ಕುಣಿಗಲ್ :
ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಮೂಲ ಭೂತ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಪುಲವಾಗಿವೆ ಎಂದು ಶಾಸಕ ಡಾ.ರಂಗನಾಥ್ ಕಿಡಿಕಾರಿದರು.
ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡಿದ್ದ ಸೈಕಲ್ ಜಾಥದಲ್ಲಿ ಸೈಕಲ್ ಸವಾರಿ ಮಾಡುವ ಮೂಲಕ ಪಾಲ್ಗೊಂಡು ಮಾತನಾಡಿದ ಅವರು ಬಿಜೆಪಿ ಪಕ್ಷ ನೀಡಿದ ಭರವಸೆಯಲ್ಲಿ ಯಾವುದನ್ನು ಸಮರ್ಪಕವಾಗಿ ಈಡೇರಿಸಲು ಸಾಧ್ಯವಾಗದೇ ಬರೀ ಸುಳ್ಳು ಭಾಷಣಗಳನ್ನು ಮಾಡುತ್ತ ಜನರ ಜೀವನವನ್ನು ಕತ್ತಲೆಯ ಕೋಣೆಗೆ ನೂಕಿದ್ದಾರೆ. ಜನರಿಗೆ ದಾರಿ ದೀಪವಾಗುವ ಬದಲು ಮುಳ್ಳಾಗಿದ್ದಾರೆ ಎಂದು ಕುಹಕವಾಡಿದರು.
ಪೆಟ್ರೋಲ್, ಡಿಸೆಲ್ ಬೆಲೆಗಳು ನಿತ್ಯ ಏರುತ್ತಲೆ ಇದ್ದು ನೂರು ರೂ. ಗಡಿ ದಾಟಿದೆ. ಇದರಿಂದ ನಿತ್ಯ ಬಳಕೆಯ ವಸ್ತುಗಳಾದ ಅಡಿಗೆಎಣ್ಣೆ, ಸಾಂಬಾರು ಪದಾರ್ಥಗಳು, ಗ್ಯಾಸ್ದರ ಏರಿಕೆಯಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೂಲಿನಾಲಿ ಮಾಡಿ ದುಡಿದು ತಿನ್ನುವ ಬಡಜನರಿಗೆ ಒಂದು ಕಡೆ ಕೂಲಿ ಸಿಗುತ್ತಿಲ್ಲ ಮತ್ತೊಂದೆಡೆ ದುಬಾರಿ ಬೆಲೆಯಿಂದ ಬದುಕೇ ದುಸ್ಥರವಾಗಿದೆ. ಜನರ ಗೋಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬೇಕಾಗಿಲ್ಲ. ಬರೀ ತಾರತಮ್ಯದ ರಾಜಕಾರಣ ಮಾಡುತ್ತ ರಾಜ್ಯ ಹಾಗೂ ದೇಶದ ಆರ್ಥಿಕತೆಯನ್ನು ಅಧೋಗತಿಗೆ ತಂದಿದ್ದಾರೆ ಎಂದು ಆರೋಪಿಸಿದರು.
ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಆದೇಶದ ಮೇರೆಗೆ ಇಂಧನ ದುಬಾರಿ ಬೆಲೆಯಾಗಿರುವುದನ್ನು ಖಂಡಿಸಿ ಸಾಂಕೇತಿಕವಾಗಿ ಸೈಕಲ್ ಜಾಥ ಹಮ್ಮಿಕೊಂಡಿದ್ದು, ಬೆಲೆ ಏರಿಕೆ ಕಡಿಮೆಯಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರೊಂದಿಗೆ ಸೇರಿ ಉಗ್ರಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಚ ರಂಗಣ್ಣಗೌಡ, ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಸದಸ್ಯರಾದ ಸದಾಕತ್, ಉದಯ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಲೋಹಿತ್, ಮುಖಂಡರಾದ ಶಂಕರ್, ಬೇಗೂರು ನಾರಾಯಣ್, ಅಬ್ದುಲ್ಹಮೀದ್, ಬೋರೇಗೌಡ, ನಗುತ ರಂಗನಾಥ್, ಚೇತನ್, ಶಿವಣ್ಣ ಮುಂತಾದವರು ಭಾಗವಹಿಸಿದ್ದರು.
ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿಯವರೆಗೂ ಸೈಕಲ್ ಜಾಥ ನಡೆಸಿ ತಹಶೀದ್ದಾರ್ ಅವರಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