಸಿ, 180 ಕ್ಕೂ ಅಧಿಕ ಅಹವಾಲು ಸ್ವೀಕರಿಸಿ, ತಕ್ಷಣ ಬಗೆಹರಿಸುವಂತೆ ತಹಸೀಲ್ದಾರ್ ಗೋವಿಂದರಾಜುಗೆ ಸೂಚನೆ ನೀಡಿ ಜನಸ್ನೇಹಿ ಅಧಿಕಾರಿಯಾಗಿ ರೈತರಿಂದ ಮೆಚ್ಚುಗೆಗೆ ಪಾತ್ರರಾದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಆನಂದಪಟೇಲ್, ಕಾರ್ಯದರ್ಶಿ ರುದ್ರೇಶಗೌಡ, ಕೊರಟಗೆರೆ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಪುಟ್ಟರಾಜು, ಮುಖಂಡರಾದ ದಾಸಗಿರಿಯಪ್ಪ, ಮಂಜುನಾಥ, ಲಕ್ಷ್ಮನಾಯ್ಕ, ರಂಗನಾಥ್, ರವಿಕುಮಾರ್, ಚೇತನ್, ರಾಮಣ್ಣ, ಶಿವಕುಮಾರ್, ನಾಗರಾಜು, ಪ್ರಸನ್ನಕುಮಾರ, ಗೋವಿಂದರಾಜು, ನರಸಿಂಹಮೂರ್ತಿ, ಪುಟ್ಟನರಸಪ್ಪ, ಕೃಷ್ಣಪ್ಪ, ರವಿಶಂಕರ್ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
ಅಕ್ಕಾಜಿಹಳ್ಳಿ ಸರ್ವೆ ನಂ.33ರಲ್ಲಿ ಬೆಂಗಳೂರು ಮೂಲದ 4 ಜನರಿಗೆ ಆಗಿರುವ ಸಾಗುವಳಿ ಮಂಜೂರಾತಿ ಆದೇಶದ ದಾಖಲೆ ಪರಿಶೀಲನೆ ನಡೆಸುತ್ತೇನೆ. ಕೊರಟಗೆರೆ ರೈತರಿಗೆ ಮಂಜೂರು ಆಗಿರುವ ಸಾಗುವಳಿ ಚೀಟಿ ನೀಡಲು ಈಗಾಗಲೆ ತಹಸೀಲ್ದಾರ್ಗೆ ಸೂಚಿಸಿದ್ದೇನೆ. ಸಾಗುವಳಿ ಜಮೀನಿನಲ್ಲಿ ಮನೆ ನಿರ್ಮಿಸಲು ಅವಕಾಶವಿಲ್ಲ. 180 ಕ್ಕೂ ಅಧಿಕ ರೈತರಿಂದ ಅಹವಾಲು ಸ್ವೀಕರಿಸಲಾಗಿದೆ.
-ಡಾ.ನಂದಿನಿದೇವಿ. ಎಸಿ. ಮಧುಗಿರಿ
ರೈತರಿಗೆ ಮಂಜೂರು ಆಗಿರುವ ಸಾಗುವಳಿ ಚೀಟಿ ನೀಡದಿರಲು ಕಾರಣವೇನು ಎಂಬುದೇ ಯಕ್ಷಪ್ರಶ್ನೆ. ಬೆಂಗಳೂರು ಮೂಲದ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಸಾಗುವಳಿ ಚೀಟಿಯ ಆದೇಶವನ್ನು ತಕ್ಷಣ ರದ್ದುಪಡಿಸಿ ಅನಧಿಕೃತವಾಗಿ ಕಟ್ಟಿರುವ ಮನೆಯಲ್ಲಿ ತೆರವು ಗೊಳಿಸಬೇಕಾಗಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆ ರೈತರ ಧ್ವನಿಯಾಗಿ ಕೆಲಸ ಮಾಡಬೇಕಾಗಿದೆ. ರೈತರ ಪರವಾಗಿ ಕೆಲಸ ಮಾಡುವ ಪತ್ರಕರ್ತರ ಪರವಾಗಿ ನಾವಿದ್ದೇವೆ.
-ಆನಂದ್ಪಟೇಲ್, ರೈತಸಂಘ ಜಿಲ್ಲಾಧ್ಯಕ್ಷ, ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
