ಬೆಂಗಳೂರು:
ಭಾರತ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಗೆ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ಟೀಮ್ ಗೇಮ್ ಚೇಂಜರ್ ತಂಡದ ವೆಂಕಟೇಶ್ ಪ್ರಸಾದ್ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಮೇಲುಸ್ತುವಾರಿ ಸ್ವೀಕೃತಗೊಳಿಸಿದೆ. ಆದರೆ, ಬ್ರಿಜೇಶ ಪಟೇಲ್ ಬಣದ ಹಾಗೂ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟಿಟ್ನ ನಿರ್ದೇಶಕರಾದ ಕೆಎನ್ ಶಾಂತಕುಮಾರ್ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಮತ್ತೊಂದು ಕಡೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮತ್ತೊರ್ವ ಅಭ್ಯರ್ಥಿ ಶಾಂತಾ ವೆಂಕಟಾಚಾರ್ ಅವರು ನಾಮಪತ್ರವನ್ನು ಹಿಂಪಡೆದಿದ್ದಾರೆ. ಇದರ ಫಲವಾಗಿ ಭಾರತ ತಂಡದ ವೇಗಿ ಅವಿರೋಧವಾಗಿ ಕೆಎಸ್ಸಿಎ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಇದೆ.
ಕೆಎಸ್ಸಿಎ ಅಧ್ಯಕ್ಷ ಸ್ಥಾನ ಹಾಗೂ ಕ್ರಿಕೆಟ್ ಸಂಸ್ಥೆಯ ವಿವಿಧ ಸ್ಥಾನಗಳಿಗೆ ಚುನಾವಣೆಯನ್ನು ಡಿಸೆಂಬರ್ 7 ರಂದು ನಡೆಸಲಾಗುತ್ತಿದೆ. ಇದರಲ್ಲಿ ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ಮೂರು ಅಭ್ಯರ್ಥಿಗಳ ಪೈಕಿ ಇಬ್ಬರ ನಾಮಪತ್ರಗಳನ್ನು ಮಾತ್ರ ಚುನಾವಣಾ ಮೇಲುಸ್ತುವಾಗಿ ಸ್ವೀಕರಿಸಿದೆ. ಆದರೆ, ಶಾಂತಕುಮಾರ್ ನಾಮಪತ್ರವನ್ನು ತಿರಸ್ಕರಿಸಿದೆ. ಇದರ ವಿರುದ್ದ ಶಾಂತಕುಮಾರ್ ಅವರು ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಬ್ರಿಜೇಶ್ ಬಣದ ಭವಿಷ್ಯ ನಿರ್ಧಾರವಾಗಲಿದೆ.
