ಕೊರಟಗೆರೆ:
ಬಕ್ಪಿ ಜನರ ತುರ್ತು ಆರೋಗ್ಯ ರಕ್ಷಣೆಗಾಗಿ ಪಿಎಂ ಕೇರ್ಸ್ ನಿಧಿಯಿಂದ ಕರ್ನಾಟಕಕ್ಕೆ ಬಂದಂತಹ 2913 ವೆಂಟಿಲೇಟರ್ಗಳ ಮುಕ್ಕಾಲು ಭಾಗ ರಾಜ್ಯ ಸರಕಾರದ ನಿರ್ವಹಣೆ ವಿಫಲತೆಯಿಂದ ಸರಕಾರಿ ಆಸ್ಪತ್ರೆಗಳ ಕತ್ತಲೆ ಕೊಠಡಿಯಲ್ಲಿ ಕೊಳೆಯುತ್ತಿವೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಆರೋಪಿಸಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರವು ರಾಜ್ಯಕ್ಕೆ ನೀಡದಂತಹ ವೆಂಟಲೇಟರ್ಗಳು ಬಹುತ್ತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲೆಸೇರಿವೆ ಎಂದರು. ವೆಂಟಿಲೇಟರ್ಗಳು ಕಳಪೆ ಗುಣಮಟ್ಟ ಮತ್ತು ತಾಂತ್ರಿಕ ಸಮಸ್ಯೆಯಿಂದ ಕೂಡಿವೆ. ಇವುಗಳ ನಿರ್ವಹಣೆ, ಅಳವಡಿಕೆಗೆ ಸಿಬ್ಬಂದಿಗಳ ಕೊರತೆಯಿದೆ. ನುರಿತ ವೈದ್ಯರ ಹುದ್ದೆಗಳು ಸಂಪೂರ್ಣ ಖಾಲಿಯಿವೆ. ಕೇಂದ್ರ ಸರಕಾರದ ವಿರುದ್ದ ರಾಜ್ಯ ಸರಕಾರ ಮಾತನಾಡದೇ ಮೌನಕ್ಕೆ ಶರಣಾಗಿರುವುದು ಸಮಸ್ಯೆಗೆ ಮುಖ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಯುಸಿ ಪರೀಕ್ಷೆಯನ್ನು ರದ್ದುಪಡಿಸಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿದರೆ ಹೇಗೆ? ಕೇಂದ್ರ ಮತ್ತು ರಾಜ್ಯ ಸರಕಾರದ ಶಿಕ್ಷಣ ನೀತಿಯ ಉದ್ದೇಶಗಳು ಏನು ಎಂಬುದನ್ನು ಜನರಿಗೆ ತಿಳಿಸಬೇಕಿದೆ. ಪಿಯುಸಿ ಪರೀಕ್ಷೆ ರದ್ದುಪಡಿಸಿದರೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರದ್ದುಪಡಿಸಿಬೇಕು. ಇಲ್ಲವಾದರೆ ಎರಡು ಪರೀಕ್ಷೆಗಳು ನಡೆಯಲಿ ಎಂದು ಶಿಕ್ಷಣ ಇಲಾಖೆಯ ಆದೇಶದ ವಿರುದ್ದ ಕಿಡಿಕಾರಿದರು.
ಕೊರೊನಾ ರೋಗ ಹರಡುವಿಕೆ ತಡೆಗಟ್ಟಲು ಇನ್ನೆರಡು ವಾರ ಲಾಕ್ಡೌನ್ ಅನಿವಾರ್ಯ. 2020ರಲ್ಲಿ ರಾಜ್ಯ ಸರಕಾರ ಜನರಿಗೆ ನೀಡಿದ ಭರವಸೆಯು ಸುಳ್ಳಾಗಿದೆ. ಪ್ರಸ್ತುತ ಲಾಕ್ಡೌನ್ನಿಂದ ಜನರ ಆರ್ಥಿಕತೆ ದಿವಾಳಿ ಆಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಬಡ ಜನರ ನೆರವಿಗೆ ಬರಬೇಕಾಗಿದೆ. ಘೋಷಣೆ ಮಾಡಿರುವ ಪರಿಹಾರದ ಹಣವನ್ನು ತಕ್ಷಣ ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕೊರೊನಾ ಲಸಿಕೆಯು 45 ವರ್ಷ ಮೇಲ್ಪಟ್ಟ ಜನರಿಗೆ ಮಾತ್ರ ಸಿಮೀತವಾಗಿದೆ. ಯುವ ಭಾರತದ ಹೆಸರೇಳುವ ನರೇಂದ್ರ ಮೋದಿ ಯುವಕರಿಗೆ ಕೊರೊನಾ ಲಸಿಕೆ ನೀಡದಿರುವ ಕಾರಣವೇನು. ಕೇಂದ್ರ ಮತ್ತು ರಾಜ್ಯ ಸರಕಾರ ಯುವಕರಿಗೆ ಸುಳ್ಳು ಭರವಸೆ ನೀಡಿದಾರಿ ತಪ್ಪಿಸುತ್ತಿವೆ. ಯುವಕರಿಗೆ ತುರ್ತಾಗಿ ಉಚಿತ ಲಸಿಕೆ ನೀಡುವಂತಹ ಕೆಲಸ ಕೇಂದ್ರ ಮತ್ತು ರಾಜ್ಯ ಸರಕಾರ ಮಾಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/06/4-jun-koratagere-photo.jpg)