ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡದ ವಿವಿಧ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳ ಮೂಲಭೂತ ಸೌಕರ್ಯಗಳ ನಿರ್ವಹಣೆಗೆ ವಿಧಿಸುವ ತೆರಿಗೆ ಆಕರಣೆ ಹಾಗೂ ನಿರ್ವಹಣೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಗೋಕುಲ ರಸ್ತೆಯ ಎಂ.ತಿಮ್ಮಸಾಗರ, ತಾರಿಹಾಳ, ಗಾಮನಗಟ್ಟಿ, ಇಟ್ಟಿಗಟ್ಟಿ ಹಾಗೂ ಧಾರವಾಡದ ಬೇಲೂರು ,ಮುಮ್ಮಿಗಟ್ಟಿ ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳು ಮತ್ತು ಕೆ ಎಸ್ ಎಸ್ ಐ ಡಿ ಸಿಯ ಕೈಗಾರಿಕಾ ವಸಾಹತು ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಸಚಿವರು,ಸ್ಥಳೀಯ ಉದ್ಯಮಿಗಳಿಂದ ಅಹವಾಲುಗಳನ್ನು ಆಲಿಸಿದರು. ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ವಸತಿ ಗೃಹಗಳ ಹಂಚಿಕೆ, ಗಾಮನಗಟ್ಟಿ ಮಹಿಳಾ ಉದ್ಯಮಿ ಪಾರ್ಕ್ ನಿವೇಶನಗಳ ಕುರಿತು ಶೀಘ್ರ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಹುಬ್ಬಳ್ಳಿ ನಗರದ ಖಾಸಗಿ ಹೊಟೆಲ್ ನಲ್ಲಿ ಕೈಗಾರಿಕಾ ಉದ್ಯಮಿಗಳ ಸಂಘದ ಪದಾಧಿಕಾರಿಗಳೊಂದಿಗೆ ಅನೌಪಚಾರಿಕವಾಗಿ ಸಭೆ ನಡೆಸಿದ ಸಚಿವರು.
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಹಾಗೂ ಈಗ ಮಳೆಯ ಕಾರಣದಿಂದ ಎಂ.ತಿಮ್ಮಸಾಗರ ಕೈಗಾರಿಕಾ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಸ್ವಲ್ಪ ವಿಳಂಬವಾಗಿದೆ.ಕಾಮಗಾರಿಗಳು ಪೂರ್ಣಗೊಂಡ ಬಳಿಕ ಇದು ಮಾದರಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದಲಿದೆ.ಹೊಸ ಕೈಗಾರಿಕಾ ನೀತಿ,ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿಗಳಿಂದ ಬಹಳಷ್ಟು ಉದ್ಯಮಿಗಳು ಬಂಡವಾಳ ಹೂಡಿಕೆಗೆ ಉತ್ಸುಕರಾಗಿದ್ದಾರೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಉದ್ಯಮಗಳು ತಲೆ ಎತ್ತಲಿವೆ. ಧಾರವಾಡದಲ್ಲಿ ಎಫ್ಎಂ ಸಿ ಜಿ ಕ್ಲಸ್ಟರ್ ಸ್ಥಾಪನೆಗೆ ಉಲ್ಲಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ವಿಜನ್ ಗ್ರೂಪ್ ರಚಿಸಲಾಗಿದೆ. ಈ ಸಮಿತಿ ಈಗಾಗಲೇ ಕಾರ್ಯ ಆರಂಭಿಸಿದೆ.
ಕೋವಿಡ್ ಪರಿಸ್ಥಿತಿಯಲ್ಲಿಯೂ ಸುಮಾರು ಸುಮಾರು 30 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ಬಂದಿವೆ,ಸರ್ಕಾರ ಅನುಮೋದನೆ ನೀಡಿದೆ.ನಾಳೆಯಿಂದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಿರಂತರವಾಗಿ ಈ ಕುರಿತು ಹಿರಿಯ ಅಧಿಕಾರಿಗಳ ಸಭೆಗಳನ್ನು ಆಯೋಜಿಸಲಾಗಿದೆ.ಕೈಐಎಡಿಬಿ ಹಾಗೂ ಕೆ ಎಸ್ ಎಸ್ ಐ ಡಿ ಸಿ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾಗಿದ್ದು, ಲಾಭದ ಉದ್ದೇಶವಿಲ್ಲದೇ ಆದಾಯ ,ಖರ್ಚು ಸರಿದೂಗಿಸಿಕೊಂಡು ಉದ್ಯಮಿಗಳಿಗೆ ಸೌಕರ್ಯ ಕಲ್ಪಿಸುತ್ತಿವೆ.ಜಿ.ಡಿ.ಪಿ.ಉದ್ಯೋಗ ಸೃಜನೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿ ವರ್ಷ ನಿವೇಶನ ದರ ಪರಿಷ್ಕರಿಸುವ ಪದ್ಧತಿ ಕೈಬಿಡಲು ಮುಖ್ಯಮಂತ್ರಿಗಳನ್ನು ಕೋರಲಾಗುವುದು. ತಾರಿಹಾಳ ಪ್ರದೇಶದಲ್ಲಿ ಟೌನ್ ಶಿಪ್ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ,ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ನಿಗಮವು ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ. ನಿವೇಶನ ದರದ ಪರಿಷ್ಕರಣೆಯಲ್ಲಿ ನ್ಯಾಯಯುತವಾದ ದರ ನಿಗದಿ ಪಡಿಸಲಾಗುವುದು ಎಂದರು .ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ,ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಶಿವಶಂಕರ್, ಕೆ ಎಸ್ ಎಸ್ ಐ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ ಶಿರೂರ, ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಮಿಗಳ ಸಂಘಟನೆಗಳ ಪದಾಧಿಕಾರಿಗಳಾದ ಮಹೇಂದ್ರ ಲದ್ದಡ, ಕವಿತಾ ನಾಯ್ಕರ್, ವಿಶ್ವನಾಥ ಗೌಡರ, ಬಿರಾದಾರ, ಜಾಧವ,ಆರ್.ಜೆ.ಭಟ್ ಮತ್ತಿತರರು ಮಾತನಾಡಿದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ಸ್ವಾಗತಿಸಿದರು. ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಮನೋಹರ ವಡ್ಡರ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