ಚುನಾವಣಾ ಮೇಲುಸ್ತುವಾರಿಯಾಗಿ ನೇಮಕಗೊಂಡಿರುವ ನಿವೃತ್ತಿ ನ್ಯಾಯಾಧೀಶ ಸುಭಾಷ್ ಬಿ ಅಡಿ ಅವರು, ಕೆಎಸ್ಸಿಎ ಸಂಸ್ಥೆಯ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಂಗಳವಾರ ನಾಮಪತ್ರಗಳನ್ನು ಪರಿಶೀಲನೆ ನಡೆಸಿದರು. ಈ ಪ್ರಕ್ರಿಯೆ ಮುಗಿದ ಬಳಿಕ ಚುನಾವಣಾಧಿಕಾರಿ ಬಿ ಬಸವರಾಜು ಅಂತಿಮ ಪಟ್ಟಿಯನ್ನು ಪ್ರಕಟಿಸಿದರು. ಕೆಎಸ್ಸಿಎ ಕಾರ್ಯದರ್ಶಿ ಸ್ಥಾನಕ್ಕೆ ಇಎಸ್ ಜೈರಾಮ್, ಸುಜಿತ್ ಸೋಮಸುಂದರ್ ಹಾಗೂ ಸಂತೋಷ್ ಮೆನನ್ ನಾಮಪತ್ರಗಳು ಅಂಗೀಕೃತವಾಗಿವೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ವಿನೋದ್ ಶಿವಪ್ಪ, ಸಂತೋಷ್ ಮೆನನ್, ಸುಜಿತ್ ಸೋಮಸುಂದರ್, ಕಲ್ಪನಾ ವೆಂಕಟಾಚಾರ್ ಹಾಗೂ ಬಿಎನ್ ಮಧುಕರ್ ಅವರು ಸಲ್ಲಿಸಿದ್ದ ನಾಮಪತ್ರಗಳು ಕೂಡ ಸ್ವೀಕೃತಗೊಂಡಿವೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಬಿಕೆ ರವಿ, ಎವಿ ಶಶಿಧರ್ ಹಾಗೂ ಅನಿವಾಶ್ ವೈದ್ಯ ಅವರು ನೀಡಿದ್ದ ನಾಮಪತ್ರಗಳು ಕೂಡ ಅಂಗೀಕೃತವಾಗಿವೆ. ಖಂಜಾಂಚಿ ಸ್ಥಾನಕ್ಕೆ ಮಧುಕರ್, ಎಂಎಸ್ ವಿನಯ್, ಬಿಎಂ ಸುಬ್ರಮಣ್ಯ, ಎವಿ ಶಶಿಧರ, ಕಲ್ಪನಾ ವೆಂಕಟಾಚಾರ್ ಅವರ ಅರ್ಜಿಗಳು ಕೂಡ ಸ್ವೀಕೃತಗೊಂಡಿವೆ.
ಬೆಂಗಳೂರು ವಲಯಕ್ಕೆ ವೈ ಜಗನ್ನಾಥ್, ಆರ್ಎಸ್ ರಾಮಪ್ರಸಾದ್, ಶ್ರೀನಿವಾಸ್ ಮೂರ್ತಿ, ಅವಿನಾಶ್ ವೈದ್ಯ, ಕಲ್ಪನಾ ವೆಂಕಟಾಚಾರ್, ಆಶಿಶ್ ಅಮರ್ಲಾಲ್, ರಾಹುಲ್ ಬಾಪ್ನಾ, ತಿಲಕ್ ನಾಯ್ಡು ಅವರ ನಾಮಪತ್ರಗಳು ಸ್ವೀಕೃತಗೊಂಡಿವೆ. ಮೈಸೂರು ವಲಯಕ್ಕೆ ಹರಿ ಕೃಷ್ಣನ್ ಕುಮಾರ್, ಶ್ರನಿವಾಸ್ ಪ್ರಸಾದ್, ಶಿವಮೊಗ್ಗ ವಲಯಕ್ಕೆ ನಾಗೇಂದ್ರ ಪಂಡಿತ್ ಮತ್ತು ಡಿಎಸ್ ಅರುಣ್, ತಮಕೂರು ವಲಯಕ್ಕೆ ಸಿಆರ್ ಹರಿಶ್ ಮತ್ತು ಅಶೋಕ್, ಧಾರವಾಡ ವಲಯಕ್ಕೆ ಅಹ್ಮದ್ ರಾಝಾ ಮತ್ತು ಕಿತ್ತೂರು, ರಾಯಚೂರು ವಲಯಕ್ಕೆ ಕುಶಾಲ್ ಪಾಟೀಲ್ ಗಾಡಗಿ ಮತ್ತು ಪಾರ್ಥಸಾರಥಿ ಕನಕವೀಡು ಹಾಗೂ ಮಂಗಳೂರು ವಲಯಕ್ಕೆ ಶೇಖರ್ ಶೆಟ್ಟಿ ಅವರ ನಾಮಪತ್ರಗಳನ್ನು ಚುನಾವಣಾಧಿಕಾರಿ ಸ್ವೀಕರಿಸಿದ್ದಾರೆ.








