ಬೆಳಗಾವಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ಟೋನ್ ಕ್ರಷರ್ಸ್ ಮತ್ತು ಕ್ವಾರಿ ಉದ್ದಿಮೆದಾರರು ಬೆಳಗಾವಿ ಸುವರ್ಣಸೌಧದ ಮುಂಭಾಗ ಸೋಮವಾರ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಸಂಘಟನೆಗೆ ಬೆಂಬಲ ವ್ಯಕ್ತಪಡಿಸಿ, ಸಮಸ್ಯೆ ಬಗೆಹರಿಸಲು ವಿಧಾನಮಂಡಲದಲ್ಲಿ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ.
ರಾಜ್ಯದ 30 ಜಿಲ್ಲೆಗಳಿಂದ ಬಂದ ಸುಮಾರು 10 ಸಾವಿರಕ್ಕೂ ಹೆಚ್ಚು ಕಲ್ಲು ಗಣಿಗಾರಿಕೆ ಮತ್ತು ಕ್ವಾರಿ ಉದ್ದಿಮೆದಾರರಿಂದ ಮನವಿ ಪತ್ರ ಸ್ವೀಕರಿಸಿ ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕುಂಭ ಕರ್ಣ ನಿದ್ರೆಯಲ್ಲಿದೆ. ಈ ಸರ್ಕಾರಕ್ಕೆ ನೈಜ ಸಮಸ್ಯೆಗಳು ಅರ್ಥವಾಗುತ್ತಿಲ್ಲ. ಆಡಳಿತ ನಡೆಸುವವರಿಗೆ ಯಾವುದೇ ಕಳಕಳಿ ಇಲ್ಲ. ರಾಜ್ಯದಲ್ಲಿ ಜಲ್ಲಿ, ಕಲ್ಲು, ಮರಳು ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಈ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಕಲ್ಲು ಗಣಿಗಾರಿಕೆ ನಡೆಸಲು ಅವಕಾಶವಿದ್ದರೂ ಸಹ ತಮಗೆ ಅನುಮತಿ ನೀಡುತ್ತಿಲ್ಲ ಎಂದು ಗುತ್ತಿಗೆದಾರರು ದೂರುತ್ತಿದ್ದಾರೆ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಗಣಿಗಾರಿಕೆಗೆ ವಿದ್ಯುತ್ ಕಡಿತ ಮಾಡುವಂತಹ ವಾಮಮಾರ್ಗ ಅನುಸರಿಸುತ್ತಿರುವುದು ಅಕ್ಷಮ್ಯ ಅಪರಾಧ. ಗಣಿ ಇಲಾಖೆ ಕೂಡಲೇ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಕಲ್ಲು ಗಣಿಗಾರಿಕೆಯನ್ನು ಮೇಜರ್ ಮಿನರಲ್ ಗಣಿಗಾರಿಕೆ ವ್ಯಾಪ್ತಿಯಿಂದ ಬೇರ್ಪಡಿಸಿ ಅಗತ್ಯ ವಸ್ತುಗಳ ವ್ಯಾಪ್ತಿಗೆ ತರಬೇಕು. ನೆರೆ ರಾಜ್ಯಗಳಂತೆ ಡಿಎಂಎಫ್ ಅನ್ನು ಶೇ. 10 ಕ್ಕೆ ಇಳಿಕೆ ಮಾಡಬೇಕು.
ಕ್ರಷರ್ಸ್ ಸಿ. ಫಾರಂ ಅನ್ನು 20 ವರ್ಷಗಳಿಗೆ, ಗಣಿಗಾರಿಕೆ ಪರವಾನಗಿಯನ್ನು 30 ವರ್ಷಗಳಿಗೆ ವಿಸ್ತರಿಸಬೇಕು. ರಾಜಧನವನ್ನು ಬಳಕೆದಾರರಿಂದ ವಸೂಲಿ ಮಾಡಬೇಕೆಂಬ ಬೇಡಿಕೆಗಳನ್ನು ಈಡೇರಿಸಲು ನಮ್ಮ ಪಕ್ಷ ವಿಧಾನಮಂಡಲದಲ್ಲಿ ಹೋರಾಟ ಮಾಡಲಿದೆ ಎಂದು ಯಡಿಯೂರಪ್ಪ ವಾಗ್ದಾನ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಮುಖಂಡ ಗೋವಿಂದ ಕಾರಜೋಳ ಸೇರಿ ಬಿಜೆಪಿಯ 25ಕ್ಕೂ ಹೆಚ್ಚು ಶಾಸಕರು ಪ್ರತಿಭಟನಾನಿರತರ ಮನವಿ ಆಲಿಸಿದರು.
