ಗೌರಿಬಿದನೂರು:
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ನೇತೃತ್ವದಲ್ಲಿ ನಗರದ ವಿವಿಧೆಡೆ ಕೋಟ್ಪಾ ದಾಳಿ ನಡೆಸಲಾಯಿತು. ಗಾಂಧಿ ವೃತ್ತ ಮತ್ತು ಮಧುಗಿರಿ ರಸ್ತೆಯಲ್ಲಿರುವ ಅಂಗಡಿಗಳ ಮಾಲೀಕರಿಗೆ ಕೋಟ್ಪಾ ಕಾಯ್ದೆ ಅರಿವು ಮೂಡಿಸುವುದರ ಜೊತೆಗೆ ಕಾಯ್ದೆ ಉಲ್ಲಂಘನೆ ಮಾಡಿದವರ ಮೇಲೆ 16 ಮೊಕದ್ದಮೆ ದಾಖಲಿಸುವುದರ ಜೊತೆಗೆ 1600 ರೂಪಾಯಿ ದಂಡವನ್ನು ವಿಧಿಸಲಾಯಿತು.
ಈ ವೇಳೆ ಹಿರಿಯ ಅರೋಗ್ಯಾಧಿಕಾರಿ ಉಮಾಶಂಕರ್ ಮಾತನಾಡಿ, ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವುದು, ಬಿಡಿ ಬಿಡಿಯಾಗಿ ತಂಬಾಕು ಉತ್ಪನ್ನ ಗಳನ್ನು ಮಾರಾಟ ನಿಷೇದವಾಗಿರುವುದು, ತಂಬಾಕು ಉತ್ಪನ್ನಗಳ ಕಾಣುವಂತೆ ಪ್ರದರ್ಶಿಸುವುದು, ಅವುಗಳ ಕುರಿತ ಜಾಹಿರಾತು, 18 ವರ್ಷದೊಳಗಿನವರಿಗೆ ತಂಬಾಕು ನಿಷೇಧ ಈ ಕುರಿತ ನಾಮಫಲಕ ಬಿತ್ತರಿಸುವುದು, ತಂಬಾಕು ಉತ್ಪನ್ನಗಳನ್ನು ಶಾಲಾ ಕಾಲೇಜು ಸುತ್ತ 100 ಮೀಟರ್ ವರೆಗೆ ತಂಬಾಕು ನಿಷೇದ ಮಾಡುವುದು ಸೇರಿದಂತೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಗಿರೀಶ್, ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ್, ಕೆ ಜಿ, ಹಿರಿಯ ಆರೋಗ್ಯ ನಿರೀಕ್ಷಕರಾದ ನವೀನ್ ಆರ್, ಶ್ವೇತಾ ಜಿ ವಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು ಸಣ್ಣಮೀರ್ ಮುಂತಾದವರು ಪಾಲ್ಗೊಂಡಿದ್ದರು.
