ಕುಣಿಗಲ್ :
ಅಧಿಕಾರದ ಮದದಿಂದ ಮುಖ್ಯಮಂತ್ರಿ ಬಿಎಸ್ವೈ ವೀರಶೈವ ಲಿಂಗಾಯಿತ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸುವ ಮೂಲಕ ಜಾತಿ ರಾಜಕಾರಣಕ್ಕೆ ಮುಂದಾಗಿದ್ದಾರೆಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.
ತಾಲೂಕಿನ ಕೊತ್ತಗೆರೆ ಹೋಬಳಿ ಶೆಟ್ಟಿಬೀಡು ರಸ್ತೆ, ನೀಲತ್ತಹಳ್ಳಿ ರಸ್ತೆ ಸೇರಿದಂತೆ 23 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಅಧಿಕಾರದ ಮದದಿಂದ ಏನೂ ಬೇಕಾದರೂ ಮಾಡಿದರೂ ನಡೆಯುತ್ತದೆ ಎಂಬ ಧೋರಣೆಯಲ್ಲಿ ಸಿಎಂ ಮುಳುಗಿದ್ದಾರೆ. ಕೇವಲ ವಿರಶೈವ ಲಿಂಗಾಯಿತ ಜಾತಿಯಲ್ಲಿ ಮಾತ್ರ ಬಡವರಿಲ್ಲ. ಒಬಿಸಿ ಪಟ್ಟಿಯಲ್ಲಿರುವ ಜಾತಿಗಳ ಬಡವರು ಎಲ್ಲಿಗೆ ಹೋಗಬೇಕು ವಿಶ್ವಕರ್ಮ, ತಿಗಳರು, ಮಡಿವಾಳ ಜಾತಿಯವರಿಗೆ ತೀರಾ ಅನ್ಯಾಯವಾಗಿದೆ. ಒಕ್ಕಲಿಗರು, ಬ್ರಾಹ್ಮಣರು, ಜೈನರು ಸೇರಿದಂತೆ ಎಲ್ಲಾ ಜಾತಿಯಲ್ಲಿಯೂ ಬಡವರು ಇದ್ದಾರೆ. ಜಾತಿಗೊಂದು ನಿಗಮ ಮಾಡುತ್ತಿರುವ ಬಿಜೆಪಿ ಸರಕಾರ ನಿಜವಾದ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಂಸದ ಕಿಡಿಕಾರಿದರು.
ಎಲ್ಲಾ ಜಾತಿಯಲ್ಲಿಯೂ ಶ್ರೀಮಂತರು ಹಾಗೂ ಬಡವರು ಎಂದು ಎರಡು ಭಾಗ ಮಾಡಿ ಬಡವರಿಗೆ ಸೌಲಭ್ಯ ಕೆಲಸ ಮಾಡಬೇಕಾದ ಸರಕಾರ ತನ್ನ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಜಾತಿಗೊಂದು ನಿಗಮ ಹಾಗೂ ಒಬಿಸಿ ಪಟ್ಟಿಗೆ ಸೇರಿಸುತ್ತಿರುವುದು ದುರದೃಷ್ಟಕರ. ಈ ಬಗ್ಗೆ ಜನರು ಜಾಗೃತರಾಗದಿದ್ದರೆ ಇನ್ನೂ ಸಾಕಷ್ಟು ಕಷ್ಟಗಳನ್ನು ಬಡವರು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ಜಮೀನು ಮಾರಾಟ ಮಾಡಬೇಡಿ :
ಕೇಂದ್ರ ಸರಕಾರ ಇತ್ತೀಚಿಗೆ ಜಾರಿಗೆ ತಂದಿರುವ ರೈತ ವಿರೋಧಿ ನೀತಿಗಳಿಂದ ರೈತರು ಬಿಕ್ಷಕನಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಯಾರು ಬೇಕಾದರು ಜಮೀನು ಖರೀದಿ ಮಾಡಬಹುದಾಗಿದೆ. ಈ ಸಂಬಂಧ ಹಣವಂತರು ಜಮೀನು ಖರೀದಿ ಮಾಡಲು ಬಂದಾಗ ಹಣದಾಸೆಗೆ ರೈತರು ಜಮೀನು ಮಾರಾಟ ಮಾಡಿ ಬೀದಿಗೆ ಬೀಳಬೇಡಿ. ಜಮೀನು ಇದ್ದರೇ ಮಾತ್ರ ನಿಮಗೆ ಗೌರವ ಎಂದು ರೈತರಿಗೆ ಮನವಿ ಮಾಡಿದರು.
