ದಾವಣಗೆರೆ :
ಕರ್ನಾಟಕ ಕುರುಬರ ಎಸ್.ಟಿ ಹೋರಾಟದ ಸಮಿತಿಯ ಸಭೆಯನ್ನು ಕರೆಯಲು ಮತ್ತು ಪತ್ರ ವ್ಯವಹಾರ ಮಾಡಲು ತಾತ್ಕಾಲಿಕ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಇತ್ತೀಚಿಗೆ ಕುರುಬರ ಎಸ್ ಟಿ ಹೋರಾಟ ಸಮಿತಿ ರಚನೆಯಾಗಿರುವ ಬಗ್ಗೆ, ಒಂದು ಪತ್ರವು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಹೆಸರಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹರಿ ಬಿಡಲಾಗಿತ್ತು.
ಈ ಪೋಸ್ಟ್ ನಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಪೂಜ್ಯ ಮಹಾಸ್ವಾಮೀಗಳಾದ ಶ್ರೀಶ್ರೀ ಶ್ರೀ ನಿರಂಜನಾನಂದಪುರಿ ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿರುವ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರ ಮನೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ ರಾಜ್ಯ ಹೋರಾಟ ಸಮಿತಿಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಈ ಪೋಸ್ಟ್ ಕುರಿತು ಕಾಗಿನೆಲೆ ಮಹಾಸಂಸ್ಥಾನದ ಪೂಜ್ಯ ಮಹಾಸ್ವಾಮಿಗಳಾದ ಶ್ರೀಶ್ರೀ ಶ್ರೀ ನಿರಂಜನಾನಂದಪುರಿ ರವರು ಸ್ಪಷ್ಟೀಕರಣ ನೀಡಿದ್ದು, ಇಂತಹ ಸಮಿತಿಯ ಬಗ್ಗೆ ಮಠದಲ್ಲಾಗಲೀ ಅಥವಾ ಸಂಘದಲ್ಲಾಗಲೀ ಇದುವರೆಗೆ ಚರ್ಚೆಯಾಗಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಕನಕ ಗುರುಪೀಠ ಟ್ರಸ್ಟ್ ಮತ್ತು ಕುರುಬ ಸಂಘದ ಪದಾಧಿಕಾರಿಗಳು ಸಭೆ ಸೇರಿ ಸಮಿತಿಯನ್ನು ರಚಿಸಿ ಸಂಘ ಮತ್ತು ಮಠದ ಪತ್ರದ ಮೂಲಕ ಜಂಟಿಯಾಗಿ ಪ್ರಕಟಿಸಲಾಗುವುದು. ಇಂತಹ ಸುಳ್ಳು ಪ್ರಚಾರವನ್ನು ಕೈಗೊಂಡು ಮಠದ ಪೂಜ್ಯರ, ಮುಖಂಡರ ಮತ್ತು ಸಮುದಾಯಕ್ಕೆ ಮುಜುಗರ ತರಬಾರದೆಂದು ಈ ಮೂಲಕ ತಿಳಿಸುತ್ತೇವೆ ಎಂದಿದ್ದಾರೆ.
ಅ. 5 ಮತ್ತು 11 ರಂದು ನಡೆಯುವ ಎಸ್.ಟಿ ಹೋರಾಟದ ಸಭೆಯನ್ನು ಕರೆಯಲು ಮತ್ತು ಪತ್ರ ವ್ಯವಹಾರ ಮಾಡಲು ತಾತ್ಕಾಲಿಕ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿಯ ಮಹಾ ಮಾರ್ಗದರ್ಶಕರಾಗಿ ಕಾಗಿನೆಲೆ ಮಹಾಸಂಸ್ಥಾನದ ಮಹಾಸ್ವಾಮಿಜಿ ಶ್ರೀ ಶ್ರೀಶ್ರೀ ನಿರಂಜನಾನಂದಪುರಿ ಕಾಗಿನೆಲೆ ಶಾಖಾ ಮಠ ಹೊಸದುರ್ಗ ಮಹಾಸಂಸ್ಥಾನದ ಮಹಾಸ್ವಾಮಿಜಿ ಶ್ರೀಶ್ರೀಶ್ರೀ ಈಶ್ವರಾನಂದಪುರಿ, ತಿಂಥಣೀ ಕಾಗಿನೆಲೆ ಶಾಖಾಮಠ ಶ್ರೀಶ್ರೀಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು, ಕೆ.ಆರ್.ನಗರ ಕಾಗಿನೆಲೆ ಶಾಖಾಮಠ ಶ್ರೀಶ್ರೀಶ್ರೀ ಶಿವಾನಂದಪುರಿ ಮಹಾಸ್ವಾಮಿಜಿ, ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು, ಹೋರಾಟ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಶ್ರೀ ಕೆ.ಎಸ್.ಈಶ್ವರಪ್ಪ, ಶ್ರೀ ಹೆಚ್.ಎಂ.ರೇವಣ್ಣ, ಶ್ರೀ ಹೆಚ್.ವಿಶ್ವನಾಥ್, ಶ್ರೀ ಬಂಡೆಪ್ಪ ಖಾಶ್ಯಂಪೂರ್, ಹೋರಾಟ ಸಮಿತಿ ಅಧ್ಯಕ್ಷರಾಗಿ ಶ್ರೀ ಕೆ.ವಿರುಪಾಕ್ಷಪ್ಪ ರವರನ್ನು ನೇಮಿಸಲಾಗಿದೆ ಎಂದು ತಿಳಿಸಲಾಗಿದೆ.
ಇನ್ನು ಅ.11 ರಂದು ಸಭೆಯು ಮುಗಿದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳ ಮುಖಂಡರು ಮತ್ತು ಸಂಘ ಸಂಸ್ಥೆಗಳ ಜೊತೆಗೆ ಚರ್ಚಿಸಿ ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಬಯಸುತ್ತೇನೆ ಎಂದು ಕಾಗಿನೆಲೆ ಶ್ರೀಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
