ಪಾವಗಡ:
ತಾಲ್ಲೂಕಿನ ರೈತರ ಸುಮಾರು 140 ಎಕರೆ ಹೊಲದಲ್ಲಿ 50 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಬ್ಯಾಂಕಿಂಗ್ಯೇತರ ಹಣಕಾಸು ಸೇವೆಗಳ ಕ್ಷೇತ್ರದ ಎಲ್ಆಂಡ್ಟಿ ಫೈನಾನ್ಷಿಯಲ್ ಸರ್ವಿಸಸ್ ತನ್ನ ಔದ್ಯಮಿಕ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್ಆರ್) ಪ್ರಾಜೆಕ್ಟ್ ಪ್ರಕೃತಿಯಡಿ ಚಾಲನೆ ನೀಡಿದೆ.
ಬೆಂಗಳೂರಿನ ಆಹ್ವಾನ್ ಫೌಂಡೇಷನ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಹಂತ ಹಂತವಾಗಿ 50,000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುವುದು. ರೈತರಿಗೆ ಹೆಚ್ಚುವರಿ ಆದಾಯ ತರಬಲ್ಲ ದಾಳಿಂಬೆ, ಮಾವು, ಮೂಸಂಬಿ, ತೆಂಗು, ಮಹಾಗನಿ, ಗಂಧ ಮತ್ತು ವೀಳ್ಯದೆಲೆಯ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ. ಸಸಿಗಳು ಬೆಳೆದು ಪರಿಸರ ಸಮತೋಲನ ಕಾಪಾಡಲು, ಮಣ್ಣಿನ ಆರೋಗ್ಯ ಉಳಿಸಿಕೊಳ್ಳಲು ಮತ್ತು ಮಣ್ಣಿನ ಸವೆತವನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಎಲ್ಆಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೀನಾನಾಥ್ ದುಭಾಷಿ ತಿಳಿಸಿದರು.
ಪ್ರಾಜೆಕ್ಟ್ ಪ್ರಕೃತಿಯಂಥ ನಮ್ಮ ಸಿಎಸ್ಆರ್ ಕಾರ್ಯಕ್ರಮದ ಮೂಲಕ ನಾವು ಸೇವೆಯಲ್ಲಿರುವ ಗ್ರಾಮೀಣ ಸಮುದಾಯಗಳ ಬದುಕಿನಲ್ಲಿ ಸುಸ್ಥಿರ ಜೀವನಕ್ಕೆ ಅವಕಾಶಗಳನ್ನು ಕಲ್ಪಿಸಿ ಸಮಗ್ರ ಸಾಮಾಜಿಕ ಬದಲಾವಣೆ ತರುವ ಉದ್ದೇಶ ಹೊಂದಿದ್ದೇವೆ. ಕೃಷಿಕರ ಸಬಲೀಕರಣದ ಜೊತೆಗೆ ಪ್ರಸ್ತುತ ಇರುವ ಜಾಗತಿಕ ಹವಾಮಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೃಷಿ ಮತ್ತು ನಿಸರ್ಗವನ್ನು ಕಾಪಾಡಿ ಕೊಳ್ಳುವುದು ಅವಶ್ಯಕ ಎಂದು ನಾವು ಭಾವಿಸಿರುವುದರಿಂದ ಇದೇ ನೆಲೆಯಲ್ಲಿ ಯೋಚಿಸುವ ಎಲ್ಟಿಎಫ್ಎಸ್ ಜೊತೆಗೂಡಿ ಕೆಲಸ ಮಾಡಲು ನಮಗೆ ಖುಷಿಯಾಗುತ್ತಿದೆ ಎಂದು ಆಹ್ವಾನ್ ಫೌಂಡೇಷನ್ನ ಸಿಇಒ ಬ್ರಿಜಕಿಶೋರ್ ಪ್ರಧಾನ್ ಹೇಳಿದರು.
ಮುಂದಿನ ಹಣಕಾಸು ವರ್ಷದಲ್ಲಿ ಆರಂಭವಾಗುವ ಪ್ರಾಜೆಕ್ಟ್ ಪ್ರಕೃತಿಯ ಎರಡನೆ ವರ್ಷದಲ್ಲಿ ಎಲ್ಟಿಎಫ್ಎಸ್ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ರೈತರ ಗುಂಪುಗಳಿಗೆ ಸಹಾಯ ಮಾಡಲಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