ಕೊರಟಗೆರೆ :
ಪಟ್ಟಣದ ಜನರ ಸುರಕ್ಷತೆಯೊಂದಿಗೆ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಮತ್ತು ಸಿಬ್ಬಂದಿಯ ಆರೋಗ್ಯವು ಸಹ ಅತ್ಯಂತ ಮುಖ್ಯವಾದುದು ಎಂದು ಅಧ್ಯಕ್ಷೆ ಮಂಜುಳಾ ಸತ್ಯನಾರಾಯಣ್ ತಿಳಿಸಿದರು.
ಅವರು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪೌರಕಾರ್ಮಿಕರಿಗೆ ಮತ್ತು ಸಿಬ್ಬಂದಿಗೆ ಆರೋಗ್ಯ ಕಿಟ್ ವಿತರಿಸಿ ಮಾತನಾಡಿದರು. ಕೊರೋನಾ ರಾಜ್ಯದಲ್ಲೆಡೆ ವ್ಯಾಪಿಸುತ್ತಿದ್ದು, ಕೊರಟಗೆರೆ ಪಟ್ಟಣದಲ್ಲೂ ಸಹ ಹರಡುತ್ತಿದೆ. ಪಟ್ಟಣಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಸಹ ಬಂದು ಹೋಗುವುದರಿಂದ ರೋಗ ಹರಡುವಿಕೆ ಮತ್ತಷ್ಟು ತೀವ್ರಗೊಂಡಿದೆ. ಆದ್ದರಿಂದ ಪಟ್ಣಣವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕಾಗಿದ್ದು ಇದಕ್ಕೆ ಪೌರಕಾರ್ಮಿಕರ ಮತ್ತು ಸಿಬ್ಬಂದಿಯ ಶ್ರಮ ಅತ್ಯಗತ್ಯವಾಗಿದೆ. ಆದರೆ ಇವರುಗಳ ಆರೋಗ್ಯ ಪ.ಪಂ.ನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ಅವರ ರಕ್ಷಣೆಗೆ ಆರೋಗ್ಯ ಕಿಟ್ ಗಳನ್ನು ವಿತರಿಸುತ್ತಿದ್ದೇವೆ ಎಂದರು.
ಮುಖ್ಯಾಧಿಕಾರಿ ಲಕ್ಷ್ಮಣ್ಕುಮಾರ್ ಮಾತನಾಡಿ, ಪೌರಕಾರ್ಮಿರ ಮತ್ತು ಸಿಬ್ಬಂದಿಯ ಆರೋಗ್ಯ ಮತ್ತು ಯೋಗಕ್ಷೇಮ ಪಟ್ಟಣ ಪಂಚಾಯಿತಿಯ ಕರ್ತವ್ಯವಾಗಿದೆ. ಅದಕ್ಕಾಗಿ ಮೊದಲ ಹಂತವಾಗಿ ಅವರ ಆರೋಗ್ಯ ರಕ್ಷಣೆಗೆ ಕಿಟ್ಗಳನ್ನು ವಿತರಿಸುತ್ತಿದ್ದೇವೆ. ಪಟ್ಟಣ ಪಂಚಾಯಿತಿಯು ಪ್ರಸ್ತುತ ಪ್ರಥಮ ಆದ್ಯತೆಯನ್ನು ಕೊರೋನಾ ರೋಗ ತಡೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ಮುಂಬರುವ ದಿನಗಳಲ್ಲಿ ಪ್ರತಿ ವಾರ್ಡ್ಗೂ ಕ್ರಿಮಿನಾಶಕಗಳನ್ನು ಸಿಂಪಡಿಸಿ ಸ್ವಚ್ಛತೆಗೆ ಪ್ರಯತ್ನಿಸಲಾಗುವುದು ಹಾಗೂ ಕೊರೋನಾ ನಿಯಮಗಳನ್ನು ಪಟ್ಟಣದಲ್ಲಿ ವಾಸವಿರುವ ಜನರು ಮತ್ತು ಹೊರಗಿನಿಂದ ಬರುವ ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ ಅವರು, ಪಟ್ಟಣದ ಜನತೆ ಸ್ವಚ್ಛತೆಯಲ್ಲಿ ನಮ್ಮ ಪೌರಕಾರ್ಮಿಕರಿಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು.
ಆರೋಗ್ಯ ನಿರೀಕ್ಷಕ ರೈಸ್ಅಹಮದ್ ಮಾತನಾಡಿ, ಕೊರೋನಾ ಭೀಕರತೆ ನಿವಾರಿಸಲು ಸ್ವಚ್ಛತೆ ಅತ್ಯಂತ ಮುಖ್ಯವಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ನಮ್ಮ ಪೌರಕಾರ್ಮಿಕರು ಯಾವುದೇ ಭೀತಿ ಪಡದೆ ನಗರದ ಸ್ವಚ್ಛತೆಯನ್ನು ಮಾಡುತ್ತಿದ್ದಾರೆ. ಪೌರಕಾರ್ಮಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷ ವೀರಭದ್ರ್ರಾಚಾರ್, ಸಿಬ್ಬಂದಿಗಳಾದ ಮಹೇಶ್, ರಂಗಸ್ವಾಮಿ, ಶೈಲೇಂದ್ರ, ಮಹೇಶ್ವರಿ, ಸಾವಿತ್ರಮ್ಮ, ನಾಗರತ್ನಮ್ಮ, ವನಿತಾ, ಗಜಲಕ್ಷ್ಮೀ, ನಾರಾಯಣ್, ಮಂಜುನಾಥ್, ಗೋಪಾಲ್, ರಾಮಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/04/29-4-2021-koratagere-photo-01-scaled.jpg)