ಡೆಹ್ರಾಡೂನ್:
ಬಿಜೆಪಿಯ ಸಚಿವರಾಗಿದ್ದುಕೊಂಡು ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಉತ್ತರಾಖಂಡ್ನ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಅವರನ್ನು ಸಚಿವರ ಹುದ್ದೆಯಿಂದ ಮಾತ್ರವಲ್ಲದೇ ಪಕ್ಷದಿಂದಲೇ ತೆಗೆದುಹಾಕಲಾಗಿದ್ದು, ಅವರೀಗ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.
ಉತ್ತರಾಖಂಡದಲ್ಲಿ ಫೆ.14ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಸಮೀಪ ಇರುವಾಗಲೇ ಹರಕ್ ಸಿಂಗ್ ರಾವತ್ ಪದೇ ಪದೇ ಕಾಂಗ್ರೆಸ್ ಕಾರ್ಯಕರ್ತರ ಜತೆ ಕಾಣಿಸಿಕೊಳ್ಳುತ್ತಿದ್ದರು.
ಮಾತ್ರವಲ್ಲದೇ ಕಾಂಗ್ರೆಸ್ನನ್ನು ಬೆಂಬಲಿಸುತ್ತಿದ್ದರು. ಇದು ಬಿಜೆಪಿ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ಬಿಜೆಪಿಯಿಂದ ಅವರನ್ನು ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಪಕ್ಷ ವಿರೋಧಿ ನಡವಳಿಕೆ ತೋರಿದ್ದಕ್ಕಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾಗಿ ಎಂದು ಸಿಎಂ ಕಾರ್ಯಾಲಯ ಹೇಳಿದೆ.
ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿ ಪುಷ್ಕರ್ ಧಮಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಹರಕ್ ಸಿಂಗ್ ವಜಾಗೊಂಡಿದ್ದಾರೆ.
ಹರಕ್ ಸಿಂಗ್ ಇಂದು ಕಾಂಗ್ರೆಸ್ ಸೇರುವ ಸಾಧ್ಯತೆ ಇದ್ದು, ಇವರ ಜತೆ ಇನ್ನಿಬ್ಬರು ಶಾಸಕರು ಕೂಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಹರಕ್ ಸಿಂಗ್ ಅವರ ಮೂಲ ಕಾಂಗ್ರೆಸ್ಸೇ. ಆದರೆ 2016ರಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನಗೊಂಡು ಅವರು ಇತರ 10 ಶಾಸಕರ ಜತೆ ಬಿಜೆಪಿ ಸೇರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
