ಚಳ್ಳಕೆರೆ
ಸಮಾಜದಲ್ಲಿ ಅಮೂಲಾಗ್ರ ಬದಲಾವಣೆಯಲ್ಲಿ ಪತ್ರಿಕೆಗಳು ಪ್ರಧಾನ ಪಾತ್ರವಹಿಸುತ್ತವೆ. ಪ್ರತಿಯೊಂದು ಹಂತದಲ್ಲೂ ಸಮಾಜದ ಅನೇಕ ಸಮಸ್ಯೆಗಳ ನಿವಾರಣೆಯಲ್ಲಿ ಲೇಖನಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತದೆ. ಚುನಾಯಿಯ ಜನಪ್ರತಿನಿಧಿಗಳೂ ಸೇರಿ ಎಲ್ಲರೂ ಸಹ ಪತ್ರಿಕೆಗಳ ವರದಿಗಳ ಬಗ್ಗೆ ಚಿಂತನಶೀಲಾರಾಗಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಸೋಮವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಭಾರತದ ರಾಜಕಾರಣದಲ್ಲಿ ಪತ್ರಿಕೆಗಳ ಪಾತ್ರ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತಾಲ್ಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚಳ್ಳಕೆರೆ ಕ್ಷೇತ್ರವೂ ಸೇರಿದಂತೆ ರಾಜ್ಯದ ಒಟ್ಟಾರೆ ಬೆಳವಣಿಗೆಯ ಬಗ್ಗೆ ಮುದ್ರಣ ಮಾದ್ಯಮ ಯಶಸ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂದಿಗೂ ಸಹ ನಾನು ಕ್ಷೇತ್ರಕ್ಕೆ ಸಂಬಂಧಪಟ್ಟ ಹಲವಾರು ವಿಷಯಗಳ ಬಗ್ಗೆ ಪತ್ರಿಕೆಗಳ ವರದಿಯನ್ನೇ ಆಧರಿಸಿ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳಲ್ಲದೆ ಶೋಷಿತ ಮತ್ತು ತುಳಿತಕ್ಕೆ ಒಳಗಾದ ಎಲ್ಲಾ ಸಮುದಾಯಗಳ ಬಗ್ಗೆ ಪತ್ರಿಕೆ ವಿಶೇಷ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿರುವುದು ನನಗೆ ಸಂತಸ ತಂದಿದೆ.
ಯಾವುದೇ ವ್ಯಕ್ತಿಯ ವಿರುದ್ದ ವರದಿಗಳು ಪ್ರಕಟವಾದಾಗ ಅವುಗಳನ್ನು ಸ್ನೇಹ ಭಾವದಿಂದ ಸ್ವೀಕರಿಸಿಬೇಕೆ ವಿನಃ ಪತ್ರಕರ್ತರನ್ನು ಮತ್ತು ವರದಿಯನ್ನು ದೂಷಣೆ ಮಾಡಬಾರದು ಎಂದರು. ಅನೇಕ ಸೌಲಭ್ಯಗಳ ಕೊರತೆಗಳ ನಡುವೆಯೂ ಸಹ ಪತ್ರಕರ್ತರು ಇಂದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಬೆನ್ನೇಲುಬಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವೆಂದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಈ ಹಿಂದೆ ಪತ್ರಿಕೆಗಳ ವರದಿಗಳೇ ಸಮಾಜದ ಮತ್ತು ಜನರಲ್ಲಿ ಗಾಡವಾದ ಪರಿಣಾಮವನ್ನು ಬೀರುವಲ್ಲಿ ಪ್ರಧಾನ ಪಾತ್ರವಹಿಸಿದ್ದವು.
