ಕೊರಟಗೆರೆ :
ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ತುಮಕೂರು ಜಿಲ್ಲಾಡಳಿತ ಈಗಾಗಲೇ ಜಿಲ್ಲಾದ್ಯಂತ ಧಾರ್ಮಿಕ ಕೇಂದ್ರ ಹಾಗೂ ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಿದೆ. ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಪ್ರತಿ ವರ್ಷ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದರೆ ಈ ಬಾರಿ ಮಹಾಮಾರಿ ಕೊರೋನಾ ರೋಗದ ಲಕ್ಷಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಕಾರ್ಯನಿರ್ವಹಣಾಧಿಕಾರಿ ದರ್ಶನ ಪ್ರತಿಬಂಧಿಸಿರುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಶ್ರಾವಣ ಮಾಸದಲ್ಲಿ ದೇವಸ್ಥಾನಗಳಿಗೆ ಭಕ್ತರು ಹೆಚ್ಚಾಗಿ ಬರುವ ಸಾಧ್ಯತೆಯನ್ನು ಮನಗಂಡು ತುಮಕೂರು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಶನಿವಾರ, ಭಾನುವಾರ, ಸೋಮವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ದೇವಸ್ಥಾನದ ದರ್ಶನಕ್ಕೆ ಭಕ್ತಾದಿಗಳಿಗೆ ನಿಷೇಧ ಹೇರಿದರು. ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ಬಂದಿರುವುದರಿಂದ ಭಕ್ತರಲ್ಲಿ ಸಹಜವಾಗಿಯೇ ಗೊಂದಲವಿತ್ತು. ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ತಾಯಿಯ ದರ್ಶನ ಸಿಗಬಹುದು ಎಂದುಕೊಂಡಿದ್ದ ಭಕ್ತರಿಗೆ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಾಸುದೇವ್, ಕಾರ್ಯದರ್ಶಿ ಚಿಕ್ಕ ದಾಸಯ್ಯ ಹಾಗೂ ಕಾರ್ಯನಿರ್ವಹಣಾ ಅಧಿಕಾರಿ ಕೇಶವಮೂರ್ತಿ ಪತ್ರಿಕಾ ಪ್ರಕಟಣೆ ಮೂಲಕ ಭಕ್ತರು ಆಗಮಿಸದಂತೆ ಮನವಿ ಮಾಡಿಕೊಂಡಿದ್ದಾರೆ.
ದೇವಸ್ಥಾನ ನಿರ್ಬಂಧನೆಗಳ ವಿವರ :
ದೇವಸ್ಥಾನಗಳಿಗೆ ಆ. 12 ರಿಂದ ಅನ್ವಯವಾಗುವಂತೆ ಅರ್ಚಕರುಗಳಿಗೆ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಿ ಶ್ರಾವಣ ಮಾಸದ ಆ. 13 ನೇ ಶುಕ್ರವಾರ ನಾಗರಪಂಚಮಿ ಮತ್ತು ಆ. 20 ರ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದಂದು ಹಾಗೂ ಎಲ್ಲಾ ಶನಿವಾರ, ಭಾನುವಾರ, ಸೋಮವಾರ ಮತ್ತು ಮುಂಬರುವ ಹಬ್ಬಗಳು ಹಾಗೂ ಸಾರ್ವತ್ರಿಕ ರಜಾ ದಿನದಂದು ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶನಿವಾರ, ಭಾನುವಾರ, ಸೋಮವಾರ ಮತ್ತು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೂವು, ಹಣ್ಣು, ತೆಂಗಿನಕಾಯಿ, ಹಾರ ಮತ್ತು ಇತರೆ ಪೂಜಾ ಸಾಮಗ್ರಿಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಸಾರ್ವಜನಿಕರು ಹಾಗೂ ಭಕ್ತಾದಿಗಳು ಕೋವಿಡ್ -19 ನಿಯಮವನ್ನು ಪಾಲಿಸಿ ದೇವರ ದರ್ಶನ ಪಡೆದು ಎಂದಿನಂತೆ ಸಹಕರಿಸಲು ಆಡಳಿತ ಮಂಡಳಿ ಸೂಚಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
