ಕೊರಟಗೆರೆ :
ರಾಜ್ಯದಲ್ಲಿ ಗ್ರಾಪಂ ಚುನಾವಣೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಕೊರೋನ ಇರುವ ಕಾರಣ ಹೆಚ್ಚು ಜನ ಸೇರಿಸಿಕೊಳ್ಳದೆ ತಮ್ಮ ಮತವನ್ನು ಕೇಳಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣೆಗೆ ಸಹಕರಿಸಬೇಕು ಎಂದು ಕೊರಟಗೆರೆ ಎಎಸ್ಐ ಯೋಗೀಶ್ ತಿಳಿಸಿದರು.
ಅವರು ತಾಲ್ಲೂಕಿನ ಹೊಳವನಹಳ್ಳಿ, ಅಕ್ಕಿರಾಂಪುರ ಗ್ರಾಪಂ ಚುನಾವಣೆಯ ನಾಮಪತ್ರ ಹಿಂಪಡೆಯುವ ಹಾಗೂ ಅಭ್ಯರ್ಥಿಗಳಿಗೆ ತುಮಕೂರು ಜಿಲ್ಲಾ ಪೊಲೀಸ್ ಹಾಗೂ ಕೊರಟಗೆರೆ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಡಿ. 2020 ಹಾಗೂ ಗ್ರಾಪಂ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿಕ್ಕ ವಯಸ್ಸಿನ ಮಕ್ಕಳು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಚಲಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ದೊಡ್ಡವರು ಮಕ್ಕಳ ಕೈಯಲ್ಲಿ ವಾಹನ ನೀಡಬಾರದು. ಬೈಕ್ ಮತ್ತು ವಾಹನಗಳ ಸವಾರರು ಕಡ್ಡಾಯವಾಗಿ ಪರವಾನಗಿ ಹಾಗೂ ಹೆಲ್ಮೆಟ್ ಧರಿಸಿ, ಸಂಚಾರ ಮಾಡಬೇಕು. ಇದರ ಜೊತೆಗೆ ಬೈಕ್ ಸೇರಿದಂತೆ ಯಾವುದೇ ವಾಹನವಾದರೂ ಸಹ ಕಡ್ಡಾಯವಾಗಿ ಇನ್ಶುರೆನ್ಸ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ಥಳೀಯ ಗ್ರಾಪಂ ಚುನಾವಣೆಯಲ್ಲಿ ಯಾರೂ ಕೂಡ ದೋಷದ ರಾಜಕಾರಣ ಮಾಡದೆ ಸೋದರತ್ವದಿಂದ ಚುನಾವಣೆಯಲ್ಲಿ ಭಾಗವಹಿಸಿ. ಗ್ರಾಮ ಪಂಚಾಯತ್ ಚುನಾವಣೆ ಸಮಯದಲ್ಲಿ ಶಾಂತಿಯುತ ಮತದಾನ ಮಾಡುವುದರ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು. ಇದರ ಜೊತೆಗೆ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ತಿಳಿದಿರಬೇಕು. ಯಾರಾದರೂ ಕೂಡ ಕಾನೂನನ್ನು ಉಲಂಘನೆ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೊಳವನಹಳ್ಳಿ ಪೊಲೀಸ್ ಅಧಿಕಾರಿ ಅಕ್ರಂ ಪಾಷ, ಮುಖಂಡರಾದ ಜಯರಾಮ್, ರಾಮಕೃಷ್ಣ, ಮರುಡಪ್ಪ, ಮೋಹನ್ ಕುಮಾರ್, ಶಿವಣ್ಣ, ನಾಗರಾಜು, ದೇವರಾಜು, ರಂಗಶಾಮಯ್ಯ, ಮಂಜುನಾಥ್, ಕುಂಭಿ ನರಸಿಂಹಯ್ಯ, ಶಶಿಕುಮಾರ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
