ಕೊರಟಗೆರೆ :
ತಾಲ್ಲೂಕಿನಲ್ಲಿ ಸುಮಾರು 10 ವರ್ಷಗಳಿಂದ ನನೆಗುದಿಯಲ್ಲಿದ್ದ ಮೋಜಿಣಿ ತಂತ್ರಾಂಶದ ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳನ್ನು ಒಂದೇ ದಿನದಲ್ಲಿ ಕಂದಾಯ ಮತ್ತು ಭೂ ಮಾಪನಾ ಇಲಾಖೆ ಇತ್ಯರ್ಥ ಗೊಳಿಸುವ ಕಾರ್ಯದಲ್ಲಿ ಕೊರಟಗೆರೆ ತಾಲ್ಲೂಕು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಕಂದಾಯ ಇಲಾಖೆ ಮೋಜಿಣಿ ತಂತ್ರಾಂಶದ ಬಾಕಿ ಅರ್ಜಿಗಳನ್ನು ಕೂಡಲೆ ವಿಲೆವಾರಿ ಮಾಡುವಂತೆ ಆದೇಶಿಸಿದೆ. ತುಮಕೂರು ಜಿಲ್ಲಾಧಿಕಾರಿಗಳ ಸೂಚನೆ ಯಂತೆ, ಭೂ ದಾಖಲೆಗಳ ಉಪನಿರ್ದೇಶಕರ ಮತ್ತು ಮಧುಗಿರಿ ಉಪವಿಭಾಗಾಧಿಕರಿಗಳ ನಿರ್ದೇಶನದಂತೆ ಕೊರಟಗೆರೆ ತಾಲ್ಲೂಕನ್ನು ಈ ಕಾರ್ಯದಲ್ಲಿ ಪ್ರ್ರಾಯೋಗಿಕ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸುಮಾರು 10 ವರ್ಷಗಳಿಂದ 11-ಇ ನಕ್ಷೆಗಾಗಿ ಅರ್ಜಿ ಸಲ್ಲ್ಲಿಸಿ ಕಂದಾಯ ಮತ್ತು ಭೂಮಾಪನ ಇಲಾಖೆಯಲ್ಲಿ ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳನ್ನು ತಹಸೀಲ್ದಾರ್ ನಾಹೀದಾ ಜಮ್ ಜಮ್, ಕಂದಾಯ ಇಲಾಖಾ ಅಧಿಕಾರಿಗಳು, ಭೂಮಾಪನ ಸಹಾಯಕ ನಿರ್ದೇಶಕ ನಂಜಯ್ಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಒಂದೇ ದಿನದಲ್ಲಿ 340 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. ಇದರಲ್ಲಿ ಅ ಮತ್ತು ಬ ಕರಾಬು ತಿದ್ದುಪಡಿ, ದಾನ, ತತ್ಕಾಲ್ ಪೋಡಿ, ವಿಭಾಗ ಮತ್ತು ಕ್ರಯದ ಅರ್ಜಿಗಳಿದ್ದು, ಹಲವು ವರ್ಷಗಳಿಂದ ಇದಕ್ಕಾಗಿ ಇಲಾಖೆಗೆ ಅಲೆದಾಡುತ್ತಿದ್ದ ಅರ್ಜಿದಾರರಿಗೆ ನೆಮ್ಮದಿ ಸಿಕ್ಕಾಂತಾಗಿದೆ. ಈ ಕಾರ್ಯದ ತ್ವರಿತ ಇತ್ಯರ್ಥದಲ್ಲಿ ರಾಜ್ಯಕ್ಕೆ ಕೊರಟಗೆರೆ ತಾಲ್ಲೂಕು ಮಾದರಿಯಾಗಿದೆ. ಇಂತಹ ಅನೇಕ ರೈತರ ಪಹಣಿ ತಿದ್ದುಪಡಿ ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ಕಂದಾಯ ಮತ್ತು ಭೂ ಮಾಪನ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಿ ತೊಡಕುಗಳನ್ನು ಇತ್ಯರ್ಥಗೊಳಿಸುವಂತೆ ಸೂಚಿಸಲಾಗಿದೆ. ಉಳಿದ ಇತ್ಯರ್ಥಗೊಳಿಸಬೇಕಾದ ಅರ್ಜಿಗಳಾದ ಕಾಲಂ ನಂಬರ್ 3 ಮತ್ತು 9 ಪ್ರಕರಣಗಳು ಮತ್ತು ಹಿಸ್ಸಾ ತಿದ್ದುಪಡಿ ಪ್ರಕರಣಗಳ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಅವುಗಳನ್ನು ಸಹ ಇತ್ಯರ್ಥಗೊಳಿಸಿ ಈ ಯೋಜನೆಯ ಕಾರ್ಯವನ್ನು ಸಂಪೂರ್ಣಗೊಳಿಸುವಂತೆ ತಹಸೀಲ್ದಾರ್ಗೆ ಸೂಚಿಸಿದರು.
ಮೋಜಿಣಿ ತಂತ್ರಾಂಶವಲ್ಲದೆ ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಸದ ರೈತರ ಪಹಣಿ ತಿದ್ದುಪಡಿ ಪ್ರಕರಣಗಳು ಸಾಕಷ್ಟಿದ್ದು, ಇಲಾಖೆಗಳಿಗೆ ಸುತ್ತಲಾರದೆ ರೈತರು ತಿದ್ದುಪಡಿಗೆ ಅರ್ಜಿ ಹಾಕದೆ ಸುಮ್ಮನಿದ್ದಾರೆ. ಈ ತಿದ್ದುಪಡಿ ಪ್ರಕರಣಗಳು ಕಂದಾಯ ಮತ್ತು ಭೂ ಮಾಪನಾ ಇಲಾಖೆಗೆ ಜಂಟಿಯಾಗಿ ಸಂಬಂಧಿಸಿದ್ದು, ಇಲಾಖಾ ದಾಖಲಾತಿ ಮತ್ತು ಕಡತಗಳ ತಾಂತ್ರಿಕತೆ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಎರಡೂ ಇಲಾಖೆಗಳು ಜಂಟಿಯಾಗಿ ಈ ತಿದ್ದುಪಡಿ ಪ್ರಕರಣಗಳನ್ನು ಗ್ರಾಮವಾರು ವಿಂಗಡಿಸಿ, ಸಂಪೂರ್ಣ ಪಹಣಿ ಇಂಡಿಕರಣ ಮಾಡಿದಲ್ಲಿ ರೈತರ ಬಹಳಷ್ಟು ಸಮಸ್ಯೆಗಳಿಗೆ ಸ್ಪಂದಿಸಿದಂತಾಗುತ್ತದೆ. ಈ ಸಂಬಂಧ ರಾಜ್ಯ ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ತಾಲ್ಲೂಕು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದರು.
ಮುಂಬರುವ ದಿನಗಳಲ್ಲಿ ತಾಲ್ಲೂಕಿನಲ್ಲಿ ಬಾಕಿ ಇರುವ ಬಗರ್ ಹುಕುಂ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಅರ್ಹತೆ, ಮಾನದಂಡ, ಇಲಾಖಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಮತ್ತು ಭೂಮಿ ಇಲ್ಲದ ರೈತನಿಗೆ ಭೂಮಿ ದೊರೆಯುವಂತೆ ಮಾಡಲಾಗುವುದರೊಂದಿಗೆ ನಿಯಮ ಮೀರಿ ಮಂಜೂರು ಮಾಡುವ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ತಿಳಿಸಿದರು. ಪ್ರತಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ನಾಹೀದಾ ಜಮ್ ಜಮ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