ಸಂಘದ ಅಧ್ಯಕ್ಷ ಸಂಜೀವ್ ಹಟ್ಟಿಕೊಳೆ ಮಾತನಾಡಿ, ನಾವು ಉತ್ಪಾದನೆ ಮಾಡುವ ಶೇ. 90 ರಷ್ಟು ಉತ್ಪನ್ನಗಳನ್ನು ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಭೂಸೇನಾ ನಿಗಮ, ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಸೇರಿ ವಿವಿಧ ಇಲಾಖೆಗಳು, ನಿರ್ಮಿತಿ ಕೇಂದ್ರಗಳು ಮತ್ತಿತರ ಕಡೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಆದರೆ ರಾಜಧನವನ್ನು ಮಾಲೀಕರಿಂದ ವಸೂಲಿ ಮಾಡಲಾಗುತ್ತಿದ್ದು, ಇದರಿಂದ ಹೆಚ್ಚಿನ ಹೊರೆಯಾಗುತ್ತಿದೆ. ಇದೀಗ ಡ್ರೋಣ್ ಸರ್ವೆ ಮೂಲಕ ನಮ್ಮ ಮೇಲೆ ಸಮೀಕ್ಷೆ ನಡೆಸಿ ಭಾರಿ ದಂಡ ವಿಧಿಸಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯ ನೇತೃತ್ವದ ಕೆಲ ಅಧಿಕಾರಿ ಶಾಹಿಗಳು ಕಲ್ಲು ಗಣಿಗಾರಿಕೆಯಂತಹ ಸಣ್ಣ ಉದ್ಯಮವನ್ನು ಮುಗಿಸಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಉದ್ಯಮದಲ್ಲಿ 25 ಲಕ್ಷ ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತೊಡಗಿಕೊಂಡಿದ್ದು, ಅವರ ಬದುಕಿನ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ. ಸರ್ಕಾರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡು ಹಿಡಿಯಬೇಕು ಎಂದು ಸಂಘದ ಅಧ್ಯಕ್ಷರು ಒತ್ತಾಯಿಸಿದರು.
ಉದ್ದಿಮೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ, 1994 ರ ಗಣಿ ಕಾಯಿದೆಗೆ ಅವೈಜ್ಞಾನಿಕವಾಗಿ ತಿದ್ದುಪಡಿ ತರುವ ಮೂಲಕ ಸ್ಟೋನ್ ಕ್ರಷರ್ಸ್ ಮತ್ತು ಕ್ವಾರಿ ಉದ್ದಿಮೆದಾರರಿಗೆ ಅನ್ಯಾಯ ಮಾಡಲಾಗಿದೆ. ಗಣಿ ಇಲಾಖೆಯ ಮುಖ್ಯಕಾರ್ಯದರ್ಶಿಗಳು ರಾಜಸ್ಥಾನ ಸೇರಿದಂತೆ ಹೊರರಾಜ್ಯದ ಉದ್ದಿಮೆದಾರರಿಗೆ ಹೆಚ್ಚು ಅನುಕೂಲ ಕಲ್ಪಿಸಲು ರಾಜ್ಯದ ಉದ್ದಿಮೆದಾರರ ಮೇಲೆ 5 ಪಟ್ಟು ಹೆಚ್ಚಿನ ತೆರಿಗೆ ವಿಧಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಕಲ್ಲು ಗಣಿಗಾರಿಕೆಗೆ 30 ರೂ. ರಾಜಧನ ಇದ್ದು, ರಾಜ್ಯದಲ್ಲಿ 100 ರೂ.ಗೆ ನಿಗದಿಮಾಡಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಸಿದ್ದರಾಜು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಉಪಾಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ಭಾಸ್ಕರ್, ಸಂಘಟನಾ ಕಾರ್ಯದರ್ಶಿ ಕೆ.ವಿ. ಚೌಧರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
