ಕೊರಟಗೆರೆ:
ಪ್ರತಿ ನಿತ್ಯ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರಟಗೆರೆ ತಾಲೂಕಿನಲ್ಲೂ ಪ್ರಕರಣ ಹಿಡಿತಕ್ಕೆ ಬಾರದೆ ದಿನೇ ದನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ರೋಗ ಹತೋಟಿಗೆ ತರುವ ಹಿನ್ನೆಲೆಯಲ್ಲಿ ಕೊರಟಗೆರೆ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳನ್ನು ಸರ್ಕಾರದ ಮಾರ್ಗ ಸೂಚಿಯಂತೆ ಸಂಪೂರ್ಣ ಬಂದ್ ಮಾಡಿಸಿ ಜನತೆಗೆ ತಾಲ್ಲೂಕು ಆಡಳಿತ ಶಾಕ್ ನೀಡಿದೆ.
ಕಳೆದ ಒಂದು ವಾರದಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಕೊರೋನಾ ಮಾರ್ಗಸೂಚಿ ಪ್ರಕಾರ ಪ್ರತಿಯೊಬ್ಬರು ಮಾಸ್ಕ್ ಮತ್ತು ವ್ಯಕ್ತಿಗತ ಅಂತರ ಅನುಸರಿಸಲು ವಿಫಲವಾಗುತ್ತಿರುವ ಹಿನ್ನಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನೇ ದನೇ ರೋಗಿಗಳ ದಾಖಲಾತಿ ಹೆಚ್ಚುತ್ತಿರುವುದು ಕಂಡು ಬರುತ್ತಿದ್ದು, ಜಿಲ್ಲಾಧಿಕಾರಿಗಳ ಮಾರ್ಗಸೂಚಿಯ ಮೇರೆಗೆ ಕೊರಟಗೆರೆ ತಾಲ್ಲೂಕು ಆಡಳಿತ ಕೊರಟಗೆರೆಯಲ್ಲಿ ಕಠಿಣ ಕ್ರಮ ಕೈಗೊಂಡು ಅಗತ್ಯ ವಸ್ತುಗಳಾದ ಹಣ್ಣು, ಹಾಲು, ತರಕಾರಿ, ಬೇಕರಿ ಮತ್ತು ದಿನಸಿ ಸಾಮಗ್ರಿಗಳನ್ನು ಹೊರತುಪಡಿಸಿ ಇನ್ನಿತರ ಎಲ್ಲಾ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿಸಲಾಗಿದ್ದು, ಹೊಸ ಮಾರ್ಗಸೂಚಿ ಪ್ರಕಾರ ನ್ಯಾಯಬೆಲೆ ಅಂಗಡಿ, ದಿನಸಿ ಅಂಗಡಿ, ಹಾಲಿನ ಬೂತ್, ಮೀನು, ಮಾಂಸ ಮಾರಾಟ ಇರುತ್ತದೆ, ಹಾಗೂ ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ಪಾರ್ಸಲ್ಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಶೇಕಡಾ 50 ರಷ್ಟು ಸಿಬ್ಬಂದಿ ಮಾತ್ರ ಹಾಜರಾಗಬೇಕು ಉಳಿದ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ತಹಶೀಲ್ದಾರ್ ಮನವಿ:
ತಾಲ್ಲೂಕಿನಲ್ಲಿ ಇತ್ತಿಚೆಗೆ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 144 ಸೆಕ್ಷನ್ ಅನ್ವಯ ದಿನಸಿ ಅಂಗಡಿ, ತರಕಾರಿ, ಹಣ್ಣು, ಹಾಲು, ಮೆಡಿಕಲ್, ಹಾರ್ಡ್ ವೇರ್ ಹಾಗೂ ಸಿಮೆಂಟ್ ಅಂಗಡಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿದ್ದು, ಅಂಗಡಿ ಮಾಲೀಕರು ಸಹಕರಿಸಬೇಕು ಹಾಗೆಯೇ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದನ್ನು ತಪ್ಪಿಸಿ ಪ್ರತಿಯೊಬ್ಬ ನಾಗರೀಕನು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ದೇಶಕ್ಕೆ ಕಂಟಕ ಪ್ರಾಯವಾಗಿರುವ ಮಹಾ ಮಾರಿಯಾದ ಕೊರೋನಾದಿಂದ ಮುಕ್ತಿ ಪಡೆಯಲು ಇದೊಂದೇ ಮಾರ್ಗ ಆದ್ದರಿಂದ ಎಲ್ಲಾ ಸಾರ್ವಜನಿಕರು ಸಹಕರಿಸುವಂತೆ ತಹಶೀಲ್ದಾರ್ ಗೋವಿಂದರಾಜು ಮನವಿ ಮಾಡಿದ್ದಾರೆ.
ಮೇ4 ವರೆಗೆ ಏನೇನು ಇರುತ್ತೆ:
ದಿನಬಳಕೆ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ದಿನಸಿ, ಮೆಡಿಕಲ್, ಸಾಮಾಗ್ರಿಗಳು, ಕಟ್ಟಡ ಸಾಮಗ್ರಿ ಅಂಗಡಿಗಳು ತೆರೆದಿರುತ್ತವೆ.
ಏನೇನು ಇರಲ್ಲ:
ಬಟ್ಟೆ ಅಂಗಡಿ, ಒಡವೆ ಅಂಗಡಿ, ಟೀ ಕಾಫಿ, ಮೊಬೈಲ್, ಚಪ್ಪಲಿ ಅಂಗಡಿಗಳು, ಫೋಟೋ, ವೀಡಿಯೊ-ಸ್ಟುಡಿಯೊಗಳು, ದೊಡ್ಡ ದೊಡ್ಡ ಮಾಲ್ಗಳು, ಸಿನಿಮಾ ಥಿಯೇಟರ್ಗಳು, ಜಿಮ್ಗಳು, ಕಂಪ್ಯೂಟರ್ ತರಬೇತಿ ಕೇಂದ್ರಗಳು, ಈಜುಕೊಳ, ಬೀದಿ ಬದಿ ವ್ಯಾಪಾರ ಸೇರಿದಂತೆ ಇನ್ನಿತರ ಅಂಗಡಿಗಳು ಇರುವುದಿಲ್ಲ. ಮೇಲ್ಕಂಡ ಅಂಗಡಿಗಳು ವಹಿವಾಟು ನಡೆಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
