ಹರಿಹರ:
ಜಡತ್ವವನ್ನು ಒದ್ದು ಚಲನಶೀಲ ಜೀವನ ನೀಡಿದ ಖ್ಯಾತಿ ಜಾಗತಿಕ ಸಂತರಿಗೆ ಸಲ್ಲುತ್ತದೆ ಎಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಆರೋಗ್ಯ ಮಾತೆ ಚರ್ಚ್ನಲ್ಲಿ ಕ್ರಿಸ್ತ ಜಯಂತಿ ನಿಮಿತ್ತ ಆಯೋಜಿಸಿದ್ದ ಕ್ರಿಸ್ತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಾನವ ಸಮಾಜಕ್ಕೆ ಜಡತ್ವವೇ ವೈರಿಯಾಗಿದೆ. ಕ್ರಿಯೆ ಇಲದೆಡೆ ಜಡತ್ವ ಮನೆ ಮಾಡುತ್ತದೆ. ಕ್ರಿಯೆ ಇರುವೆಡೆ ಜೀವನ ಉಜ್ವಲವಾಗುತ್ತದೆ.
ಜಡತ್ವವನ್ನು ಒದ್ದು ಕ್ರಿಯೆಗೆ ಚಾಲನೆ ನೀಡಿದ ದಾರ್ಶನಿಕರು, ಸಂತರ ಪೈಕಿ ಯೇಸು ಕ್ರಿಸ್ತರು ಒಬ್ಬರು. ಬುದ್ಧ, ಮಹಾವೀರ, ಮೊಹಮ್ಮದ್ ಪೈಗಂಬರ್, ನಂತರದ ಅವಧಿಯಲ್ಲಿ ಬಸವಣ್ಣ ಹಾಗೂ ಇತರರು ಈ ಪಟ್ಟಿಯಲ್ಲಿ ಸೇರುತ್ತಾರೆ. ನಮ್ಮ ಧರ್ಮ ಗ್ರಂಥಗಳಾದ ಬೈಬಲ್, ಖುರ್ಆನ್, ಭಗದ್ಗೀತೆಯೆ ನಮ್ಮ ಉಸಿರಾಗಬೇಕು ಎಂದರು.
ಆಕೃತಿ ಮತ್ತು ಕೃತಿ: ಆಕೃತಿ ಇದ್ದಂತೆ ಮನುಷ್ಯನ ಕೃತಿ ಇಲ್ಲ. ಆಕೃತಿಯಲ್ಲಿ ಮಾನವರಾಗಿರುವಂತೆಯೆ ಕೃತಿಯಲ್ಲೂ ಮಾನವರಾಗಬೇಕು. ದುಷ್ಟತನ, ಧ್ವೇಷಾಸೂಯೆ, ಅನಾಗರೀಕತೆ ಬಿಡಬೇಕು. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂಬ ಬಸವಣ್ಣರ ಮಾತು ನಮಗೆಲ್ಲಾ ಆದರ್ಶವಾಗಬೇಕು.
ಭಾವೈಕ್ಯತೆಯೆ ಭಾರತವನ್ನು ಭದ್ರವಾಗಿಟ್ಟಿದೆ. ಭಾವೈಕ್ಯತೆಯನ್ನು ಕದಡದಂತೆ ಕಾಪಾಡಬೇಕು. ನಮ್ಮ ಧರ್ಮಗಳನ್ನು ಅನುಸರಿಸುತ್ತಾ, ಇತರೆ ಧರ್ಮ ಹಾಗೂ ಧರ್ಮೀಯರನ್ನು ಗೌರವಿಸುವುದೆ ನಿಜವಾದ ಭಾವೈಕ್ಯತೆಯಾಗಿದೆ ಎಂದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ಯೇಸು ಕ್ರಿಸ್ತರ ಪ್ರಭಾವದಿಂದಾಗಿ ಸಹನೆ, ಕ್ಷಮೆ, ಮಾನವೀಯತೆ, ಸಹೋದರತ್ವದಂತಹ ಮಾನವೀಯ ಮೌಲ್ಯಗಳು ಪಸರಿಸಿವೆ. ಈ ಬೋಧನೆಗಳ ಪ್ರಭಾವದಿಂದಾಗಿ ಕ್ರೈಸ್ತ ಸಂಸ್ಥೆಗಳು ಭಾರತದಲ್ಲಿ ಶಿಕ್ಷಣ ಪ್ರಸಾರದಲ್ಲಿ ಮಹತ್ವದ ಕಾರ್ಯಗಳನ್ನು ಮಾಡಿವೆ ಎಂದರು.
