ತುಮಕೂರು : ರೆಡ್‍ಝ್ಹೋನ್’ಗಳಿಗೆ ಭೇಟಿ ನೀಡಿ ಸೋಂಕಿತರಲ್ಲಿ ಆತ್ಮಬಲ ತುಂಬಿದ ಡಿಸಿ!!

ಕೊರಟಗೆರೆ : 

ಕೊರೋನಾ ಹಾಟ್‍ಸ್ಪಾಟ್ ಹಾಗೂ ರೆಡ್‍ಝ್ಹೋನ್ ವ್ಯಾಪ್ತಿಯ ಕೆಲವು ಗ್ರಾಪಂಗಳ ಮನೆಗಳಿಗೆ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ, ಕೊರೋನಾ ಸೋಂಕಿತರ ಆರೋಗ್ಯ ವಿಚಾರಿಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು. ಈ ಮೂಲಕ ಸಾರ್ವಜನಿಕರಿಗೆ ಕೊರೋನಾ ಬಗ್ಗೆ ಅರಿವು ಮೂಡಿಸುವಂತ ಕಾರ್ಯ ಶುಕ್ರವಾರ ಕೊರಟಗೆರೆ ತಾಲ್ಲೂಕಿನಲ್ಲಿ ಜರುಗಿತು.

      ಕೊರಟಗೆರೆ ತಾಲ್ಲೂಕಿನ ಕಸಬಾ ಮತ್ತು ಕೋಳಾಲ ಹೋಬಳಿಯ ಜೆಟ್ಟಿ ಅಗ್ರಹಾರ, ತೀತಾ, ನೀಲಗೊಂಡನಹಳ್ಳಿ, ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಕೊರೊನಾ ರೆಡ್‍ಝ್ಹೋನ್ ಹಾಗೂ ಹಾಟ್‍ಸ್ಪಾಟ್ ಗ್ರಾಮಗಳ 25ಕ್ಕೂ ಅಧಿಕ ಕೊರೊನಾ ಸೋಂಕಿತರ ಮನೆಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುದ್ದು ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿ ಪ್ರತಿನಿತ್ಯ ಆರೋಗ್ಯ ತಪಾಸಣೆ ನಡೆಸುವಂತೆ ಆರೋಗ್ಯ, ಅಂಗನವಾಡಿ, ಆಶಾ ಮತ್ತು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

      ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಕೊರೊನಾ ರೋಗ ಹರಡುವಿಕೆ ತಡೆಗಟ್ಟಲು ರೆಡ್ ಝ್ಹೋನ್ ಮತ್ತು ಹಾಟ್‍ಸ್ಪಾಟ್ ಎಂದು ಗುರುತಿಸಿ, ತುರ್ತು ಆರೋಗ್ಯ ಸೇವೆಗೆ ಸೂಚಿಸಲಾಗಿದೆ. ಪಾಸಿಟೀವ್ ವರದಿ ಬಂದ 24 ಗಂಟೆಯೊಳಗೆ ಜೀವರಕ್ಷಕ ಸೌಲಭ್ಯ ನೀಡುತ್ತೇವೆ. ಆಮ್ಲಜನಕ ಕಡಿಮೆಯಾಗಿ ಆಸ್ಪತ್ರೆಗಳಿಗೆ ದಾಖಲಾಗುವ ಪ್ರಕರಣ ಕಡಿಮೆ ಆಗುತ್ತಿದೆ. ಜನಸಾಮಾನ್ಯರು ಭಯಪಡದೆ ಧೈರ್ಯದಿಂದ ಕೊರೊನಾ ರೋಗದ ವಿರುದ್ದ ನಾವೆಲ್ಲರೂ ಒಂದಾಗಿ ಹೋರಾಡೊಣ ಎಂದು ತಿಳಿಸಿದರು