ಕುಣಿಗಲ್ ಕ್ಷೇತ್ರದಲ್ಲಿ ಪಿಎಂಜಿಎಸ್ವೈ ಯೋಜನೆಯಡಿ 50 ಕೋಟಿ ರೂ ವೆಚ್ಚದಲ್ಲಿ 29 ಕೀ.ಮಿ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದ ಇಪ್ಪತು ವರ್ಷದಿಂದ ತಾಲ್ಲೂಕಿನ ಪಾಲಿನ ಹೇಮಾವತಿ ನೀರು ಹರಿಸಿಕೊಳ್ಳುವಲ್ಲಿ ಅನ್ಯಾಯಾವಾಗಿದೆ. ಈ ಹಿಂದಿನ ರಾಜಕೀಯ ನಾಯಕರು ತಾಲ್ಲೂಕಿಗೆ ಎಷ್ಟು ಪ್ರಮಾಣದ ಪಾಲಿನ ನೀರು ಬರಬೇಕು ಎಂದು ಯಾರಿಗೂ ತಿಳಿಸದೇ ಮೋಸ ಮಾಡಿದ್ದಾರೆ. ಈ ಸಂಬಂಧ ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗ ತಾಲೂಕಿಗೆ ಹೇಮಾವತಿ ನೀರಿನ ಬೇಡಿಕೆಯನ್ನು ಹೆಚ್ಚಳ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿಗೆ ಒಟ್ಟು 3.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಈ ಬಾರಿ ಶಾಸಕ ಡಾ.ರಂಗನಾಥ್ ಅವರ ಹೋರಾಟ ಫಲವಾಗಿ ಕೇವಲ ಅರ್ದ ಟಿಎಂಸಿ ನೀರು ಮಾತ್ರ ಇಲ್ಲಿವರೆಗೆ ನಾಲ್ಕು ಹಂತದಲ್ಲಿ ಹರಿಸಲಾಗಿದೆ. ಇದರಿಂದ ತಾಲೂಕಿನಲ್ಲಿ 30ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿವೆ. ಇನ್ನೂ ನಮ್ಮ ಪಾಲಿನ ಉಳಿಕೆ 3ಟಿಎಂಸಿ ನೀರು ಹರಿದರೇ ತಾಲೂಕಿನ ಎಲ್ಲಾ ಕೆರೆಗಳು ಭರ್ತಿಯಾಗಿ ರೈತರ ಬದುಕು ಹಸನಾಗಲಿದೆ. ಈ ಸಂಬಂಧ ಲಿಂಕ್ ಕೆನಾಲ್ ನಮಗೆ ಅತ್ಯವಶ್ಯಕವಾಗಿದೆ. ಬಿಜೆಪಿ ಸರಕಾರ ತಡೆ ಹಿಡಿದರುವ ಲಿಂಕ್ ಕೆನಾಲ್ ಮಂಜೂರಾತಿಗೆ ವಿಧಾನ ಸೌಧ ಚಲೋ ಹೋರಾಟಕ್ಕೆ ಕರೇ ನೀಡಲಾಗುವುದು, ಆಗ ತಾಲೂಕಿನ ಎಲ್ಲಾ ರೈತರು ಪಕ್ಷತೀತವಾಗಿ ಹೋರಾಟ ಇಳಿದರೇ ಮಾತ್ರ ತಾಲುಕಿಗೆ ನೀರು ಹರಿಸಿಕೊಳ್ಳಲು ಸಾಧ್ಯ ಇದಕ್ಕೆ ಎಲ್ಲರು ಸಿದ್ದರಾಗಿ ಎಂದು ಕರೆ ನೀಡಿದರು.
ಶಾಸಕ ಡಾ.ರಂಗನಾಥ್, ತಾ.ಪಂ ಸದಸ್ಯ ಅಲ್ಲಾಬಕಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟರಾಮು, ಜಿ.ಪಂ ಮಾಜಿ ಸದಸ್ಯ ರುದ್ರಪ್ಪ, ಮುಖಂಡರಾದ ಕೆಂಪೀರೇಗೌಡ, ಬೇಗೂರು ನಾರಾಯಣ್, ವಿವೇಕ್, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಯುವ ಮುಖಂಡ ಸಿಂಗೋನಹಳ್ಳಿ ಉಮೇಶ್ಗೌಡ, ಚಂದ್ರು, ಅಕಾಶ್, ಚಂದನ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
