ಬೆಂಗಳೂರು:
ಕೊಡಗು ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವವರಿಗೆ ಮಾಸಿಕ 10 ಸಾವಿರ ರೂಪಾಯಿ ಪರಿಹಾರ ಧನವನ್ನು ಬಾಡಿಗೆ ರೂಪದಲ್ಲಿ ನೀಡಲಾಗುವುದು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ತೀರ್ಮಾನಿಸಿದಂತೆ ಟೆಂಟ್ ನಿರ್ಮಿಸುವ ನಿರ್ಣಯವನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಕೊಡಗಿನಲ್ಲಿ 700 ರಿಂದ 800 ನಿರಾಶ್ರಿತರನ್ನು ಗುರುತಿಸಲಾಗಿದೆ, ಅವರಿಗೆಲ್ಲಾ ತಲಾ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾದರಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.
ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಪಡೆದು ಹಣ ಪಾವತಿಸದ 72 ಸಾವಿರದ 370 ಫಲಾನುಭವಿಗಳ ಮಂಜೂರಾತಿಯನ್ನು ಈ ಹಿಂದೆ ತಡೆಹಿಡಿಯಲಾಗಿತ್ತು ಎಂದು ತಿಳಿಸಿದ ಸಚಿವರು, ದಾಖಲಾತಿ ಸಲ್ಲಿಸಲು ಇವರಿಗೆಲ್ಲಾ ಮತ್ತಷ್ಟು ಕಾಲಾವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ್ ಪಿಡಿಓಗಳ ಮೂಲಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿಸುವಂತೆ ಅವರು ಫಲಾನುಭವಿಗಳಿಗೆ ತಿಳಿಸಿದ್ದಾರೆ.ಮೈತ್ರಿ ಸರ್ಕಾರ ಸುಭದ್ರತೆ ಕುರಿತು ಪ್ರತಿಕ್ರಿಯೆ ನೀಡಿದ ಯು.ಟಿ.ಖಾದರ್, ಬಿಜೆಪಿಯ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ, ಅಧಿಕಾರ ಪಕ್ಷದ ಯಾವುದೇ ಶಾಸಕ ಬಿಟ್ಟು ಹೋಗುವುದಿಲ್ಲ, ವಿಧಾನ ಪರಿಷತ್ ಚುನಾವಣೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.
![](https://prajapragathi.com/wp-content/uploads/2018/09/download-2.gif)