ಕೊರಟಗೆರೆ
ಜಗತ್ತಿಗೆ ಆದರ್ಶವಾಗಿ ಕೋಟ್ಯಂತರ ಭಕ್ತರ ಹೃದಯದಲ್ಲಿ ವಿಶ್ವರತ್ನರಾಗಿ ನೆಲೆಸಿರುವ ಕಲ್ಪತರು ನಾಡಿನ ನಡೆದಾಡುವ ದೇವರಿಗೆ ಕೇಂದ್ರ ಸರಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಆಗ್ರಹ ಮಾಡಿದರು.
ಅವರು ಪಟ್ಟಣದ ಪಪಂ ಆವರಣದಲ್ಲಿ ಭಕ್ತರ ಸಹಕಾರದಿಂದ ಗುರುವಾರ ಏರ್ಪಡಿಸಲಾಗಿದ್ದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 11ನೇ ದಿನದ ಪುಣ್ಯಸ್ಮರಣೆ ಮತ್ತು ಅನ್ನದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲ್ಪತರು ನಾಡಿನಲ್ಲಿ ಕೋಟ್ಯಂತರ ಮಕ್ಕಳಿಗೆ ಅನ್ನ, ಅಕ್ಷರ ಮತ್ತು ಆಶ್ರಯ ನೀಡಿದ ಕರ್ನಾಟಕರತ್ನ ವಿಶ್ವಕ್ಕೆ ಇಂದು ಮಾದರಿ ಆಗಿದ್ದಾರೆ. ಎಂದು ತಿಳಿಸಿದರು.
ರಾಜಕೀಯ ವಿಚಾರದ ಚರ್ಚೆ ಮತ್ತು ಜಾತಿ ಭೇದಭಾವ ಇಲ್ಲದೆ ಸಕಲ ಮಾನವ ಕುಲಕ್ಕೆ ಅನ್ನ ಮತ್ತು ಆಶ್ರಯ ನೀಡಿದ ಸ್ವಾಮೀಜಿಯವರ 111 ವರ್ಷದ ಜೀವನದ ಅವಧಿ ಜಗತ್ತಿಗೆ ಆದರ್ಶವಾಗಿದೆ. ಕಲ್ಪತರು ನಾಡಿನ ದೇವರ ಒಡನಾಟದಲ್ಲಿ ನಾವು ಜೀವಿಸಿದ ಜೀವನವೇ ನಮ್ಮೆಲ್ಲರ ಸೌಭಾಗ್ಯವಾಗಿದೆ. ಬರಗಾಲದ ಪರಿಸ್ಥಿತಿಯಲ್ಲಿಯೂ ಸಹ ದೇವರ ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಯಾವುದೇ ಬರಗಾಲ ಇರಲಿಲ್ಲ ಎಂದು ಹೇಳಿದರು.
ಕೊರಟಗೆರೆ ಪಟ್ಟಣದ ಪಪಂ ಆವರಣದಲ್ಲಿ ಸಮಸ್ತ ಭಕ್ತರಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮತ್ತು ಪ್ರಸಾದ ವಿತರಣೆ ಮಾಡಲಾಯಿತು. ತಾಲ್ಲೂಕಿನ ಹೊಳವನಹಳ್ಳಿ, ಹುಲಿಕುಂಟೆ, ಕೋಡ್ಲಹಳ್ಳಿ, ಕೋಳಾಲ, ಕ್ಯಾಮೇನಹಳ್ಳಿ, ಜಂಪೇನಹಳ್ಳಿ, ತೋವಿನಕೆರೆ ಮತ್ತು ಸಿದ್ದರಬೆಟ್ಟ ಮಠದಲ್ಲಿ ಶ್ರೀಗಳ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯರಾದ ಸಿದ್ದಮಲ್ಲಪ್ಪ, ಕರವೇ ನಟರಾಜು, ಬಲರಾಮಯ್ಯ, ಓಬಳರಾಜು, ನರಸಿಂಹಪ್ಪ, ಗಣೇಶ್, ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರಣ್ಣ, ಮುಖಂಡರಾದ ಸ್ಮಾಲ್ರಘು, ಆನಂದ್, ರುದ್ರಪ್ರಸಾದ್, ಮಲ್ಲಿಕಾರ್ಜುನ್, ಲಾರಿ ಮಲ್ಲಣ್ಣ, ಸುರೇಶ್, ನಾಗೇಂದ್ರ, ಆರಾಧ್ಯ, ಶಿವಾನಂದ, ಇರ್ಷಾದ್, ರವಿ, ಮಲ್ಲಣ್ಣ ಸೇರಿದಂತೆ ಇತರರು ಇದ್ದರು.