ನಾಡಿನ ಎಲ್ಲಾ ಪತ್ರಿಕೆಗಳು ಸಹ ಸಮಾಜದ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಸರ್ಕಾರ ಪೊಳ್ಳು ಹಾಗೂ ಸುಳ್ಳು ಆಶ್ವಾನೆಗಳ ಬಗ್ಗೆ ಸಂಪಾದಕಿಯ ಲೇಖನಗಳು ಪ್ರಕಟವಾಗುತ್ತಿದ್ದವು. ಸಾರ್ವಜನಿಕರಿಗೆ ಅಂದಿನ ಪತ್ರಿಕಾ ವರದಿಗಳೇ ಮಾರ್ಗದರ್ಶವಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿವೆ ಎಂಬ ಬಗ್ಗೆ ಸಂಶಯ ಮೂಡುತ್ತಿದೆ. ಮೊನಚಾದ ಬರಹಗಳಿಲ್ಲ, ನೈಜ ಸ್ಥಿತಿಯನ್ನು ವಿವರಣೆ ಮಾಡುವ ಬರವಣಿಗೆ ಮರೆಯಾಗುತ್ತಿವೆ. ಧೀಮಂತ ಪತ್ರಕರ್ತರ ಸರಣಿ ಲೇಖನಗಳು ಸಮಾಜಕ್ಕೆ ರಕ್ಷಾಕವಚದಂತೆ ಇದ್ದವು.
ಆದರೆ, ಇಂದು ಪತ್ರಿಕೆಗಳ ಸಂಖ್ಯೆ, ದೂರದರ್ಶನ ಚಾನಲ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಮಾಜದ ವಾಸ್ತವ ಸ್ಥಿತಿಯನ್ನು ತಿಳಿಸಲು ಸಾಧ್ಯವಾಗುತ್ತಿಲ್ಲ. ರಾಜಕಾರಣದಲ್ಲಿ ಪತ್ರಿಕೆಗಳ ಪಾತ್ರ ಪ್ರಸ್ತುತ ದಿನಗಳಲ್ಲಿ ಯಾವ ನಿಟ್ಟಿನಲ್ಲಿ ಸಾಗುತ್ತಿದೆ ಎಂಬುವುದನ್ನು ಊಹಿಸಲು ಅಸಾಧ್ಯವಾಗಿದೆ. ಪತ್ರಿಕೆಗಳ ವಸ್ತು ನಿಷ್ಠ ಬರವಣಿಗೆಗಳು ಮಾತ್ರ ಈ ಸಮಾಜಕ್ಕೆ ಹೊಸ ಶಕ್ತಿ, ಆಯಾಮವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಸಂಘದ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಪತ್ರಕರ್ತ ಜನತೆಯ ನಿರೀಕ್ಷೆಯನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಸುತ್ತಾನೆ. ಹಲವಾರು ಸಮಸ್ಯೆಗಳ ನಡುವೆಯೂ ಸಹ ಪತ್ರಿಕಾ ಕ್ಷೇತ್ರದ ಗೌರವವನ್ನು ರಕ್ಷಣೆ ಮಾಡುವಲ್ಲಿ ಯಶಸ್ಸಿಯಾಗಿದ್ಧಾನೆ. ಸರ್ಕಾರ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ವೈ.ಪ್ರಕಾಶ್, ಬಿ.ಮಲ್ಲಿಕಾರ್ಜುನ, ಸಿ.ಕವಿತಾ, ಓ,ಸುಜಾತ, ಸುಮಾಭರಮಣ್ಣ, ಸಿ.ಬಿ.ಜಯಲಕ್ಷ್ಮಿ, ಸುಮ್ಮಕ್ಕ, ಎಂ.ಜೆ.ರಾಘವೇಂದ್ರ, ಬಿ.ಚಳ್ಳಕೆರಪ್ಪ, ಆರ್.ಮಂಜುಳಾ, ಕೆ.ಜಿ.ನಾಗರಾಜು, ದುಗ್ಗಾವರ ಎಲ್ಐಸಿ ರಂಗಸ್ವಾಮಿ, ಅತಿಕೂರ್ ರೆಹಮಾನ್, ಎಸ್.ಎಚ್.ಸೈಯದ್, ಮುಜೀಬುಲ್ಲಾ, ನವೀನ್, ಜಗದೀಶ್, ಮುಂತಾದವರು ಭಾಗವಹಿಸಿದ್ದರು.