ಕುವೆಂಪು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಟಿ.ಇನಾಯತ್ ಉಲ್ಲಾ ಮಾತನಾಡಿ, ಯಾವ ಧರ್ಮವೂ ಅನ್ಯ ಧರ್ಮೀಯರನ್ನು ಧ್ವೇಶಿಸಿ ಎಂದು ಹೇಳಿಲ್ಲ. ಒಂದೊಂದು ಧರ್ಮವನ್ನು ಒಂದೊಂದು ನದಿಯಾಗಿ ಸಾಂಕೇತಿಸಿಕೊಂಡರೆ ಅವುಗಳೆಲ್ಲಾ ಸಮುದ್ರವನ್ನು ಸೇರಿ ಐಕ್ಯಗೊಳ್ಳುತ್ತವೆ. ಸಮುದ್ರದ ರೀತಿಯಲ್ಲಿ ಎಲ್ಲಾ ಧರ್ಮಗಳ ಅವಲಂಬಿಗಳು ಭಾವೈಕ್ಯತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆವಹಿಸಿದ್ದ ಶಿವಮೊಗ್ಗ ವಿಬಾಗ ಬಿಷಪ್ ರೆವೆರೆಂಡ್ ಡಾ.ಫ್ರಾನ್ಸಿಸ್ ಸೆರಾವೋ ಮಾತನಾಡಿ, ಕ್ರಿಸ್ತರ ಬೋಧನೆಯ ಸಾಕಾರಕ್ಕೆ ನಾವೆಲ್ಲಾ ಶ್ರಮಿಸಬೇಕಿದೆ. ಕಷ್ಟಗಳನ್ನು ಸಹಿಸಿಕೊಂಡು ಇತರರಿಗೆ ಸಂತಸ ನೀಡುವ ಕ್ರಿಸ್ತರ ಬದುಕು ನಮಗೆಲ್ಲಾ ದಾರಿದೀಪವಾಗಬೇಕೆಂದರು.
ಐಆರ್ಡಿ ಕಮಿಷನ್ನ ನಿರ್ದೇಶಕ ಫಾ.ಜೆರೋಮ್ ಮೊರಾಸ್, ಸೇಂಟ್ ಮೇರೀಸ್ ಕಾನ್ವೆಂಟ್ ಸಂಸ್ಥೆ ಮುಖ್ಯಸ್ಥೆ ರೆವೆರೆಂಡ್ ಸಿಸ್ಟರ್ ಫ್ಲೋರಾ, ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ರೆವೆರೆಂಡ್ ಫಾ.ಎರಿಕ್ ಮಾಥಿಯಸ್ ಇತರರು ಮಾತನಾಡಿದರು.
ಶಾಲಾ ಮಕ್ಕಳು ಕ್ರಿಸ್ತ ಜಯಂತಿ ಹಿನ್ನೆಲೆಯಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಹಾಡಿದರು.
ದೀಪಾಲಂಕಾರದಿಂದ ಕಂಗೊಳಿಸುತಿದ್ದ ಚರ್ಚ್ನಲ್ಲಿ ನೂರಾರು ಕ್ರೈಸ್ತ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಕ್ರಿಸ್ಮಸ್ ಆಚರಿಸಿದರು.
ಹಬ್ಬದ ನಿಮಿತ್ತ ಸೋಮವಾರ ರಾತ್ರಿಯಿಂದಲೇ ವಿವಿಧ ಧಾರ್ಮಿಕ ಚಟುವಟಿಕೆಗಳು ಜರುಗಿದವು. ಮಧ್ಯರಾತ್ರಿ 12ಕ್ಕೆ ವಿಶೇಷ ಪೂಜೆ ನೆರವೇರಿಸಿ, ಪ್ರವಚನ ನಡೆಸುವ ಮೂಲಕ ಮಹಾತ್ಮ ಯೇಸುವಿನ ಜನ್ಮದಿನಾಚರಣೆಯನ್ನು ಭಕ್ತಜನರು ಸಂಭ್ರಮ-ಸಡಗರದಿಂದ ಆಚರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
