ಕಾರವಾರ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯದದಲ್ಲಿ ಮೂರು ದೀಪಗಳು ಯಾವುದೇ ಎಣ್ಣೆ, ಬತ್ತಿ ಇಲ್ಲದೇ ಸತತ 46 ವರ್ಷಗಳಿಂದ ಅಂದರೆ 4 ದಶಕದಿಂದಲೂ ನಿರತಂರವಾಗಿ ಉರಿಯುತ್ತಿದ್ದವು. ಆದರೆ ಏನಾಯಿತೋ ಏನೋ ಗೊತ್ತಿಲ್ಲ. ಇದೀಗ ಏಕಾಏಕಿ ಮೂರಕ್ಕೆ ಮೂರು ದೀಪಗಳು ಒಮ್ಮೆಗೆ ಆರಿ ಹೋಗಿವೆ. ಇದರಿಂದ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ದೀಪಗಳು ಇದ್ದಾಗ ನಿತ್ಯ ಜನರು, ಇವುಗಳನ್ನು ನೋಡಲೆಂದೇ ದೇವಾಲಯಕ್ಕೆ ಬರುತ್ತಿದ್ದರು. ಆದ್ರೆ, ಈಗ ಏಕಾಏಕಿ ದೀಪಗಳು ಆರಿ ಹೋಗಿದ್ದರಿಂದ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ದೀಪ ಆರಿದ್ರೆ ರಾಜ್ಯವನ್ನಾಳುವ ರಾಜನಿಗೆ ಕೆಡಕು ಎಂಬ ನಂಬಿಕೆ ಇದೆ. ಹೀಗಾಗಿ ಈಗ ದೀಪ ಆರಿದ್ದರಿಂದ ರಾಜನಿಗೆ ಏನೋ ಕೆಡಕು ಕಾದಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಚಿಗಳ್ಳಿ ಗ್ರಾಮದ ದೈವಜ್ಞ ಶಾರದಮ್ಮ ಎನ್ನುವರು 1979ರಲ್ಲಿ ಸೀಮೆ ಎಣ್ಣೆ ಹಾಕಿ ಒಂದು ಲಾಟೀನು ದೀಪವನ್ನು ಹಚ್ಚಿದ್ದರು. ಆದರೆ ಅದು ಒಂದು ದಿನ ಕಳೆದರೂ ಆರಿಲಿಲ್ಲ. ನಿರಂತರವಾಗಿ ಉರಿಯತೊಡಗಿತು. ಇದರಿಂದ ಕುತೂಹಲಗೊಂಡ ಶಾರದಮ್ಮ, ಒಂದು ವರ್ಷದವರೆಗೆ ಕಾಯ್ದು ಮತ್ತೊಂದು ದೀಪವನ್ನು 1980ರಲ್ಲಿ ಹಚ್ಚಿದರು. 2ನೇ ದೀಪ ಕೂಡ ಆರದೇ ನಿರಂತರವಾಗಿ ಉರಿಯ ತೊಡಗಿತು. 2ನೇ ದೀಪ ಹಚ್ಚಿದ 10-15 ದಿನಗಳ ನಂತರ ಮತ್ತೊಂದು 3ನೇ ದೀಪ ಬೆಳಗಿಸಿದರು. ಪವಾಡ ಎಂಬಂತೆ 3ನೇ ದೀಪ ಸೇರಿ ಮೂರು ದೀಪಗಳು ನಿರಂತರವಾಗಿ ಉರಿಯ ತೊಡಗಿದವು.