      ಕೊರಟಗೆರೆ ಟಾಸ್ಕ್‍ಫೋರ್ಸ್, ಆರೋಗ್ಯ ಇಲಾಖೆ, ಗ್ರಾಪಂ ಟಾಸ್ಕ್‍ಫೋರ್ಸ್, ಅಂಗನವಾಡಿ, ಆಶಾ ಕಾರ್ಯಕರ್ತರು ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ಕೊರೊನಾ ಸೋಂಕಿತರು ಗಣನೀಯವಾಗಿ ಕಡಿಮೆಯಾಗುತ್ತಾರೆ. ಪಾಸಿಟೀವಿಟಿ ರೇಟ್ 2400 ರಿಂದ 1400 ಕ್ಕೆ ಇಳಿಮುಖ ಕಂಡಿದೆ. ಗ್ರಾಮೀಣ ಜನತೆ ಕಟ್ಟುನಿಟ್ಟಿನ ಲಾಕ್‍ಡೌನ್ ಪಾಲಿಸಿದರೆ ಕೊರೊನಾ ರೋಗದ ವಿರುದ್ದ ಗೆಲುವು ನಮ್ಮದಾಗಲಿದೆ. ಕೊರೊನಾ ಸೈನಿಕರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ ಮಾತನಾಡಿ ರೆಡ್‍ಝ್ಹೋನ್ ಮತ್ತು ಹಾಟ್‍ಸ್ಪಾಟ್‍ನ ಕೊರೋನಾ ಸೋಂಕಿತರು ಯಾವುದೇ ಕಾರಣಕ್ಕೂ ಹೊರಗೆ ಬಾರದೆ, ಸೋಂಕು ಹರಡದ ರೀತಿಯಲ್ಲಿ ಮುಂಜಾಗ್ರತೆ ವಹಿಸಬೇಕು. ಗಡಿ ಭಾಗದಿಂದ ಹೊರರಾಜ್ಯ ಹಾಗೂ ಜಿಲ್ಲೆಯವರು ಹೆಚ್ಚು ಸಂಪರ್ಕಕ್ಕೆ ಬಾರದ ರೀತಿಯಲ್ಲಿ ಗಡಿಯಲ್ಲಿರುವವರು ಎಚ್ಚರಿಕೆ ವಹಿಸಬೇಕು. ಜೊತೆಗೆ ಅನಾವಶ್ಯಕವಾಗಿ ಅಲೆದಾಡುವವರ ವಾಹನಗಳನ್ನು ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದು, ಕೊರೋನಾ ನಿರ್ವಹಣೆಯಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.

ಗ್ರಾಪಂಯಿಂದ ಹೆಲ್ತ್ ಕಿಟ್ :

ನೀಲಗೊಂಡನಹಳ್ಳಿ ಗ್ರಾಪಂ ಟಾಸ್ಕ್‍ಫೋರ್ಸ್ ಕಮಿಟಿಯಿಂದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಪಲ್ಸ್ ಆಕ್ಸಿಮೀಟರ್ ಮತ್ತು ಎನ್95 ಮಾಸ್ಕ್‍ಗಳನ್ನು ಜಿಲ್ಲಾಧಿಕಾರಿ ಹಸ್ತಾಂತರ ಮಾಡಿದರು. ನಂತರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಮತ್ತು ಸಿಬ್ಬಂದಿ ವರ್ಗ ಕೊರೊನಾ ಸೋಂಕಿತರ ಪ್ರತಿ ಮನೆ ಮನೆಗೆ ಸುಮಾರು 35 ಸಾವಿರ ವೆಚ್ಚದ ಮಾತ್ರೆಗಳ ಕಿಟ್‍ಗಳನ್ನು ವಿಸ್ತರಿಸಿ ಆತ್ಮಬಲ ತುಂಬುವ ಪ್ರಯತ್ನ ಮಾಡಿದರು.

      ಭೇಟಿಯ ವೇಳೆ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ತಾಪಂ ಆಡಳಿತಾಧಿಕಾರಿ ಅಶೋಕ್, ತಹಸೀಲ್ದಾರ್ ಗೋವಿಂದರಾಜು, ತಾಪಂ ಇಓ ಶಿವಪ್ರಕಾಶ್, ಟಿಎಚ್‍ಓ ವಿಜಯಕುಮಾರ್, ಸಿಪಿಐ ಸಿದ್ದರಾಮೇಶ್ವರ, ಪಿಎಸ್‍ಐ ಮಹಾಲಕ್ಷ್ಮೀ, ಗ್ರಾಪಂ ಪಿಡಿಓ ರಾಮಚಂದ್ರಯ್ಯ, ರಂಗನಾಥ, ಮಂಜುಳ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link